13 ಹೊಸ ಖಾಸಗಿ ವಿವಿಗೆ ಸಂಪುಟ ಅಸ್ತು

ಮಣಿಪಾಲದ ಮಾಹೆ, ಬೆಂಗಳೂರಿನ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆ, ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ , ದಯಾನಂದ ಸಾಗರ ಶಿಕ್ಷಣ ಸಂಸ್ಥೆ, ವೆಲ್ಲೂರು ತಾಂತ್ರಿಕ ಸಂಸ್ಥೆ, ಅರ್ಕ, ದೇವರಾಜ್ಅರಸ್ ಮತ್ತು ಶರಣ ಬಸವ ಶಿಕ್ಷಣ ಸಂಸ್ಥೆಗಳಿಗೆ ತಮ್ಮದೇ ಆದ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಅನುಮತಿ ಕೊಡಲು ವಿಧಾನಸಭೆ ಸಮ್ಮತಿ ಸೂಚಿಸಿದೆ.
ಈ ಪ್ರತ್ಯೇಕ ವಿವಿ ಸ್ಥಾಪನೆಗೆ ಪೂರಕವಾದ ಮಸೂದೆಗಳನ್ನು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಮಂಡಿಸಿ ಅಂಗೀಕಾರ ಪಡೆದರು. ಆದರೆ, ಸದನದಲ್ಲಿ ಪ್ರತಿಪಕ್ಷದ ಯಾವೊಬ್ಬ ಸದಸ್ಯರು ಇರಲಿಲ್ಲ. ಮಸೂದೆ ಬಗ್ಗೆ ಚರ್ಚೆ ಕೂಡಾ ನಡೆಯಲಿಲ್ಲ.
ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಈ ಖಾಸಗಿ ವಿವಿಗಳಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಸಿಟಿ ರವಿ ಹೇಳಿದರು.
ಆದರೆ, ಈ ವಿವಿಗಳಿಗೆ ಸ್ವಾಯತ್ತ ನೀಡಿದರೂ ಸರ್ಕಾರದ ಹಿಡಿತ ಇದ್ದೇ ಇರುತ್ತದೆ. ಈ ವಿವಿಗಳಲ್ಲಿ ಸರ್ಕಾರಕ್ಕೆ ಶೇ. 40 ರಷ್ಟು ಸೀಟುಗಳು ನಿಗದಿಯಾಗಿರುತ್ತವೆ. ಈ ಸೀಟುಗಳಿಗೆ ಶುಲ್ಕ ನಿಗದಿ ಮಾಡುವುದಕ್ಕಾಗಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಲಾಗುತ್ತದೆ.
ಒಂದು ವೇಳೆ ಸರ್ಕಾರದ ನೀತಿ ನಿರೂಪಣೆಗಳನ್ನು ಉಲ್ಲಂಘಿಸಿದರೆ ಅಂತಹ ವಿವಿಗಳ ವಿರುದ್ಧ ಕ್ರಮ ಜರುಗಿಸುವ ಧಿಕಾರ ಸರ್ಕಾರಕ್ಕಿರುತ್ತದೆ ಎಂದರು. ಅಲ್ಲದೇ, ವಿಶ್ವವಿದ್ಯಾಲಯಗಳ ನಿಯಂತ್ರಣ ಪ್ರಾಧಿಕಾರವನ್ನು ರಚಿಸುವ ಸಂಬಂಧ ಗಂಭೀರ ಚಿಂತನೆ ನಡೆಸಲಾಗಿದೆ ಎಂದು ರವಿ ಹೇಳಿದರು.
ವಿವಿಗಳ ಆಡಳಿತ ಮಂಡಳಿಯಲ್ಲಿ ವಿಧಾನಸಭೆ ಅಥವಾ ವಿಧಾನಪರಿಷತ್ತಿನ ಸದಸ್ಯರೊಬ್ಬರನ್ನು ಸದಸ್ಯರನ್ನಾಗಿ ನೇಮಕ ಮಾಡುವ ನಿರ್ಧಾರಕ್ಕೆ ಈ ಹಿಂದೆ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಆ ಅಂಶವನ್ನು ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.
ಈಗ ಅಲೈಯನ್ಸ್ ವಿವಿ ಹಾಗೂ ಅಜೀಂ ಪ್ರೇಂಜಿ ವಿವಿ ಅಸ್ತಿತ್ವದಲ್ಲಿದೆ. ಅನುಮತಿ ಸಿಕ್ಕಿರುವ ವಿವಿಗಳು ಇಂತಿದೆ:
* ಶರಣ ಬಸವ ವಿಶ್ವವಿದ್ಯಾಲಯ (ಗುಲ್ಬರ್ಗ)
* ಆದಿಚುಂಚನಗಿರಿ ವಿಶ್ವವಿದ್ಯಾಲಯ(ಮಂಡ್ಯ)
* ಮಣಿಪಾಲ್ ವಿಶ್ವ ವಿದ್ಯಾಲಯ(ಮಣಿಪಾಲ)
* ಅರ್ಕ ವಿಶ್ವವಿದ್ಯಾಲಯ (ಬೆಂಗಳೂರು)
* ದಯಾನಂದ ಸಾಗರ್ ವಿಶ್ವ ವಿದ್ಯಾಲಯ (ಬೆಂಗಳೂರು)
* ವೆಲ್ಲೂರು ತಾಂತ್ರಿಕ ಸಂಸ್ಥೆ, (ಬೆಂಗಳೂರು)
* ಎಂಎಸ್ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸ್ (ಬೆಂಗಳೂರು)
* ದೇವರಾಜ ಅರಸ್ ವಿಶ್ವವಿದ್ಯಾಲಯ (ಕೋಲಾರ)
* ರಾಯ್ ಟೆಕ್ನಾಲಜಿ ವಿಶ್ವವಿದ್ಯಾಲಯ (ಬೆಂಗಳೂರು)
* ಪಿಇಎಸ್ ವಿಶ್ವವಿದ್ಯಾಲಯ (ಬೆಂಗಳೂರು)
* ಸ್ಪಿರಿಚಿಯಲ್ ವಿಶ್ವ ವಿದ್ಯಾಲಯ (ಬೆಂಗಳೂರು)
* ರೇವಾ ವಿಶ್ವ ವಿದ್ಯಾಲಯ (ಬೆಂಗಳೂರು)
* ಕೆಎಲ್ ಇ ಟೆಕ್ನಾಲಾಜಿಕಲ್ ವಿವಿ (ಬೆಳಗಾವಿ)
ಆಡಳಿತ ಸದಸ್ಯರ ವಿರೋಧ: ಆದರೆ, ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಸುರೇಶ್ ಗೌಡ, ಇದೊಂದು ಸಾಮಾಜಿಕ ಬದ್ಧತೆ ವಿರೋಧಿ ಮಸೂದೆ. ಈಗಾಗಲೇ ಆರಂಭವಾಗಿರುವ ಎರಡು ಖಾಸಗಿ ವಿವಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಷ್ಟು ಸೀಟುಗಳನ್ನು ನೀಡಲಾಗಿದೆ? ಎಂಬುದನ್ನು ಮೊದಲು ತನಿಖೆ ಮಾಡಿ ನಂತರ ಈ ಮಸೂದೆ ಮಂಡಿಸಿ ಎಂದು
ಆಗ್ರಹಿಸಿದರು.












Click it and Unblock the Notifications