ನೈಸ್ ಅಬ್ರಹಾಂ ಬಂಧನದ ಹಿಂದೆ ಅಶೋಕ್ ಮಸಲತ್ತು?

ಇತ್ತೀಚೆಗೆ ಒಂದೊಂದೇ ಪ್ರಕರಣಗಳನ್ನು ಕ್ಷಿಪ್ರವಾಗಿ ಬೇಧಿಸುತ್ತಾ ಚಾಣಾಕ್ಷತೆ ಮೆರೆಯುತ್ತಿರುವ ಬೆಂಗಳೂರು ಪೊಲೀಸರು, ಇದೀಗ ಗೃಹ ಸಚಿವರ ಮಾತು ಕೇಳಿ ಪುರಾತನ ಪ್ರಕರಣವೊಂದಕ್ಕೆ ಜೀವ ತುಂಬಿರುವುದು ಆತಂಕಕಾರಿಯಾಗಿದೆ ಎಂದು ಪ್ರಜ್ಞಾವಂತ ಜನ ಇದೇ ವೇಳೆ ಕಿಡಿಕಾರಿದ್ದಾರೆ.
ಅಶೋಕ್ ಖೇಣಿಯ ನೈಸ್ ರಸ್ತೆ ಯೀಜನೆಯಲ್ಲಿ ನಡೆದಿರುವ ಅಪಾರ ಭ್ರಷ್ಟಾಚಾರದ ವಿರುದ್ಧ ಮುಂಚೂಣಿಯಲ್ಲಿ ಹೋರಾಡುತ್ತಿರುವ ಟಿಜೆ ಅಬ್ರಹಾಂ ಅವರೇ ನಿನ್ನೆ ಬೆಂಗಳೂರಿನಲ್ಲಿ ಬಾಣಸವಾಡಿ ಪೊಲೀಸರಿಂದ ಬಂಧನಕ್ಕೊಳಗಾದ ವೇಳೆ ಹೀಗೆ ಹೇಳಿದ್ದಾರೆ.
'ನನ್ನ ಬಂಧನ ನಿರೀಕ್ಷಿತವಾಗಿತ್ತು. ನನ್ನ ವಿರುದ್ಧ ನನಗೇ ಗೊತ್ತಿಲ್ಲದ ಪ್ರಕರಣದ ವಾರಂಟ್ ತಂದು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಇದರಲ್ಲಿ ನನ್ನ ಎದುರಾಳಿಗಳೆಲ್ಲಾ ಸೇರಿ ನನ್ನನ್ನುಬಂಧಿಸಲು ಒತ್ತಡ ಹೇರಿದ್ದಾರೆ. ನನ್ನನ್ನು ಮಟ್ಟಹಾಕಲು ಈ ಕುತಂತ್ರ ಮಾಡಲಾಗಿದೆ. ಗೃಹ ಸಚಿವ ಆರ್ ಅಶೋಕ್ ಅವರೂ ನನ್ನನ್ನು ಬಂಧಿಸಲು ಪೊಲೀಸರಿಗೆ ತಿಳಿಸಿದ್ದಾರೆ' ಎಂದು ಅಬ್ರಹಾಂ ದೂರಿದ್ದಾರೆ.
ಈಗಾಗಲೇ ಅಬ್ರಹಾಂ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ದೇವೆಗೌಡ, ಎಸ್ಎಂ ಕೃಷ್ಣ, ಯಡಿಯೂರಪ್ಪ ವಿರುದ್ಧ ನೈಸ್ ಕಾರಿಡಾರ್ ಯೋಜನೆ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಅದಲ್ಲದೆ ತಮ್ಮ ಮಾಜಿ ರೂಮ್ ಮೇಟ್, ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ವಿರುದ್ಧ ಅಕ್ರಮ ಡಿನೋಟಿಫಿಕೇಶ್ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ಈ ಪ್ರಕರಣದಲ್ಲಿ ಬಂಧಿತರಾದ ಅವರನ್ನು ಮೆಯೋಹಾಲ್ನ 11 ACMM ನ್ಯಾಯಾಲಯ ಡಿ. 4ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹಾಗಾಗಿ, ಅಬ್ರಹಾಂ ಪ್ರಸ್ತುತ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. 'ಪೊಲೀಸರು ಬಂಧಿಸಿರುವುದು ನಿರೀಕ್ಷಿತವಾಗಿದ್ದು, ನ್ಯಾಯ ಸಿಗುವ ವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನೈಸ್ ವಿರುದ್ಧದ ಹೋರಾಟವನ್ನು ಕೈಬಿಡುವುದಿಲ್ಲ' ಎಂದು ಅಬ್ರಹಾಂ ಹೇಳಿದ್ದಾರೆ.
ಹಳೆಯ ಪ್ರಕರಣಕ್ಕೆ ದಿಡೀರ್ ಜೀವ?:
2001ರಲ್ಲಿ ರಾಮಸ್ವಾಮಿ ಪಾಳ್ಯದಲ್ಲಿ ಟಿಜೆ ಅಬ್ರಹಾಂ ವಾಸವಾಗಿದ್ದರು. ಇವರು ಮನೆಯ ಮೊದಲ ಮಹಡಿಯಲ್ಲಿ ಕಂಪ್ಯೂಟರ್ ಬಿಡಿ ಭಾಗಗಳ ಮಾರಾಟಗಾರ ರಾಜನ್ ಚೌಧರಿ ಎಂಬುವರು ನೆಲೆಸಿದ್ದು, ಮನೆಯ ಸಮೀಪ ವಾಹನ ನಿಲುಗಡೆಯ ವಿಚಾರವಾಗಿ ಅಬ್ರಹಾಂ ಮತ್ತು ಚೌಧರಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆಗ ಕೋಪಗೊಂಡ ಅಬ್ರಹಾಂ, ಚೌಧರಿಗೆ ಬ್ಯಾಟ್ನಿಂದ ಹಲ್ಲೆ ನಡೆಸಿದ್ದರು.
ಈ ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಅಬ್ರಹಾಂ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅಬ್ರಹಾಂ ಅವರ ಬಂಧನವಾಗಿತ್ತು. ನಂತರ ಜಾಮೀನು ಪಡೆದುಕೊಂಡಿದ್ದರು. ಈ ಪ್ರಕರಣದ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ 2001ರಲ್ಲಿ ಅಬ್ರಹಾಂ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು.
ಆದರೆ ಘಟನೆ ಬಳಿಕ ರಾಮಸ್ವಾಮಿಪಾಳ್ಯದಿಂದ ಅಬ್ರಹಾಂ ಬೇರೆಡೆ ವಾಸ್ತವ್ಯ ಬದಲಾಯಿಸಿದ್ದರು. ಇದರಿಂದ ಕೋರ್ಟ್ನಿಂದ ಹಳೆ ಮನೆಯ ವಿಳಾಸಕ್ಕೆ ಸಮನ್ಸ್ ಗಳು ತಲುಪಿದ್ದವು. ಈಚೆಗೆ ಮಾಧ್ಯಮಗಳಲ್ಲಿ ಅಬ್ರಹಾಂ ಕಾಣಿಸಿಕೊಂಡ ನಂತರ ಪೊಲೀಸರು, ನ್ಯಾಯಾಲಯದಲ್ಲಿ ಅಬ್ರಹಾಂ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿದ ನ್ಯಾಯಾಲಯವು ಮತ್ತೂಮ್ಮೆ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ಈ ಆದೇಶದಂತೆ ಅಬ್ರಹಾಂ ಬಂಧನವಾಗಿದೆ.












Click it and Unblock the Notifications