ಸಾಲ ತೀರಿಸಲು ಕದ್ದ ಸಾಯಿಬಣ್ಣನಿಗೆ ಬಿತ್ತು ಒದೆ

ಕಳ್ಳ ಸಾಯಿಬಣ್ಣನನ್ನು ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ. ಮಂಗಳವಾರ ನಸುಕಿನಲ್ಲಿ ಗ್ರಾಮದ ಚಿಕ್ಕ ಹೋಟೆಲ್ ಗೆ ಹೋಗಿದ್ದ ಸಾಯಿಬಣ್ಣ ಅಲ್ಲಿದ್ದ ಮಹಿಳೆ ಅಡಿವೆಮ್ಮಗೆ ತನ್ನ ಬಳಿಯಿದ್ದ ನಕಲಿ ಪಿಸ್ತೂಲು ಹಾಗೂ ಚಾಕು ತೋರಿಸಿ ಆಕೆಯ ಬಳಿಯಿದ್ದ 50 ಸಾವಿರ ರುಪಾಯಿ ನಗದು ಹಾಗೂ 50 ಗ್ರಾಮ್ ಚಿನ್ನ ದೋಚಿ ಪರಾರಿಯಾಗಿದ್ದ ಎಂದು ಆರೋಪಿಸಲಾಗಿದೆ.
ಆತನ ಬೆನ್ನು ಹತ್ತಿದ್ದ ಗ್ರಾಮದ ಯುವಕರು ಸುಮಾರು 18 ಕಿ.ಮೀ. ದೂರ ಬೆನ್ನಟ್ಟಿ ಹಿಡಿದು ತಂದಿದ್ದಾರೆ ಆ ನಂತರ ಆತನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದಾರೆ. ಗ್ರಾಮಸ್ಥರ ಆರೋಪವನ್ನು ನಿರಾಕರಿಸಿರುವ ಸಾಯಿಬಣ್ಣ ತಾನು ಅರಕೇರಾ ಗ್ರಾಮದಲ್ಲಿ ಕಳ್ಳತನ ಮಾಡಲೇ ಇಲ್ಲ. ಮಹಿಳೆಯ ಚಿನ್ನ, ನಗದು ಕದ್ದಿಲ್ಲ ಎಂದು ವಾದ ಮಂಡಿಸುತ್ತಾನೆ. ಆದರೆ, ಕಳ್ಳತನ ಮಾಡಿದ್ದು ಬೇರೆ ಕಡೆಗೆ ಎಂಬುದನ್ನು ಒಪ್ಪುತ್ತಾನೆ.
ತಾನು 90 ಸಾವಿರ ಸಾಲ ಮಾಡಿಕೊಂಡಿದ್ದರಿಂದ ಮಾಧವಾರ, ಕಾಳಬೆಳಗುಂದಿ, ಮೈಲಾಪುರ ಮುಂತಾದ ಗ್ರಾಮಗಳಲ್ಲಿ ಕಡೆ ಕಳ್ಳತನ ಮಾಡಿಕೊಂಡು ಮಂಗಳವಾರ ನಸುಕಿನ ಜಾವ 3 ಗಂಟೆಗೆ ಮೈಲಾಪೂರ ಗ್ರಾಮದಲ್ಲಿ ಹಿರೋಹೊಂಡಾ ಬೈಕ್ ಕಳ್ಳತನ ಮಾಡಿಕೊಂಡು ಅರಕೇರಾ ಗ್ರಾಮಕ್ಕೆ ಬಂದಿದ್ದೆ. ಮಹಿಳೆಯ ಹೋಟೆಲಿನಲ್ಲಿ ಚಹಾ ಸೇವಿಸಿ ಹೊರಬಂದಾಗ ಒಮ್ಮೆಲೆ ಗ್ರಾಮಸ್ಥರು ತನ್ನನ್ನು ಕಳ್ಳತನದ ಆರೋಪದ ಮೇಲೆ ಹಿಡಿದು ತಂದು, ಬಂಧಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನುತ್ತಾನೆ.
ಕಳ್ಳನ ಬಂಧನದ ಕುರಿತಂತೆ ಮಾಹಿತಿ ಸಿಕ್ಕ ನಂತರ ಸ್ಥಳಕ್ಕೆ ಬಂದ ಗುರುಮಠಕಲ್ ಪೊಲೀಸರು ಸಾಯಿಬಣ್ಣನನ್ನು ಗ್ರಾಮಸ್ಥರ ಬಂಧನದಿಂದ ಬಿಡಿಸಿಕೊಂಡು ಲಾರಿಯಲ್ಲಿ ಹತ್ತಿಸಿಕೊಂಡು ಹೋದರು, ಸ್ಥಳದಲ್ಲಿ ಸಿಕ್ಕ ನಕಲಿ ಪಿಸ್ತೂಲು, ಚಾಕು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ನಡುವೆ ಯಾದಗಿರಿಯಿಂದ ಅರಕೇರಾ ಗ್ರಾಮಕ್ಕೆ ಹೋಗಿದ್ದ ವಿಷ್ಣು ದಾಸನಕೇರಿ ಎನ್ನುವ ಯುವಕ ಹಾಗೂ ಆತನ ಸ್ನೇಹಿತ ಬಸವನಗೌಡ ಎನ್ನವವವರು ಕಳ್ಳತನಕ್ಕೆ ಕುಮ್ಮಕ್ಕು ನೀಡಿದ್ದಾರೆಂದು ಭಾವಿಸಿ ಅವರ ಮೇಲೂ ಗ್ರಾಮಸ್ಥರು ಹಲ್ಲೆ ಮಾಡಿದ್ದು, ಘಟನೆಯಲ್ಲಿ ಬಸವನಗೌಡನಿಗೆ ತಲೆಗೆ ಏಟು ಬಿದ್ದಿದೆ. ಕಳ್ಳತನದ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ತಮ್ಮದೂ ಚಿನ್ನ ಹಾಗೂ ಹಣ ಕಳ್ಳತನವಾಗಿತ್ತು. ಅಲ್ಲದೇ ಕಳ್ಳನನ್ನು ಹಿಡಿದಿರುವ ಬಗ್ಗೆ ಪರಿಚಯದವರಿಂದ ಮಾಹಿತಿ ಬಂದಿದ್ದು ಕಳ್ಳತನವಾದ ವಸ್ತುಗಳು ಸಿಗಬಹುದು ಎಂದು ಭಾವಿಸಿ ಇಲ್ಲಿಗೆ ಬಂದಾಗ ತಪ್ಪಾಗಿ ಅರ್ಥೈಸಿಕೊಂಡಿರುವ ಗ್ರಾಮಸ್ಥರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹಲ್ಲೆಗೊಳಗಾಗದ ವಿಷ್ಣು ದಾಸನಕೇರಿ ಹೇಳುತ್ತಾರೆ.












Click it and Unblock the Notifications