ವಿದ್ಯಾರ್ಥಿನಿಯಿಂದ ಲಂಚ, ಸಿಕ್ಕಿಬಿದ್ದ ಪ್ರಾಧ್ಯಾಪಕಿ

ಪಿಎಚ್ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಯಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಮಂಗಳೂರು ವಿವಿಯ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ ಅನಿತಾ ರವಿಶಂಕರ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅನಿತಾ ಅವರನ್ನು ಮಂಗಳವಾರ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮಂಗಳೂರು ವಿ.ವಿ. ಸಮಾಜಶಾಸ್ತ್ರ ವಿಭಾಗದ ಡಾ.ಅನಿತಾ ರವಿಶಂಕರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಪ್ರಾಧ್ಯಾಪಕಿ. ಇವರ ಮಾರ್ಗ ದರ್ಶನದಲ್ಲಿ ಪ್ರೇಮಾ ಡಿಸೋಜ ಎಂಬವರು ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದರು.
ಥೀಸಿಸ್ ವರ್ಕ್ ಗೆ ಎಂದು ಈಗಾಗಲೇ 14,000 ರು ಗಳಷ್ಟು ಹಣವನ್ನು ಪ್ರಾಧ್ಯಾಪಕಿ ಅನಿತಾ ಅವರಿಗೆ ಪ್ರೇಮಾ ಅವರು ನೀಡಿದ್ದಾರೆ. ಆದರೆ, ಇನ್ನೂ 5 ಸಾವಿರ ರು ಹೆಚ್ಚಿನ ಹಣ ನೀಡಿದರೆ ಮಾತ್ರ ನಿನಗೆ ಪಿಎಚ್ ಡಿ ಸಿಗುವಂತೆ ಮಾಡುತ್ತೇನೆ ಎಂದು ಪ್ರಾಧ್ಯಾಪಕಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಪ್ರೇಮಾರಿಂದ ಪಿಎಚ್ಡಿ ಪ್ರೊಪಸಲ್ ಕಳಿಸಲು ಡಾ.ಅನಿತಾ 5 ಸಾವಿರ ರೂ. ನಗದು ಕೇಳಿದ್ದರು ಎನ್ನಲಾಗಿದೆ. ಪ್ರೇಮಾ ಡಿಸೋಜ ಈ ವಿಷಯವಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಪೊಲೀಸರ ಸೂಚನೆಯಂತೆ ಡಾ.ಅನಿತಾ ಹಣ ಕೇಳುತ್ತಿರುವುದನ್ನು ವಿದ್ಯಾರ್ಥಿನಿಯು ಧ್ವನಿ ಮುದ್ರಣ ಮಾಡಿದ್ದರು. ಇಂದು ಐದು ಸಾವಿರ ರೂ. ನಗದು ಸ್ವೀಕರಿಸುತ್ತಿದ್ದಾಗಲೇ ದಾಳಿ ನಡೆಸಿದ ಪೊಲೀಸರು ದಾಖಲೆ ಸಹಿತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಪ್ರಾಧ್ಯಾಪಕಿಯನ್ನು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಡಾ.ಅನಿತಾ ರವಿಶಂಕರ್ ಕಳೆದ ಹಲವು ವರ್ಷ ಗಳಿಂದ ಸಮಾಜಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿ ಮತ್ತು ಮಂಗಳೂರು ವಿವಿಯ ಮಹಿಳಾ ವಸತಿ ನಿಲಯದ ವಾರ್ಡನ್ ಆಗಿ ಕಾರ್ಯನಿರ್ವಸುತ್ತಿದ್ದರು. ಕಾರ್ಯ ನಿರ್ವಹಣೆಯಲ್ಲಿ ಶಿಸ್ತು ಮತ್ತು ಬದ್ಧತೆಯ ಕಾರ್ಯನಿರ್ವಹಣೆಗೆ ಹೆಸರಾಗಿದ್ದ ಡಾ.ಅನಿತಾ ಮೆಚ್ಚುಗೆ ಗಳಿಸಿದ್ದ ಪ್ರಾಧ್ಯಾಪಕಿ ಎಂದು ವಿವಿಯ ಸಹಯೋಗಿಗಳು ಹೇಳುತ್ತಾರೆ.
ದ.ಕ. ಜಿಲ್ಲಾ ಲೋಕಾಯುಕ್ತ ಎಸ್ಪಿ ಮೋಹನ್ ದಾಸ್ ಪೈ, ಡಿವೈಎಸ್ಪಿ ವಿಠಲದಾಸ್ ಪೈ, ಇನ್ಸ್ಪೆಕ್ಟರ್ ಉಮೇಶ್ ಶೇಟ್, ದಿಲೀಪ್ಕುಮಾರ್, ಸಿಬ್ಬಂದಿ ಸುದರ್ಶನ್, ಶಿವಪ್ರಸಾದ್, ಶರತ್, ಭಾಸ್ಕರ್, ಸಲೀಂ, ಹರಿಶ್ಚಂದ್ರ, ಜಾರ್ಜ್, ಪ್ರಮೋದ್, ಮಧು ಮತ್ತು ಸುಧಾಕರ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.












Click it and Unblock the Notifications