ರಾಹುಲ್ ಬೇರೆ ವೃತ್ತಿ ನೋಡಿಕೊಳ್ಳುವುದು ಒಳಿತು : ಗುಹಾ

ಹೀಗೆಂದು, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ತೋಳೇರಿಸಿ ಸಿದ್ಧವಾಗಿರುವ ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ರಾಜಕೀಯದ ಬಗ್ಗೆ ಷರಾ ಬರೆದಿರುವವರು, ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಿಂದ 'ಭಾರತದ ಅತ್ಯುತ್ತಮ ನಾನ್ ಫಿಕ್ಷನ್ ಬರಹಗಾರ' ಎಂದು ಹೊಗಳಿಸಿಕೊಂಡಿರುವ ಖ್ಯಾತ ಬರಹಗಾರ ರಾಮಚಂದ್ರ ಗುಹಾ.
ಅಂಕಣಕಾರ ವಿವೇಕ್ ಕೌಲ್ ಅವರಿಗೆ ನೀಡಿರುವ ಸಂದರ್ಶನದಲ್ಲಿ, ಸಮಕಾಲೀನ ಇತಿಹಾಸ, ಕ್ರೀಡೆಯ ಸಾಮಾಜಿಕ ಇತಿಹಾಸ ಮತ್ತು ಪರಿಸರ ಇತಿಹಾಸದ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ಬರೆದಿರುವ ಇತಿಹಾಸಕಾರ ರಾಮಚಂದ್ರ ಗುಹಾ ಅವರು, ಭಾರತದ ಪ್ರಸ್ತುತ ರಾಜಕೀಯದ ಸ್ಥಿತಿಗತಿ, ಹಿಂದೂತ್ವ, ಕಾಂಗ್ರೆಸ್ ಚಮ್ಚಾಗಿರಿ ಮುಂತಾದ ವಿಷಯಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದ್ದಾರೆ.
ಇಂದಿರಾಗಾಂಧಿಯಿಂದ ಆರಂಭವಾದ ಕಾಂಗ್ರೆಸ್ ಕುಟುಂಬ ರಾಜಕಾರಣ ಅಳಿವಿನ ಹಂತದಲ್ಲಿದೆ. ಗಾಂಧಿ ಕುಟುಂಬದ ವರ್ಚಸ್ಸು ಸಂಪೂರ್ಣ ನಶಿಸಿ ಹೋಗಿದೆ. ಭಾರತವನ್ನು ತಾಂತ್ರಿಕವಾಗಿ ಉತ್ತುಂಗಕ್ಕೇರಿಸುವ ಬಗ್ಗೆ ಅವರಿಗೆ ದೂರದೃಷ್ಟಿಯಾದರೂ ಇತ್ತು. ಅವರ ಮಗ ರಾಹುಲ್ಗೆ ಅಂತಹ ಐಡಿಯಾಗಳೇ ಇಲ್ಲ. ಸೋನಿಯಾಗೆ ಅಸಾಧಾರಣ ಶಕ್ತಿ ಮತ್ತು ಗುರಿಯಿದೆ. ಆದರೆ, ಕಾಂಗ್ರೆಸ್ನಲ್ಲಿರುವ ಚಮ್ಚಾಗಿರಿಯಿಂದ ಎಲ್ಲವೂ ಹಾಳಾಗುತ್ತಿದೆ. ಅಳಿದುಳಿದಿದ್ದನ್ನು ಬಳಿದುಕೊಂಡು ಹೋಗುವವರೇ ಅಲ್ಲಿದ್ದಾರೆ ಎಂದು ಗುಹಾ ವ್ಯಾಖ್ಯಾನಿಸಿದ್ದಾರೆ.
ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಬಗ್ಗೆ ಮಾತನಾಡಿರುವ ಗುಹಾ, ಅಂಥವರು ಇನ್ನೂ ಐದು ವರ್ಷ ಆಡಳಿತ ನಡೆಸಿದ್ದರೆ, ಭಾರತ ಇಂದು ಇಂತಹ ದಯನೀಯ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಅವರು ತಮ್ಮ ರಾಜಕೀಯ ಗುರು ನೆಹರೂಗಿಂತ ಭದ್ರತೆ ಮತ್ತು ಮಿಲಿಟರಿ ವಿಷಯದಲ್ಲಿ ಅದ್ಭುತ ವಿಚಾರಧಾರೆ ಹೊಂದಿದ್ದರು. ಇಂದಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ವೈಯಕ್ತಿಕವಾಗಿ ತುಂಬಾ ಪ್ರಾಮಾಣಿಕ. ಆದರೆ, ತಮ್ಮ ಪಕ್ಷದಲ್ಲೇ ಇರುವ ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಮಾರ್ಕ್ಸಿಸಂ, ಹಿಂದೂಯಿಸಂ, ನಕ್ಸಲಿಸಂ ಬಗ್ಗೆ ಹಲವಾರು ವಿಚಾರಧಾರೆ ಹಂಚಿಕೊಂಡಿರುವ ರಾಮಚಂದ್ರ ಗುಹಾ ಅವರ ಸಂದರ್ಶನದ ಉಳಿದ ಭಾಗವನ್ನು ಫಸ್ಟ್ಪೋಸ್ಟ್ನಲ್ಲಿ ಓದಿರಿ.












Click it and Unblock the Notifications