ಓಕಳಿಪುರದಲ್ಲಿ ಟ್ರಾಫಿಕ್ ಜಾಮ್ ಇನ್ಮುಂದೆ ಕನಸು
ಬೆಂಗಳೂರು, ಡಿ.20: ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶದ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಓಕಳಿಪುರ ಹಾಗೂ ಮಲ್ಲೇಶ್ವರ ಮಾರ್ಗಗಳು ಚಿಕಿತ್ಸೆಗೆ ಒಳಪಡುತ್ತಿದೆ. ಸಿಗ್ನಲ್ ಫ್ರೀ 8 ರಸ್ತೆಗಳ ಕಾರಿಡಾರ್ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ(ಡಿ.20) ಚಾಲನೆ ನೀಡಲಿದ್ದಾರೆ.
ಸಂಚಾರ ದಟ್ಟಣೆ ನಿಯಂತ್ರಣಕ್ಕಾಗಿ ಬಿಬಿಎಂಪಿ ನಿರ್ಮಾಣದ ಸಿಗ್ನಲ್ ಮುಕ್ತ ಅಷ್ಟಪಥ ಕಾರಿಡಾರ್ ರಸ್ತೆ ಕಾಮಗಾರಿಗೆ ಗುರುವಾರ ಚಾಲನೆ ಸಿಗಲಿದೆ.
ನಗರದ ಪಶ್ಚಿಮ ಹಾಗೂ ಉತ್ತರ ಭಾಗದಿಂದ ಮೆಜೆಸ್ಟಿಕ್ ತಲುಪುವ ಮಾರ್ಗದಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಆರಂಭವಾಗುತ್ತಿರುವ ಈ ಕಾಮಗಾರಿ ಇನ್ನೆರಡು ವರ್ಷಗಳಲ್ಲಿ ಸಂಚಾರ ಮುಕ್ತಗೊಳ್ಳಲಿದೆ.

ನಗರಾಭಿವೃದ್ಧಿ ಸಚಿವ ಎಸ್. ಸುರೇಶಕುಮಾರ್ ಅವರ ಕಲ್ಪನೆಯೊಂದಿಗೆ ಸಾಕಾರಗೊಳ್ಳುತ್ತಿರುವ ಈ ಯೋಜನೆಯಿಂದ ಓಕಳಿಪುರ ಹಾಗೂ ಮಲ್ಲೇಶ್ವರ ಮಾರ್ಗವಾಗಿ ಮೆಜೆಸ್ಟಿಕ್ ತಲುಪುವ ವಾಹನ ಸವಾರರು ನಿಟ್ಟುಸಿರು ಬಿಡಬಹುದಾಗಿದೆ.
ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ಮಾರ್ಗದಲ್ಲಿ ಟ್ರಾಫಿಕ್ ಕಿರಿಕಿರಿಯಿಂದಾಗಿ ವಾಹನ ಸವಾರರು ಅಡ್ಡದಾರಿಗಳನ್ನು ಹಿಡಿಯಬೇಕಿತ್ತು. ಆದರೆ, ವಾಹನಗಳ ಸಂಖ್ಯೆ ಏರುತ್ತಿರುವುದರಿಂದ ಈ ಅಡ್ಡದಾರಿಗಳಲ್ಲೂ ದಟ್ಟಣೆ ಹೆಚ್ಚಿದೆ.
ಅದರಲ್ಲೂ ರಾಜಾಜಿನಗರ, ಬಸವೇಶ್ವರನಗರ, ವಿಜಯನಗರ ಸೇರಿದಂತೆ ಇನ್ನಿತರ ಪ್ರದೇಶಗಳಿಂದ ಅದರಲ್ಲೂ ರೈಲ್ವೆ ನಿಲ್ದಾಣ ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳಿಗೆ ಸುಜಾತಾ ಥಿಯೇಟರ್ ಮೂಲಕ ಹಾದು ಹೋಗಿ ಓಕಳಿಪುರ ಮಾರ್ಗದಲ್ಲೇ ವಾಹನಗಳು ತೆರಳಬೇಕಿರುವುದರಿಂದ ದಟ್ಟಣೆ ಹೆಚ್ಚಾಗಿದೆ.
ಇನ್ನು ಮಲ್ಲೇಶ್ವರ ಸೇರಿದಂತೆ ಸುತ್ತಮುತ್ತಲ ಪ್ರದೇಶದಿಂದ ಮೆಜೆಸ್ಟಿಕ್ ತಲುಪಲು ನಟರಾಜ ಥಿಯೇಟರ್ ಮೂಲಕ ಹಾದು ಹೋಗಿ ಓಕಳಿಪುರ (ಕೃಷ್ಣ ಫ್ಲೋರ್ ಮಿಲ್) ಮಾರ್ಗದಲ್ಲೇ ಸಂಚರಿಸಬೇಕಿದೆ.
