ರೇಪ್: ವಿದ್ಯಾರ್ಥಿನಿ ಹೇಳಿಕೆ ದಾಖಲು, ಗೆಳೆಯನ ಭೇಟಿ
ನವದೆಹಲಿ, ಡಿ.22: ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ 23 ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಪ್ರಪ್ರಥಮ ಬಾರಿಗೆ ಶನಿವಾರ(ಡಿ.22) ಮ್ಯಾಜಿಸ್ಟ್ರೇಟರ್ ಅವರಿಗೆ ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ. ಸಫ್ದರ್ ಜಂಗ್ ಆಸ್ಪತ್ರೆಯಲ್ಲಿರುವ ವಿದ್ಯಾರ್ಥಿನಿಗೆ ನ್ಯಾಯ ದೊರಕಿಸಿಕೊಡಲು ಅನೇಕ ವಿದ್ಯಾರ್ಥಿ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಈ ವರೆಗೂ ಬರವಣಿಗೆ ಮೂಲಕ ಮಾತ್ರ ಸಂವಹನ ಸಾಧಿಸಿದ್ದ ಯುವತಿ, ಶನಿವಾರ ಆಸ್ಪತ್ರೆಯಲ್ಲೇ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅವರ ಎದುರು ಘಟನೆಯ ಬಗ್ಗೆ ವಿವರಣೆ ನೀಡಿದ್ದಾಳೆ. ಯುವತಿ ಹೇಳಿಕೆಯನ್ನು ದಿಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ.

ಈ ನಡುವೆ ಈ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 6 ಜನ ಆರೋಪಿಗಳನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ಹೇಳಿದ್ದಾರೆ.
ಯುವತಿ ಈಗ ಮಾತನಾಡುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಮಾನಸಿಕವಾಗಿಯೂ ಹೆಚ್ಚಿನ ದೃಢತೆ ಕಂಡು ಬರುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಗೆಳಯನ ಭೇಟಿ: ದುರಂತದ ನಂತರ ಇದೇ ಮೊದಲ ಬಾರಿಗೆ ಯುವತಿಯ ಗೆಳೆಯ ಆಕೆಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಘಟನೆ ನಡೆದಿದೆ.
ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಈತ, ಈ ಘಟನೆಯ ಪ್ರತ್ಯಕ್ಷ ಸಾಕ್ಷಿ ಕೂಡಾ ಆಗಿದ್ದಾರೆ. ದುಷ್ಕರ್ಮಿಗಳಿಂದ ತನ್ನ ಗೆಳತಿಯನ್ನು ರಕ್ಷಿಸಲು ಸಾಧ್ಯವಾಗದೆ ತಾನು ಕೂಡಾ ಹೊಡೆತ ತಿಂದು ಅಸ್ವಸ್ಥನಾಗಿದ್ದನ್ನು ನೆನಪಿಸಿಕೊಂಡಿದ್ದಾರೆ. ಸಂತ್ರಸ್ತ ಯುವತಿಗೆ ಎಲ್ಲಾ ಆರೋಪಿಗಳ ಬಂಧನವಾಗಿದೆ ಎಂದು ಗೆಳೆಯ ತಿಳಿಸಿದ್ದಾರೆ ಎನ್ನಲಾಗಿದೆ.
"ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಆಸ್ಪತ್ರೆಗೆ ಆಗಮಿಸಿದ ನನ್ನ ತಂಗಿ ಗೆಳೆಯ ಸುಮಾರು 5 ನಿಮಿಷ ಕಾಲ ಇಬ್ಬರು ಮಾತು ಕತೆ ನಡೆಸಿದರು. ಆಕೆ ಮುಖದಲ್ಲಿ ಪ್ರಸನ್ನತೆ ಕಂಡು ಬಂದಿದೆ. ಆಕೆ ಗೆಳೆಯ ಬಂದು ಮಾತನಾಡಿಸಿದ್ದು ನಮಗೂ ನೈತಿಕ ಬಲ ತಂದಿದೆ " ಎಂದು ಯುವತಿಯ ಅಣ್ಣ ಹೇಳಿದ್ದಾರೆ.
ಕಳೆದ ವಾರ ಬಸ್ಸಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ್ದರು.
ಶನಿವಾರ(ಡಿ.22) ಬೆಳಗ್ಗೆ ದೆಹಲಿಯಲ್ಲಿ ಪ್ರತಿಭಟನೆಯ ಕಾವು ಏರುತ್ತಿದ್ದು, ಪೊಲೀಸರು ಜಲಫಿರಂಗಿ, ಅಶ್ರುವಾಯು, ಲಾಠಿ ಚಾರ್ಚ್ ಪ್ರಯೋಗಿಸಿದ್ದಾರೆ.
ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ ಇರುವ ರೈಸಿನಾ ಹಿಲ್ಸ್ ಹಾಗೂ ಇಂಡಿಯಾ ಗೇಟ್ತನಕ ಸಫ್ದರ್ ಜಂಗ್ ರಸ್ತೆ ವರೆಗೂ ಪ್ರತಿಭಟನೆ ಹಬ್ಬಿದೆ. ವಿದ್ಯಾರ್ಥಿನಿಯರು ಮಾನವ ಸರಪಳಿ ರಚಿಸಿಕೊಂಡು ಪೊಲೀಸರ ತಡೆಗೋಡೆ ದಾಟಿ ಮುನ್ನುಗ್ಗುತ್ತಿದ್ದರು.












Click it and Unblock the Notifications