ಬೆಂಗಳೂರು-ಆನೇಕಲ್ ಎಕ್ಸಪ್ರೆಸ್ ಬಸ್ ನನಸಾದೀತೇ?

ಏಕೆಂದರೆ ಬೆಂಗಳೂರು-ಆನೇಕಲ್ ಮಧ್ಯೆ ದಿನನಿತ್ಯ ಸಾವಿರಾರು ಮಂದಿ ಉದ್ಯೋಗಿಗಳು, ವ್ಯಾಪಾರಿಗಳು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ಅವರೆಲ್ಲ ತಡೆರಹಿತ ಕೆಎಸ್ಆರ್ ಟಿಸಿ ಬಸ್ಸಿಗೆ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಅದರಿಂದ ಅಮೂಲ್ಯ ಸಮಯ, ದೈಹಿಕ ಶ್ರಮ ಜತೆಗೊಂದಿಷ್ಟು ಇಂಧನವನ್ನು ಉಳಿತಾಯ ಮಾಡಬಹುದು ಎಂಬುದು ಆ ಪ್ರಯಾಣಿಕರ ಮನದಾಳದ ಆಶಯ.
ಈ ಬಗ್ಗೆ ಬೆಂಗಳೂರು-ಆನೇಕಲ್ ಬಸ್ ಪ್ರಯಾಣಿಕರ ಸಂಘದ ಅಧ್ಯಕ್ಷ ನಾಗರಾಜ್ KSRTC ಸಂಸ್ಥೆಯ ಗಮನ ಸೆಳೆದಿದ್ದಾರೆ. ತಕ್ಷಣ ಈ ಮಾರ್ಗದಲ್ಲಿ ನಾನ್-ಸ್ಟಾಪ್ ಬಸ್ಸುಗಳನ್ನು ಓಡಿಸಿ ಎಂಬುದು ಸಂಘದ ಆಗ್ರಹವಾಗಿದೆ.
ನಾಲ್ಕೈದು ದಶಕಗಳಿಂದ ಆನೇಕಲ್ಲಿನಲ್ಲಿ ಕೆಎಸ್ಆರ್ ಟಿಸಿ ಡಿಪೋ ಇದೆ. ಆದರೆ ಆನೇಕಲ್ ಜನತೆಗೆ ಇತ್ತೀಚೆಗೆ ಈ ಡಿಪೋದಿಂದ ಯಾವುದೇ ಸದುಪಯೋಗವಾಗುತ್ತಿಲ್ಲ. ಸೇವಾ ಮನೋಭಾವವನ್ನು ಗಾಳಿಗೆ ತೂರಿರುವ ಲಾಭಕೋರ ಸಂಸ್ಥೆಗೆ ದುಡ್ಡು ಮಾಡಿಕೊಳ್ಳುವುದೇ ಮುಖ್ಯವಾಗಿದೆ.
ತಮಿಳುನಾಡಿಗೆ ಹೆಚ್ಚುಹೆಚ್ಚು ಬಸ್ಸುಗಳನ್ನು ಓಡಿಸುವುದರಿಂದ ಹೆಚ್ಚು ಲಾಭ ಮಾಡಬಹುದು ಎಂಬುದು ಇಲ್ಲಿನ ಡಿಪೋ ನೀತಿಯಾಗಿದೆ. ಇದರಿಂದ ಸ್ಥಳೀಯರಿಗೆ ಪರದಾಡುವಂತಾಗಿದೆ ಎಂದು ನಾಗರಾಜ್ ಅಲವತ್ತುಕೊಂಡಿದ್ದಾರೆ.
ಇನ್ನಾದರೂ ಸಂಸ್ಥೆಯು ಪ್ರಯಾಣಿಕರ ನೆರವಿಗೆ ಬರಲು ಎಕ್ಸ್ ಪ್ರೆಸ್ ಬಸ್ ಸೇವೆಯನ್ನು ತಕ್ಷಣ ಜಾರಿಗೆ ತರಲಿ ಎಂದು ಪ್ರಯಾಣಿಕರ ಸಂಘ ಆಶಿಸಿದೆ.












Click it and Unblock the Notifications