ಕೇವಲ ಬಿಎಂಟಿಸಿ ಬಸ್ ಮಾತ್ರವಲ್ಲದೆ ಪರ ಊರುಗಳಿಗೆ ಹೋಗುವ ಮತ್ತು ಅಲ್ಲಿಂದ ಬರುವ ಕೆಎಸ್ಆರ್ಟಿಸಿ ಬಸ್ಗಳೂ ಈ ಮಾರ್ಗದಲ್ಲಿ ಸಂಚರಿಸುವುದರಿಂದ ವಾಹನ ಸಂಚಾರ ಒತ್ತಡದಿಂದಲೇ ಕೂಡಿರುತ್ತದೆ.
ಏನು ವಿಶೇಷ: ಹೆಬ್ಬಾಳ ಮಾದರಿಯ ಮೇಲ್ಸೇತುವೆ ನಗರದ ಹೆಬ್ಬಾಳ ಪ್ರದೇಶದಲ್ಲಿರುವ ಮೇಲ್ಸೇತುವೆಯನ್ನು ಹೋಲುವಂತೆ ಈ ಕಾರಿಡಾರ್ ನಿರ್ಮಾಣ ವಾಗಲಿದ್ದು, ಮೆಜೆಸ್ಟಿಕ್ನಿಂದ ಮಲ್ಲೇಶ್ವರ ಹಾಗೂ ಓಕಳೀಪುರ ಮಾರ್ಗದಲ್ಲಿ ಸಂಚರಿಸುವರಿಗೆ
ಅನುಕೂಲವಾಗುವಂತೆ ಎಂಟು ಪಥಗಳ ಕಾರಿಡಾರ್ ಇದಾಗಿದೆ.
* ಮೂರು ಹಂತದ ಗ್ರೇಡ್ಸಪರೇಟರ್, ಕೆಳಸೇತುವೆ, ಮೇಲ್ಸೇತುವೆ ಹಾಗೂ ಗ್ರೇಡ್ ಹಂತದ ರಸ್ತೆಗಳಿರಲಿವೆ.
* ಈ ಪೈಕಿ ಎರಡು ಭಾಗದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಇರಲಿದ್ದು, ಇದರಡಿ ವಾಹನಗಳು ಸರಾಗವಾಗಿ ಸಂಚರಿಸಬಹುದು.
* ಯೋಜನಾ ವೆಚ್ಚ 115 ಕೋಟಿ ರು
* ಕಾಮಗಾರಿಯ ಗುತ್ತಿಗೆಯನ್ನು ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗೆ ನೀಡಲಾಗಿದೆ. 24 ತಿಂಗಳಲ್ಲಿ ಕಾಮಗಾರಿ ಮೊದಲ ಹಂತ ಪೂರ್ಣಗೊಳ್ಳಲಿದೆ.
* ಮೂರು ಇಲಾಖೆಗಳ ಸಹಯೋಗ ಬಿಬಿಎಂಪಿ, ಬೆಸ್ಕಾಂ ಹಾಗೂ ರೈಲ್ವೆ ಇಲಾಖೆ ಸಹಯೋಗ
* ರೈಲ್ವೆ ಇಲಾಖೆಯ ಸುಮಾರು 3.16 ಎಕರೆಯಷ್ಟು ಜಾಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
* ಎರಡು ಜಾಗಗಳಲ್ಲಿ ರೈಲ್ವೆ ಮೇಲ್ಸೇತುವೆ ಕೂಡ ಬರಲಿದೆ.
ಸುರೇಶ್ ಕನಸು: ಸಚಿವ ಸುರೇಶಕುಮಾರ್ ಅವರು 2008 ರಲ್ಲೇ ಈ ಯೋಜನೆ ಸಂಬಂಧ ಬಿಬಿಎಂಪಿಗೆ ನಿರ್ದೇಶನ ನೀಡಿದ್ದರು. ಇದೀಗ ಈ ಯೋಜನೆಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಲಿದ್ದು, ಉಪಮುಖ್ಯಮಂತ್ರಿ
ಕೆ.ಎಸ್. ಈಶ್ವರಪ್ಪ, ಆರ್.ಅಶೋಕ, ಮೇಯರ್ ಡಿ.ವೆಂಕಟೇಶಮೂರ್ತಿ, ಸಚಿವ ಸುರೇಶಕುಮಾರ್, ಶಾಸಕ ದಿನೇಶ ಗುಂಡೂರಾವ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications