ಯಡಿಯೂರಪ್ಪ ಹಾಗೂ ಕುಟುಂಬಕ್ಕೆ ಜಾಮೀನು
2 ಲಕ್ಷ ರು ಬಾಂಡ್, ಇಬ್ಬರ ಶ್ಯೂರಿಟಿ ನೀಡಬೇಕು, ದೇಶ ಬಿಟ್ಟು ಹೋಗಬಾರದು ಎಂದು ಹೈಕೋರ್ಟ್ ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸಿಬಿಐ ನ್ಯಾಯಾಧೀಶ ವೆಂಕಟ್ ಸುದರ್ಶನ್ ಅವರು ಸಮನ್ಸ್ ಜಾರಿಗೊಳಿಸಿದ್ದರು. ಗಣಿ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆದ ಆರೋಪದ ಮೇಲೆ ಯಡಿಯೂರಪ್ಪ ಮತ್ತು ಅವರ ಕುಟಂಬಸ್ಥರು, ಡಿಸೆಂಬರ್ 10 ರಂದು ಎಲ್ಲರೂ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿತ್ತು.
ಕಾನೂನು ಬಾಹಿರ ಡಿನೋಟಿಫಿಕೇಶನ್ ಮಾಡಿ ಅಕ್ರಮ ಗಣಿಗಾರಿಕೆಗೆ ಮಣೆ ಹಾಕಿದ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಅವರ ಇಬ್ಬರ ಮಕ್ಕಳು, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಒಟ್ಟು 13 ಮಂದಿ ಆರೋಪಿಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಈ ಸಮನ್ಸ್ ಹೊರಡಿಸಲಾಗಿತ್ತು.
ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಂಎಲ್) ಜತೆಗಿನ ಜಂಟಿ ಪಾಲುದಾರಿಕೆ ಗಣಿಗಾರಿಕೆ ವ್ಯವಹಾರದಲ್ಲಿ ಜಿಂದಾಲ್ ಸಮೂಹಕ್ಕೆ ಅನುಕೂಲ ಮಾಡಿಕೊಟ್ಟಿರುವುದಕ್ಕಾಗಿಯೇ ಜಿಂದಾಲ್ ಕಂಪನಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ 40 ಕೋಟಿ ರೂಪಾಯಿ ಲಂಚ ನೀಡಿದೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಸಿಬಿಐನ ಬೆಂಗಳೂರು ಭ್ರಷ್ಟಾಚಾರ ನಿಯಂತ್ರಣ ಘಟಕದ ಹೆಚ್ಚುವರಿ ಎಸ್ಪಿ ಬಿಸ್ವಜಿತ್ ದಾಸ್ ಅಕ್ಟೋಬರ್ 16ರಂದು ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರು.
ಜಿಂದಾಲ್ ಸ್ಟೀಲ್ ವರ್ಕ್ಸ್, ಸೌತ್ ವೆಸ್ಟ್ ಮೈನಿಂಗ್ ಕಂಪನಿಗಳಿಗೆ ಗಣಿಗಾರಿಕೆ ಗುತ್ತಿಗೆ ನೀಡಲು ಯಡಿಯೂರಪ್ಪನವರು ಪ್ರೇರಣಾ ಟ್ರಸ್ಟ್, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಮತ್ತು ಭಗತ್ ಹೋಂ ಕಂಪನಿಗಳ ಹೆಸರಿನಲ್ಲಿ 20 ಕೋಟಿ ರು. ಲಂಚ ಪಡೆದಿದ್ದರೆಂದು ಆರೋಪಿಸಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ತಮ್ಮ ಅಕ್ರಮ ಗಣಿಗಾರಿಕೆಯ ವರದಿಯಲ್ಲಿಯೂ ಪ್ರಸ್ತಾಪಿಸಿದ್ದರು.
ಅದರ ಆಧಾರದ ಮೇಲೆ ಯಡಿಯೂರಪ್ಪ, ಅವರ ಇಬ್ಬರು ಮಕ್ಕಳಾದ ಬಿ.ವೈ. ವಿಜಯೇಂದ್ರ, ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಜಿಂದಾಲ್ ಸ್ಟೀಲ್ ವರ್ಕ್ಸ್ ಮತ್ತು ಸೌತ್ ವೆಸ್ಟ್ ಮೈನಿಂಗ್ ಕಂಪನಿ ನಿರ್ದೇಶಕರುಗಳ ವಿರುದ್ಧ ಅ. 16 ರಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.
ನಂತರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿ, ಸಿಬಿಐನಿಂದ ಮತ್ತೆ ತನಿಖೆ ನಡೆಸಬೇಕೆಂದು 2012ರ ಮೇ 11ರಂದು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು.