ಕೊನೆಗೂ ನೋಟಿಸ್, ತೂಗುಯ್ಯಾಲೆಯಲ್ಲಿ ಬಿಜೆಪಿ ಸರಕಾರ
ಬೆಳಗಾವಿ, ಡಿ.12: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಗುರುತಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಬಿಜೆಪಿ ಕೋರ್ ಕಮಿಟಿ ಇದೀಗ ತಾನೇ 14 ಶಾಸಕರು ಮತ್ತು 7 ಮಂದಿ ಮೇಲ್ಮನೆ ಸದಸ್ಯರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದೆ.
'ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ನಿಮ್ಮನ್ನು ಪಕ್ಷದಿಂದ ಏಕೆ ಉಚ್ಛಾಟಿಸಬಾರದು? ಮೂರು ದಿನಗಳಲ್ಲಿ ಉತ್ತರ ನೀಡಿ' ಎಂದು ಪ್ರಶ್ನಿಸಿ ನೋಟಿಸ್ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕರ್ನಾಟಕ ಜನತಾ ಪಕ್ಷದ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಈ ಶಾಸಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ಈ ನೋಟಿಸ್ ಜಾರಿಗೊಳಿಸಲಾಗಿದೆ.

ಇಂದು ಬುಧವಾರ ಬೆಳಗ್ಗೆ 8.30ಕ್ಕೆ ಬೆಳಗಾವಿಯಲ್ಲಿ ಬಿಜೆಪಿ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಗಮನಾರ್ಹವೆಂದರೆ ಶಿಸ್ತಿನ ಪಕ್ಷ ಬಿಜೆಪಿ ಬಿಎಸ್ಆರ್ ಕಾಂಗ್ರೆಸ್ ಶಾಸಕರ ವಿರುದ್ಧ ಯಾವುದೇ ಶಿಸ್ತು ಕ್ರಮದ ಪ್ರಸ್ತಾಪವನ್ನು ಮಾಡಿಲ್ಲ. [ಇದು ಬಿಜೆಪಿ ಹಾರಿಸಿದ ಗಾಳಿಪಟ]
ನೋಟಿಸ್ ಪಡೆದ 14 ಶಾಸಕರು:
* ಹರಾತಾಳು ಹಾಲಪ್ಪ, ಸೊರಬ
* ಎಸ್ ಸುರೇಶ್, ತರೀಕೆರೆ
* ಚಂದ್ರಣ್ಣ, ಹೊಳಲ್ಕೆರೆ
* ನೆಹರೂ ಓಲೇಕಾರ, ಹಾವೇರಿ
* ಎಸ್ ಎಚ್ ಚಿಕ್ಕನಗೌಡರ್, ಕುಂದಗೋಳ
* ಸುರೇಶ್ ಗೌಡ ಪಾಟೀಲ್, ಬ್ಯಾಡಗಿ
* ಶ್ರೀಶೈಲಪ್ಪ ಬಿದನೂರು, ಗದಗ
* ಬಿ ಶಿವಣ್ಣ, ರಾಣೆಬೆನ್ನೂರು
* ಚಂದ್ರಕಾಂತ ಬೆಲ್ಲದ್, ಧಾರವಾಡ
* ಬಿಪಿ ಹರೀಶ್, ಹರಿಹರ
* ಸಿಸಿ ಪಾಟೀಲ್, ನರಗುಂದ
* ಸುನಿಲ್ ವಲ್ಯಾಪುರೆ, ಚಿಂಚೋಳಿ
* ರಾಮಣ್ಣ ಲಮಾಣಿ, ಶಿರಹಟ್ಟಿ
* ಲಕ್ಷ್ಮಿ ನಾರಾಯಣ್, ಬೈಂದೂರು
7 ಮೇಲ್ಮನೆ ಸದಸ್ಯರು: ಮುಮ್ತಾಜ್ ಅಲಿ ಖಾನ್, ಭಾರತಿ ಶೆಟ್ಟಿ, ಲೆಹರ್ ಸಿಂಗ್, ಬಿಜೆ ಪುಟ್ಟಸ್ವಾಮಿ, ಶಿವರಾಜ್ ಸಜ್ಜನ್, ಎಂಡಿ ಲಕ್ಷ್ಮಿನಾರಾಯಣ ಮತ್ತು ಮೋಹನ್ ಲಿಂಬೇಕಾಯಿ.
ಇದಕ್ಕೇ ಕಾಯುತ್ತಿದ್ದ ಯಡಿಯೂರಪ್ಪ ಬೆಂಬಲಿಗರು ಇಂದು ಸಂಜೆ ವೇಳೆಗೆ ಸಭೆ ಸೇರಿ, ನೋಟಿಸ್ ಪಡೆದ ಶಾಸಕರಿಂದ ಸಾಮೂಹಿಕ ರಾಜಿನಾಮೆ ಕೊಡಿಸುವ ಮೂಲಕ ಸರ್ಕಾರವನ್ನು ಅಲ್ಪಮತಕ್ಕೆ ಕುಸಿಯುವಂತೆ ಮಾಡುವ ಬಗ್ಗೆ ಮಂತ್ರಾಲೋಚನೆ ನಡೆಸಲಿದೆ ಎಂದು ಕೆಜೆಪಿ ಮೂಲಗಳು ತಿಳಿಸಿವೆ
ಬಿಜೆಪಿ ಕೋರ್ ಕಮಿಟಿಯಲ್ಲಿ ಭಾಗವಹಿಸಿದ್ದವರು: ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡ, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರು ಪಾಲ್ಗೊಂಡಿದ್ದರು.












Click it and Unblock the Notifications