ರಾಮ ಒಬ್ಬ ಕೆಟ್ಟ ಗಂಡ: 'ರಾಮ' ಜೇಠ್ಮಲಾನಿ
ಅಹಮದಾಬಾದ್, ನ.9: ಈ ಅವಿವೇಕಿ ರಾಜಕಾರಣಿಗಳಿಗೆ ಏನಾಗಿದೆ ಅಂತ? ರಾತ್ರಿ 9-10 ಗಂಟೆಯಲ್ಲಿ ಟಿವಿ ನ್ಯೂಸ್ ಚಾನಲುಗಳಲ್ಲಿ ಕೈಯಲ್ಲಿ ಮದ್ಯದ ಮಗ್ ಹಿಡಿದು live ಕಾರ್ಯಕ್ರಮನಲ್ಲಿದ್ದೇನೆ, ಕೋಟ್ಯಂತರ ಮಂದಿ ನೋಡುತ್ತಿರುತ್ತಾರೆ ಎಂಬ ಪ್ರಜ್ಞೆಯೂ ಇಲ್ಲದೆ (ನಿಶೆಯಲ್ಲಿ ನಶೆಯೇರಿದ ಮೇಲೆ ಯಾವ ಪ್ರಜ್ಞೆ?) ಫರ್ಮಾನುಗಳನ್ನು ಹೇರುವ ಇಂಥವರ ಮಧ್ಯೆ ಇದ್ದೀವಲ್ಲಾ ಅದು ನಮ್ಮ ದೌರ್ಭಾಗ್ಯವೇ ಸರಿ.
ಮೊನ್ನೆ ಬಿಜೆಪಿಯ ಹಾಲಿ ಅಧಿನಾಯಕನೇ ದಾರ್ಶನಿಕ ಸ್ವಾಮಿ ವಿವೇಕಾನಂದರನ್ನು ದೇಶಭ್ರಷ್ಟ ದಾವೂದ್ ಇಬ್ರಾಹಿಂಗೆ ಹೋಲಿಸಿ ಪಾವನವಾದರು. ಅದನ್ನೇ ಮುಂದಿಟ್ಟುಕೊಂಡು ತಮ್ಮ ಮಗನ ಕೈಯಲ್ಲಿ ರಾಜೀನಾಮೆ ಕೊಡಿಸಿ, ಕೃತಾರ್ಥರಾಗಿದ್ದ ಹಿರಿಯ ವಕೀಲ, ಬಿಜೆಪಿ ಸಂಸದ ರಾಮ ಜೇಠ್ಮಲಾನಿ ಇದೀಗ ರಾಮ, ಲಕ್ಷ್ಮಣರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದರಿಂದ ರಾಮ ನಾಮ ಜಪಿಸುವ ಪಕ್ಷಕ್ಕೆ ಸತತ ಮುಜುಗುರವೊದಗಿದೆ.
ತಮ್ಮ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ರಾಮನ ಬಗ್ಗೆ ರಾಮ ಜೇಠ್ಮಲಾನಿ ಈ ವಿವಾದಿತ ಹೇಳಿಕೆ ನೀಡಿದ್ದಾರೆ. ನಿನ್ನೆ ಗುರುವಾರ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಜೇಠ್ಮಲಾನಿ, 'ರಾಮ ಒಬ್ಬ ಕೆಟ್ಟ ಗಂಡ. ಲಕ್ಷ್ಮಣನು ರಾಮನಿಗಿಂತ ಕೆಟ್ಟವ' ಎಂದು ಮರ್ಯಾದಾ ಪುರುಷೋತ್ತಮನ ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ.
'ರಾಮ ಒಬ್ಬ ಕೆಟ್ಟ ಗಂಡ. ಏಕೆಂದರೆ ಯಾವುದೋ ಅನಾಮಿಕ ಮೀನುಗಾರನೊಬ್ಬ ಹೇಳಿದ ಅಂತ ಆತ ತನ್ನ ಪತ್ನಿಯನ್ನು ಯಾವುದೇ ಸಕಾರಣವಿಲ್ಲದೆ ಕಾಡಿಗೆ ಕಳಿಸಿದ. ನಾನು ಆತನನ್ನು ಒಂಚೂರೂ ಇಷ್ಟಪಡೊಲ್ಲ. ಇನ್ನು, ಆ ಲಕ್ಷ್ಮಣನೋ? ಆತ ತನ್ನಣ್ಣನಿಗಿಂತ ಕೆಟ್ಟವ. ಏಕೆಂದರೆ ಸೀತೆಯನ್ನು ರಾವಣ ತನ್ನ ಸಮ್ಮುಖದಲ್ಲೇ ಅಪಹರಿಸಿದರೂ ಸುಮ್ಮನಿದ್ದ. ಅತ್ತಿಗೆಯ ಮುಖವನ್ನು ತಾನೆಂದೂ ನೋಡಿದವನಲ್ಲ. ಹೀಗಾಗಿ ಅಪಹರಣಗೊಂಡವಳು ಯಾರೆಂದು ಗುರುತಿಸಲು ಆಗಲಿಲ್ಲ' ಎಂದು ನೆಪ ಹೇಳಿದ ಎಂದು ನಗೆಯಾಡುತ್ತಾ ಜೇಠ್ಮಲಾನಿ ಹೇಳಿದ್ದಾರೆ.