ಕೆಜೆಪಿ ಬೆಂಬಲಿಗರಿಗೆ ಬಿಜೆಪಿ ಟಿಕೆಟ್ ಇಲ್ಲ: ಈಶ್ವರಪ್ಪ

ಯಡಿಯೂರಪ್ಪ ಅವರನ್ನು ಸಮರ್ಥಿಸಿಕೊಂಡು ಅವರ ಹತ್ತಿರ ಸುಳಿದ್ದಾಡುತ್ತಿರುವ ಶಾಸಕರಾದ ಬಿ.ಪಿ ಹರೀಶ್, ತರೀಕೆರೆ ಸುರೇಶ್, ಹರತಾಳ ಹಾಲಪ್ಪ, ನೆಹರೂ ಓಲೇಕಾರ್ ಅವರಿಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ವಿವಿಧ ಮೋರ್ಚಾ ಹಾಗೂ ಪದಾಧಿಕಾರಿಗಳ ಜೊತೆ ಸೋಮವಾರ(ನ.26) ಸಭೆ ನಡೆಸಿದ ಈಶ್ವರಪ್ಪ ಅವರು ಮುಂದಿನ ಚುನಾವಣೆಗೆ ಬಿಜೆಪಿ ತಯಾರಿ ನಡೆಸಿದೆ ಎಂದರು.
ಮೇಲ್ಕಂಡ ನಾಲ್ಕು ಶಾಸಕರನ್ನು ಬಿಟ್ಟು ಉಳಿದ ಎಲ್ಲಾ ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ಸಿಗಲಿದೆ. ಯಡಿಯೂರಪ್ಪ ಅವರ ಜೊತೆ ಗುರುತಿಸಿಕೊಂಡಿರುವ ಶಾಸಕರ ಕ್ಷೇತ್ರಗಳಿಗೆ ಬದಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಈಶ್ವರಪ್ಪ ಹೇಳಿದರು.
ಕೆಜೆಪಿಯಲ್ಲಿ ಕೆಲವೇ ಕೆಲವು ಶಾಸಕರು ಮಾತ್ರ ಗುರುತಿಸಿಕೊಂಡಿದ್ದರೆ ಎಂಬುದು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಡಿ.9 ರಂದು ಏನೋ ಭಾರಿ ಅನಾಹುತ ಸಂಭವಿಸಲಿದೆ. ರಾಜಕೀಯ ದಿಕ್ಸೂಚನೆ ಸಿಗಲಿದೆ ಎಂಬುದೆಲ್ಲ ಅತಿರೇಕದ ಹೇಳಿಕೆ.
ಯಡಿಯೂರಪ್ಪ ಅವರು ಪಕ್ಷ ಬಿಡುವುದರಿಂದ ಬಿಜೆಪಿಗೆ ಯಾವುದೇ ಕೆಟ್ಟ ಪರಿಣಾಮ ಇಲ್ಲ. ಅಟಲ್ ಬಿಹಾರಿ ವಾಜಪೇಯಿ, ಎಲ್ ಕೆ ಅಡ್ವಾಣಿ, ಜಗನ್ನಾಥ್ ಜೋಶಿ ಅವರಂಥ ಹಿರಿಯ ನಾಯಕರು ಕಟ್ಟಿ ಬೆಳೆಸಿದ ಪಕ್ಷವನ್ನು ವೈಯಕ್ತಿಕ ಲಾಭಕ್ಕಾಗಿ ಯಾರೂ ಹಾಳು ಮಾಡಲು ಸಾಧ್ಯವಿಲ್ಲ ಎಂದು ಈಶ್ವರಪ್ಪ ಹೇಳಿದರು.
ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲಾಗುವುದು ಇದರಲ್ಲಿ ಯಾವುದೇ ಸಂಶಯಬೇಡ. ರಾಜ್ಯದ ನಾಯಕರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ. ನಾಲ್ಕು ವರ್ಷ ಬಿಜೆಪಿ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ಜನರಿಗೆ ತಿಳಿಯಪಡಿಸುವ ಕಾಲ ಬಂದಿದೆ ಎಂದರು.
ಸಿದ್ದು ಮೇಲೆ ಗುದ್ದು: ಸಿದ್ದರಾಮಯ್ಯ ಒಬ್ಬ ಟೋಪಿವಾಲ. ಎಲ್ಲರಿಗೂ ಟೋಪಿ ಹಾಕುವುದೇ ಅವರ ಕೆಲಸವಾಗಿದೆ. ಮೊದಲು ಜೆಡಿಎಸ್ ಗೆ ಟೋಪಿ ಹಾಕಿದರು. ನಂತರ ಕಾಂಗ್ರೆಸ್ ಗೂ ಹಾಕಿದರು.
ಕಾಂಗ್ರೆಸ್ ಏನೇ ಮಾಡಲಿ, ತಿಪ್ಪರಲಾಗ ಹಾಕಿದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಬ್ಲಾಕ್ ಮೇಲ್ ಮಾಡುತ್ತಾ ವಿಪಕ್ಷ ಸ್ಥಾನ ಗಿಟ್ಟಿಸಿಕೊಂಡಷ್ಟು ಸುಲಭವಲ್ಲ. ಚುನಾವಣೆ ಎದುರಿಸಿ ಪಕ್ಷವನ್ನು ಗೆಲ್ಲಿಸುವುದು ಎಂದು ಸಿದ್ದು ವಿರುದ್ಧ ಈಶು ಹರಿಹಾಯ್ದರು.
ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅವರು ಆಡಳಿತ ಪಕ್ಷದ ಒಂದು ಹಗರಣವನ್ನು ಬಯಲಿಗೆಳೆಯಲು ಸಾಧ್ಯವಾಗಲಿಲ್ಲ. ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯ ಕಂಡು ಅವರಿಗೆ ಅಸೂಯೆ ಉಂಟಾಗಿದೆ. ಕಾಂಗ್ರೆಸ್ ನಲ್ಲಿ ಒಳ ಜಗಳ ಹೆಚ್ಚಾಗಿದ್ದು, ಅವನತಿ ಕಾಲ ಹತ್ತಿರದಲ್ಲಿದೆ ಎಂದು ಈಶ್ವರಪ್ಪ ಹೇಳಿದರು.












Click it and Unblock the Notifications