ಕಾವೇರಿ ಹಂಚಿಕೆ: ಶೆಟ್ಟರ್ ವಿರುದ್ಧ ಸಿದ್ದು, ರೇವಣ್ಣ ಕಿಡಿ
ಬೆಳಗಾವಿ, ಡಿ.6: ಬೆಳಗಾವಿಯಲ್ಲಿ ನಡೆದಿರುವ ಚಳಿಗಾಲ ಅಧಿವೇಶನದಲ್ಲಿ ಬಿಜೆಪಿ ಸರ್ಕಾರಕ್ಕೆ ವಿಪಕ್ಷಗಳು ಚಳಿ ಬಿಡಿಸಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬಾವಿಗಿಳಿದು ಪ್ರತಿಭಟನೆ ನಡೆಸಿ ವಿಧಾನಮಂಡಲ ಅಧಿವೇಶನಕ್ಕೆ ಕೆಲ ಕಾಲ ಅಡ್ಡಿಪಡಿಸಿದ ಘಟನೆ ಗುರುವಾರ (ಡಿ.6) ನಡೆದಿದೆ.
ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕದ ರೈತರು ರೊಚ್ಚಿಗೇಳಲಿದ್ದಾರೆ. ಮೈಸೂರಲ್ಲಿ 10 ಲಕ್ಷ ಜನ ಕುಡಿಯುವ ನೀರಿಗಾಗಿ ಹಾತೊರೆದಿದ್ದಾರೆ. ತಮಿಳುನಾಡು ಅಂತರ್ಜಲ ಬಳಸಿಕೊಳ್ಳುತ್ತಿಲ್ಲ. ಕರ್ನಾಟಕದಲ್ಲಿ ಅಂತರ್ಜಲ ಸಿಗುತ್ತಿಲ್ಲ.

ನೀರು ಬಿಡುತ್ತೇನೆ, ಇಲ್ಲ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟ ಅಭಿಪ್ರಾಯ ನೀಡಲು ಸೋತಿದೆ. ನಾಳೆ ದಿನವೇ ಪ್ರಧಾನಿ ಬಳಿಗೆ ಸರ್ವ ಪಕ್ಷ ನಿಯೋಗ ಕರೆದೊಯ್ಯುವಂತೆ ಸಿದ್ದರಾಮಯ್ಯ ಆಗ್ರಹಿಸಿದರು.
ರೇವಣ್ಣ ಉವಾಚ: ತಮಿಳುನಾಡಿಗೆ ಕದ್ದುಮುಚ್ಚಿ ನೀರು ಬಿಟ್ಟಿದೆ ಎಂಬ ಗುಮಾನಿ ಇದೆ. ಈ ಬಗ್ಗೆ ಸರ್ಕಾರ ಇನ್ನೂ ಸ್ಪಷ್ಟನೆ ನೀಡುತ್ತಿಲ್ಲ ಏಕೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ಆಗ್ರಹಿಸಿದರು.
ಸುಪ್ರೀಂಕೋರ್ಟಿನಲ್ಲಿ ಸಮರ್ಥವಾಗಿ ವಾದ ಮಂಡಿಸುವಲ್ಲಿ ಸರ್ಕಾರ ಸೋತಿದೆ. ಸರ್ಕಾರಕ್ಕೆ ಸದನದಲ್ಲಿ ಚರ್ಚೆ ಮಾಡುವ ಮನಸ್ಸು ಇಲ್ಲ. ಇದು ಕಾಟಾಚಾರದ ಅಧಿವೇಶನವಾಗಿದೆ.
ತರಾತುರಿಯಲ್ಲಿ 16 ವಿಧೇಯಕಗಳನ್ನು ಮಂಡಿಸಿ ಅಂಗೀಕಾರ ಪಡೆದು ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಖಾಸಗಿ ವಿಧೇಯಕ, ಅಕ್ರಮ ಸಕ್ರಮ ವಿಧೇಯಕಗಳನ್ನು ಮಂಡನೆ ಮಾಡುತ್ತಿರುವುದು ಅನುಮಾನ ಹುಟ್ಟಿಸಿದೆ. ಖಾಸಗಿ ವಿವಿ ವಿಧೇಯಕ ಮಂಡನೆಯಾದರೆ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ರೇವಣ್ಣ ಹೇಳಿದರು.
ಕಾವೇರಿ ಭಾಗದಲ್ಲಿ ಏಳು ಎಂಟು ಲಕ್ಷ ಹೆಕ್ಟೇರ್ ಬೆಳೆಗೆ ನೀರು ಇಲ್ಲದಂಥ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ತಮಿಳುನಾಡನ್ನು ಓಲೈಕೆ ಮಾಡುತ್ತಿದೆ. ವಾಸ್ತವ ಪರಿಸ್ಥಿತಿ ಅಧ್ಯಯನ ಮಾಡಲು ನೀರಾವತಿ ತಜ್ಞರ ತಂಡವನ್ನು ಕರ್ನಾಟಕಕ್ಕೆ ಕಳುಹಿಸಬೇಕು. ಇಲ್ಲಿನ ಮಳೆ ಬೆಳೆ, ಜಲಾಶಯದಲ್ಲಿನ ನೀರಿನ ಮಟ್ಟದ, ನೀರಿನ ಅಗತ್ಯದ ಬಗ್ಗೆ ಸಂಪೂರ್ಣ ಅಧ್ಯಯನ ನಡೆಯಬೇಕು ಎಂದರು.
ಬೆಳೆ ನಷ್ಟವಾಗಿರುವ ರೈತರಿಗೆ ಎಕತೆಗೆ 25 ಸಾವಿರ ರು ಪರಿಹಾರ ನೀಡಬೇಕು. ಬರಗಾಲ ಪೀಡಿತ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 3 ಕೋಟಿ ರು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದರು.
ಸಿಎಂ ಭರವಸೆ: ವಿಪಕ್ಷಗಳ ತೀವ್ರ ಪ್ರತಿಭಟನೆಯ ನಂತರ ಕಾವೇರಿ ಹಂಚಿಕೆ ವಿವಾದದ ಬಗ್ಗೆ ಸರ್ಕಾರ ಈ ವರೆಗೆ ತೆಗೆದುಕೊಂಡ ನಿರ್ಣಯಗಳನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸವಿಸ್ತಾರವಾಗಿ ಓದಿದರು. ಸಂಸದರ ಜೊತೆ ಒಂದು ಸುತ್ತಿನ ಸಭೆ ನಡೆಸಿ, ಸರ್ವಪಕ್ಷಗಳ ನಿಯೋಗವನ್ನು ಕರೆದುಕೊಂಡು ಪ್ರಧಾನಿ ಮನಮೋಹನ್ ಸಿಂಗ್ ಅವರೊಟ್ಟಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.












Click it and Unblock the Notifications