ನಿಗೂಢವಾಗಿರುವ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ವಿಜಯನಗರದ ಮಾರೇನಹಳ್ಳಿ ಮುಖ್ಯರಸ್ತೆ ಸಿದ್ದೇಶ್ವರ ನಗರದ ನಿವಾಸಿ 32 ವರ್ಷ ಸೌಮ್ಯ ಅವರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಸೌಮ್ಯ ಅವರ ಪತಿ ಶ್ರೀರಂಗರಾಜು ಕೂಡಾ ಸಹಕಾರ ಸಂಘದ ಬ್ಯಾಂಕ್ ವೊಂದರಲ್ಲಿ ಉದ್ಯೊಗಿಯಾಗಿದ್ದಾರೆ.
ಕಳೆದ 14 ವರ್ಷಗಳ ಹಿಂದೆ ಮದುವೆಯಾಗಿದ್ದ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸೌಮ್ಯ ಅವರು ತಮ್ಮ ಸಾವಿಗೆ ಕಾರಣ ತಿಳಿಸಿಲ್ಲ.
ವೇಲ್ ನಿಂದ ಕುತ್ತಿಗೆ ಬಿಗಿದುಕೊಂಡು ಸೌಮ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿಯನ್ನು ನೇಣಿನಿಂದ ಇಳಿಸಿ, ಆಸ್ಪತ್ರೆಗೆ ಕರೆದೊಯ್ದೆ ಆದರೆ, ಆಕೆ ಜೀವ ಉಳಿಸಿಕೊಳ್ಳಲು ಆಗಲಿಲ್ಲ ಎಂದು ರಂಗರಾಜು ಹೇಳಿಕೆ ಕೊಟ್ಟಿದ್ದಾರೆ.
ಆದರೆ, ಡೆತ್ ನೋಟ್ ಬರೆದಿಟ್ಟಿದ್ದು, 'ನೀ ಚೆನ್ನಾಗಿರು' ಎಂದಷ್ಟೇ ಬರೆಯಲಾಗಿದೆ. ಸೌಮ್ಯ ಅವರು ಯಾರ ಬಗ್ಗೆ ಈ ರೀತಿ ಬರೆದಿದ್ದಾರೆ ಎಂಬುದು ಇನ್ನೂ ತಿಳಿಯಬೇಕಿದೆ. ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಪೊಲೀಸ್ ಠಾಣಾಧಿಕಾರಿಗಳು ಹೇಳಿದ್ದಾರೆ.
ಮಾನಸಿಕ ಕಿರುಕುಳವೇ ಕಾರಣ?: ಸೌಮ್ಯ ಅವರಿಗೆ ಅವರ ಪತಿ ಶ್ರೀರಂಗರಾಜು ಪ್ರತಿನಿತ್ಯ ಕಾಟ ಕೊಡುತ್ತಿದ್ದರು. ಹೊಡೆದು ಬಡೆದು ಮಾಡುತ್ತಿದ್ದರು. ಆತ ನೀಡುತ್ತಿದ್ದ ಮಾನಸಿಕ ಹಿಂಸೆ ತಾಳಲಾರದೆ ನನ್ನ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಮಗೆ ನ್ಯಾಯ ಕೊಡಿಸಿ ಎಂದು ಸೌಮ್ಯ ಅವರ ಅಜ್ಜ, ಪೊಲೀಸರ ಮೊರೆ ಹೊಕ್ಕಿದ್ದಾರೆ. ಸೌಮ್ಯ ಅವರ ಮಕ್ಕಳು ಅಮ್ಮನ ಸಾವಿನಿಂದ ಶಾಕ್ ಗೆ ಒಳಗಾಗಿದ್ದು, ಅಜ್ಜನ ಆಶ್ರಯದಲ್ಲಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ವ್ಯವಸ್ಥಾಪಕಿ ರಾಧಾ ಎಂಬುವರು ನಾಪತ್ತೆಯಾಗಿದ್ದಾರೆ ಎಂದು ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹನುಮಂತ ನಗರ ನಿವಾಸಿ ರಾಧಾ ಅವರು ಭಾನುವಾರ ಬೆಳಗ್ಗೆ ಮಾರ್ನಿಂಗ್ ವಾಕ್ ಗೆ ಹೋಗಿದ್ದವರು ಮನೆಗೆ ಬಂದಿಲ್ಲ. ಎಲ್ಲೂ ಕಾಣುತ್ತಿಲ್ಲ ಅವರ ಕುಟುಂಬದವರು ದೂರು ನೀಡಿದ್ದು, ಗಿರಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.












Click it and Unblock the Notifications