ಈಶ್ವರಪ್ಪಗೆ ಬಂಧನದ ಭೀತಿ; ಜಾಮೀನು ಅರ್ಜಿ ಸಲ್ಲಿಕೆ

ತಮ್ಮ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಹಾಗಾಗಿ ತಮ್ಮ ಬಂಧನಕ್ಕೆ ಅವಕಾಶ ನೀಡದಂತೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಈಶ್ವರಪ್ಪನವರ ತಮ್ಮ ವಕೀಲ ಅಶೋಕ್ ಭಟ್ ಅವರ ಮೂಲಕ ಇಂದು ಮಂಗಳವಾರ ಶಿವಮೊಗ್ಗ ಲೋಕಾಯುಕ್ತ ವಿಶೇಷ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣವೇನು?: ಇದೇ 13 ರಂದು ವಕೀಲ ಬಿ ವಿನೋದ್ ಇಲ್ಲಿನ ಜಿಲ್ಲಾ ವಿಶೇಷ ಲೋಕಾಯುಕ್ತ ನ್ಯಾಯಾಲಯಕ್ಕೆ ಅವರು ಖಾಸಗಿ ದೂರನ್ನು ದಾಖಲೆ ಸಮೇತ ಸಲ್ಲಿಸಿದ್ದರು. ಅಂದು ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಆರ್ ಎಂ ಶೆಟ್ಟರ್ ಅವರು ಆದೇಶ ಕಾಯ್ದಿರಿಸಿದ್ದರು. ಡಿ 15ರಂದು ಆದೇಶ ಪ್ರಕಟಿಸಿದ ನ್ಯಾಯಾಧೀಶರು ಶಿವಮೊಗ್ಗ ಲೋಕಾಯುಕ್ತ ಡಿವೈ.ಎಸ್ಪಿಗೆ ತನಿಖೆಯ ಜವಾಬ್ದಾರಿ ವಹಿಸಿದ್ದರು. ಮುಂದಿನ ಫೆಬ್ರವರಿ 4ರೊಳಗೆ ತನಿಖಾ ವರದಿ ಸಲ್ಲಿಸುವಂತೆಯೂ ಸೂಚಿಸಿದ್ದರು.
ಅದರಂತೆ ಲೋಕಾಯುಕ್ತ ಡಿವೈ.ಎಸ್ಪಿ ಶಿವಕುಮಾರ್ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13 (1) (ಡಿ) (ಇ), 120 (ಬಿ) ಹಾಗೂ ಐಪಿಸಿ ಕಲಂ 420ರ ಅಡಿ ಈಶ್ವರಪ್ಪ ಕುಟುಂಬದ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಸಾಲು ಸಾಲು ಆಸ್ತಿ ಖರೀದಿ: 2006ರಿಂದ 2011ರ ಅವಧಿಯಲ್ಲಿ ಈಶ್ವರಪ್ಪ 3 ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಗ ಬಿಜೆಪಿಯ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಈ ವೇಳೆ ಅವರು ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲು ಅಕ್ರಮವಾಗಿ ಸಂಪತ್ತು ಖರೀದಿಸಿದ್ದಾರೆ. 4,39,898 ಚದರಡಿ ಆಸ್ತಿ ಖರೀದಿಸಿದ್ದು ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಕೋಟ್ಯಂತರ ರೂಪಾಯಿಯದ್ದಾಗಿದೆ ಎಂದು ವಿನೋದ್ ಆರೋಪಿಸಿದ್ದಾರೆ.
ಒಟ್ಟಾರೆ 25 ಆಸ್ತಿ ಖರೀದಿ ಪ್ರಕರಣದ ಕುರಿತು ವಿನೋದ್ ಮಾಹಿತಿ ನೀಡಿದ್ದಾರೆ. ಇದರಲ್ಲಿ ಈಶ್ವರಪ್ಪ-ಕಾಂತೇಶ್ ಜಂಟಿ ಖಾತೆಯಲ್ಲಿ 1, ಈಶ್ವರಪ್ಪ-ಪತ್ನಿ ಜಯಲಕ್ಷ್ಮೀ ಜಂಟಿ ಖಾತೆಯಲ್ಲಿ 1, ಕಾಂತೇಶ್ ಹೆಸರಿನಲ್ಲಿ 16, ಶಾಲಿನಿ ಹೆಸರಿನಲ್ಲಿ 6 ಹಾಗೂ ಕಾಂತೇಶ್-ಶಾಲಿನಿ ಜಂಟಿ ಖಾತೆಯಲ್ಲಿ ಆಸ್ತಿಯನ್ನು ಖರೀದಿಸಿ ನೋಂದಣಿ ಮಾಡಲಾಗಿದೆ.












Click it and Unblock the Notifications