ಬಿಜೆಪಿಯಿಂದ ಸಂಸದ ರಾಮ್ ಜೇಠ್ಮಲಾನಿ ಅಮಾನತು

ರಾಜ್ಯ ಸಭಾ ಸದಸ್ಯರಾದ ರಾಮ್ ಜೇಠ್ಮಲಾನಿ ಅವರನ್ನು ಪಕ್ಷದಿಂದ ಹೊರ ಹಾಕುವ ಬಗ್ಗೆ ಪಕ್ಷದ ಅದ್ಯಕ್ಷ ನಿತಿನ್ ಗಡ್ಕರಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಮಾನತು ಆದೇಶ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಬಿಜೆಪಿ ವಕ್ತಾರ ಶಹನವಾಜ್ ಹುದೇನ್ ಹೇಳಿದರು.
ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಒಮ್ಮತ ತೀರ್ಮಾನ ಮೂಡಿದ ಮೇಲೆ ಮುಗಿದು ಹೋಯಿತು. ಪಕ್ಷದ ಸಂಸದ ಅಥವಾ ಶಾಸಕರನ್ನು ಪಕ್ಷದಿಂದ ತೆಗೆದುಹಾಕುವ ಎಲ್ಲಾ ಸರ್ವಾಧಿಕಾರ ಸಂಸದೀಯ ಮಂಡಳಿಗೆ ಇದೆ ಎಂದು ಶಹನವಾಜ್ ಹುಸೇನ್ ಹೇಳಿದ್ದಾರೆ.
ಏನು ಕಾರಣ?: ಹೊಸ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ನೇಮಕಾತಿ ಬಗ್ಗೆ ಬಿಜೆಪಿ ವಲಯದಲ್ಲಿ ಎದ್ದಿದ್ದ ಅಪಸ್ವರವನ್ನು ರಾಮ್ ಜೇಠ್ಮಲಾನಿ ಬಹಿರಂಗವಾಗಿ ಖಂಡಿಸಿದ್ದರು. ಇದು ಜೇಠ್ಮಲಾನಿ ಅವರಿಗೆ ಗೇಟ್ ಪಾಸ್ ನೀಡಲು ಮೂಲ ಕಾರಣ ಎನ್ನಲಾಗಿದೆ.
ಸಿಬಿಐ ನೂತನ ನಿರ್ದೇಶಕರಾಗಿ ರಂಜಿತ್ ಸಿನ್ಹಾ ಅವರನ್ನು ನೇಮಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ರಾಮ್ ಜೇಠ್ಮಲಾನಿ ಅವರು, ಇದೊಂದು ಅನಗತ್ಯ ವಿರೋಧದ ಕ್ರಮ. ಕಾನೂನಿನ ಪ್ರಕಾರ ನೇಮಕಾತಿ ನಡೆದಿದೆ. ಯಾವುದೇ ಕಾನೂನು ಕ್ರಮ ಉಲ್ಲಂಘನೆಯಾಗಿಲ್ಲ ಎಂದಿದ್ದರು. ಜೇಠ್ಮಲಾನಿ ಅವರ ಹೇಳಿಕೆಗೆ ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಅವರು ಬೆಂಬಲ ವ್ಯಕ್ತಪಡಿಸಿದ್ದರು.
86 ವರ್ಷದ ಹಿರಿಯ ರಾಜಕಾರಣಿ ರಾಮ್ ಜೇಠ್ಮಲಾನಿ ಅವರು ನಿತಿನ್ ಗಡ್ಕರಿ ವಿರುದ್ಧ ಅನೇಕ ಬಾರಿ ಹೇಳಿಕೆಗಳನ್ನು ನೀಡಿದ್ದರು. ನನ್ನ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಪಕ್ಷದ ಹಿರಿಯ ಮುಖಂಡರನ್ನು ಜರೆದಿದ್ದರು.
ಹಣಕಾಸು ಅವ್ಯವಹಾರದಲ್ಲಿ ತೊಡಗಿರುವ ನಿತಿನ್ ಗಡ್ಕರಿ ಕೈ ಕೆಳಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ರಾಷ್ಟ್ರೀಯ ಕಾರ್ಯಕಾರಣಿಗೆ ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಅವರ ಪುತ್ರ ಮಹೇಶ್ ಜೇಠ್ಮಲಾನಿ ಸೋಮವಾರ (ನ.5) ರಾಜೀನಾಮೆ ನೀಡಿದ್ದರು.
ಗಡ್ಕರಿ ಅವರು ಎರಡನೇ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದು ಅಕ್ಟೋಬರ್ 23 ರಂದು ರಾಮ್ ಜೇಠ್ಮಲಾನಿ ಹೇಳಿಕೆ ನೀಡಿದ್ದರು
ಸುಮಾರು 70 ಸಾವಿರ ಕೋಟಿ ರು ನೀರಾವರಿ ಹಗರಣದಲ್ಲಿ ನಿತಿನ್ ಗಡ್ಕರಿ ಅವರು ಭಾಗಿಯಾಗಿದ್ದಾರೆ. ಮಹಾರಾಷ್ಟ್ರ ಭೂ ಹಗರಣದಲ್ಲಿ ಆರೋಪಿಯಾಗಿರುವ ನಿತಿನ್ ಗಡ್ಕರಿ ಅವರನ್ನು ಮುಂದಿಟ್ಟುಕೊಂಡು ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರೆಸಲು ಹೇಗೆ ಸಾಧ್ಯ ಎಂದು ರಾಮ್ ಜೇಠ್ಮಲಾನಿ ಪ್ರಶ್ನಿಸಿದ್ದರು.












Click it and Unblock the Notifications