ಶೆಟ್ಟರ್ ಸರ್ಕಾರಕ್ಕೆ ಸಂಕ್ರಾಂತಿ ಡೆಡ್ ಲೈನ್

ಉಡುಪಿ ಜಿಲ್ಲೆಯ ಕೊಲ್ಲೂರಿನ ಶ್ರೀಮುಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿರುವ ಯಡಿಯೂರಪ್ಪ ಅವರು ಬಿಜೆಪಿ ಸರ್ಕಾರಕ್ಕೆ ಡೆಡ್ ಲೈನ್ ನೀಡುವಂತೆ ಕೆಜೆಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಬಿಟ್ಟು ಕೆಜೆಪಿ ಸೇರ ಬಯಸಿರುವ ಬೆಂಬಲಿಗ ಶಾಸಕರಿಗೆ ಜ.20ರ ತನಕ ಡೆಡ್ ಲೈನ್ ವಿಧಿಸಲಾಗಿದೆ. ಅಷ್ಟರಲ್ಲಿ ಅವರು ತೀರ್ಮಾನ ಕೈಗೊಂಡರೆ ಸರಿ, ಇಲ್ಲದಿದ್ದರೆ, ಯಡಿಯೂರಪ್ಪ ಅವರೇ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಕೆಜೆಪಿ ಮೂಲಗಳು ಹೇಳಿದೆ.
ಫೆಬ್ರವರಿ 2ನೇ ವಾರದಲ್ಲಿ ಬಜೆಟ್ ಮಂಡನೆ ಮಾಡಿ ಎಲ್ಲಾ ವರ್ಗದ ಜನತೆಯನ್ನು ತೃಪ್ತಿಪಡಿಸಲು ಬಿಜೆಪಿ ಯೋಜಿಸಿತ್ತು. ಈ ಮೂಲಕ ಈ ವರೆಗೂ ಜನಪ್ರಿಯ ಬಜೆಟ್ ಮಂಡಿಸುವ ಮೂಲಕ ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಂಡಿದ್ದ ಯಡಿಯೂರಪ್ಪ ಅವರಿಗೆ ಪೆಟ್ಟು ನೀಡಲು ಬಿಜೆಪಿ ನಿರ್ಧರಿಸಿತ್ತು.
ಆದರೆ, ಇದುವರೆವಿಗೂ ಬಿಜೆಪಿ ಸರ್ಕಾರ ಬೀಳಿಸುವುದಿಲ್ಲ. ನಾವೇ ಶೆಟ್ಟರ್ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದ್ದು, ನಾವೇ ಕೆಳಗಿಳಿಸುವುದಿಲ್ಲ ಎಂದು ಯಡಿಯೂರಪ್ಪ ಅವರು ಹೇಳುತ್ತಿದ್ದರು.
ಈಗ ತಮ್ಮ ಮಾತಿನ ವರಸೆ ಬದಲಾಯಿಸಿದ್ದು, ಶೆಟ್ಟರ್ ಸರ್ಕಾರ ಉರುಳಿಸುವ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಕಾಲದ ಯೋಜನೆಗಳ ಲಾಭ ಪಡೆಯಲು ಶೆಟ್ಟರ್ ಸರ್ಕಾರ ಯತ್ನಿಸುತ್ತಿದೆ. ಬಜೆಟ್ ಮಂಡನೆ ಮೂಲಕ ಯಡಿಯೂರಪ್ಪ ಅವರ ಜನಪ್ರಿಯತೆ ಕಿತ್ತುಕೊಳ್ಳಲು ಬಿಜೆಪಿ ಯತ್ನಿಸಿದೆ ಎಂಬ ಶಂಕೆ ಮೂಡಿರುವ ಹಿನ್ನೆಲೆಯಲ್ಲಿ ಶೆಟ್ಟರ್ ಸರ್ಕಾರ ಉರುಳಿಸುವ ಬಗ್ಗೆ ಕೆಜೆಪಿ ಚಿಂತನೆ ನಡೆಸಿದೆ.
ಅನಂತ್ ಮನೆಯಲ್ಲಿ ತುರ್ತು ಸಭೆ: ಜಗದೀಶ್ ಶೆಟ್ಟರ್ ಸರ್ಕಾರದ ವಿರುದ್ಧ ತನ್ನ ಕೆಜೆಪಿ ರಣತಂತ್ರದ ಸುಳಿವು ನೀಡಿದ ಬೆನ್ನಲ್ಲೇ ಬಿಜೆಪಿ ಕೂಡಾ ತನ್ನ ಕಾರ್ಯತಂತ್ರ ಆರಂಭಿಸಿದೆ.
ಸಂಸದ ಅನಂತ್ ಕುಮಾರ್ ಅವರ ನಿವಾಸದಲ್ಲಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಉಪ ಮುಖ್ಯಮಂತ್ರಿ ಆರ್ ಅಶೋಕ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಆರೆಸ್ಸೆಸ್ ಮುಖಂಡ ಸಂತೋಷ್ ಅವರು ಸಭೆ ಸೇರಿ ಮಹತ್ವದ ಮಾತು ಕತೆ ನಡೆಸಿದ್ದಾರೆ.
ಕೆಜೆಪಿ ವಿರುದ್ಧದ ರಣತಂತ್ರ ಹೆಣೆಯುವುದೇ ಚರ್ಚೆ ವಿಷಯವಾಗಿದ್ದರೂ ಮಾಧ್ಯಮದವರಿಗೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ಹೇಳಿದೆ.












Click it and Unblock the Notifications