ಮತ್ತೆ ಬೇಲಿ ಹಾರಿದ 'ಸ್ವತಂತ್ರ ಶಾಸಕ' ವರ್ತೂರು ಪ್ರಕಾಶ್

ಈ ಬಾರಿ ಅವರು ಅಪ್ಪಿಕೊಂಡಿರುವುದು ಮತ್ತೊಬ್ಬ ಪಕ್ಷೇತರ ಶಾಸಕ ಬಿ. ಶ್ರೀರಾಮುಲು ಅವರನ್ನು. ಇದ್ದಷ್ಟು ದಿನ ಸಚಿವ ಪದವಿ ಅನುಭವಿಸಿ, ಇನ್ನೇನು ಬಿಜೆಪಿ ಸರಕಾರ ಅಂತ್ಯ ಕಾಣುತ್ತಿದೆ ಎಂಬುದು ಕುಶಾಗ್ರಮತಿ ಪ್ರಕಾಶ್ ಗಮನಕ್ಕೆ ಬರುತ್ತಿದ್ದಂತೆ ಮುಂದಿನ ಚುನಾವಣೆ ವೇಳೆಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿ ಕೊಂಡಿದ್ದಾರೆ.
'ಅಹಿಂದ' ಸಿದ್ದರಾಮಯ್ಯನವರನ್ನು ಉದ್ದೇಶಪೂರ್ವಕವಾಗಿ ಮರೆಯುತ್ತಾ, ಸದಾನಂದ ಗೌಡರನ್ನು ನೆರಳಿನಂತೆ ಹಿಂಬಾಲಿಸಿದ್ದ ಸನ್ಮಾನ್ಯ ವರ್ತೂರು ತಮ್ಮದೇ ಜಿಲ್ಲೆಯ 'ಕೆಎಚ್' ಜತೆ ಗುರುತಿಸಿಕೊಳ್ಳಲು ಹೊಂಚುಹಾಕಿದರು. ಆದರೆ ವರ್ತೂರು ತಮಗೆಂದಿಗೂ ಮಗ್ಗಲುಮುಳ್ಳು ಎಂದು ಅರ್ಥೈಸಿಕೊಂಡಿರುವ ಮುನಿಯಪ್ಪ ಆತನನ್ನು ಹತ್ತಿರಕ್ಕೂ ಬರ ಮಾಡಿಕೊಳ್ಳಲಿಲ್ಲ.
ಅಂದಿನಿಂದ ಬಿಜೆಪಿಗೇ ತನ್ನ ಅಖಂಡ ನಿಷ್ಠೆ ಎಂದು ಘೋಷಿಸಿಕೊಂಡು ಸಚಿವ ಸ್ಥಾನ ಗಿಟ್ಟಿಸಿದರು. ಪಾಪ ಬಿಜೆಪಿಗೂ ಪಕ್ಷೇತರ ವರ್ತೂರು ಬೇಕಿತ್ತು. ಹಾಗಾಗಿ ಆತನಿಗೆ ಮಣೆ ಹಾಕಿತು. ಆದರೆ ಈಗ ಬಿಜೆಪಿಯೇ ವಿನಾಶದತ್ತ ಸಾಗಿದೆ ಎಂದು ಬಗೆದಿರುವ ವರ್ತೂರು ಸಾಹೇಬರು, 'ಶ್ರೀರಾಮುಲು ನಿಜವಾದ ಜನನಾಯಕ, ಆತನೇ ನನ್ನ ನಾಯಕ' ಎಂದು ರಾಮುಲು ಜಪ ಮಾಡುತ್ತಿದ್ದಾರೆ. ಆದರೆ ವಿಧಾನಸಭೆ ಚುನಾವಣೆ ಸನಿಹದಲ್ಲೇ ಇರುವಾಗ ವರ್ತೂರರ ಈ ನಡೆ ಕೋಲಾರ ಜನತೆಗೆ ಆಶ್ಚರ್ಯವನ್ನೇನೂ ತಂದಿಲ್ಲ.
'ಬೇಲಿ ಜಿಗಿಯುವ' ವರ್ತೂರು ಬಗ್ಗೆ ರಾಮುಲು ಏನನ್ನುತ್ತಾರೆ!?: 'ಮೊನ್ನೆ ರಾಮುಲು ತಮ್ಮೂರಿಗೆ ಬಂದಿದ್ದರು. ಆಗ ನಾನು ಅವರ ಜತೆ ಗುರುತಿಸಿಕೊಳ್ಳಲಾಗಲಿಲ್ಲ. ಏಕೆಂದರೆ ನಾನು ಬಿಜೆಪಿ ಸಚಿವ. ಹಾಗಾಗಿ ಜಿಲ್ಲೆಯಲ್ಲಿ ಅವರ ಜತೆಗೆ ಹೆಜ್ಜೆ ಹಾಕಲು ಆಗಲಿಲ್ಲ. ಆದರೆ ಇನ್ನು ತಡೆಯುವ ಮಾತೇ ಇಲ್ಲ' ಎಂದು ವರ್ತೂರು, ರಾಮುಲುಗೆ ಜೈ ಅಂದಿದ್ದಾರೆ.
'ಸದ್ಯದಲ್ಲೇ ನಾವಿಬ್ಬರೂ ಒಂದೇ ವೇದಿಯೆಲ್ಲಿ ಕಾಣಿಸಿಕೊಳ್ಳುತ್ತೇವೆ' ಎಂದೂ ವರ್ತೂರು ಪ್ರಕಟಿಸಿದರು. ಮರೆತ ವಿಷಯವೇನೆಂದರೆ ಇದೇ ವರ್ತೂರು ಅವರು ಮೊನ್ನೆ ಬಳ್ಳಾರಿ ಗ್ರಾಮಾಂತರ ವಿಧಾನಸಭೆ ಉಪಚುನಾವಣೆಯಲ್ಲಿ ರಾಮುಲು ವಿರುದ್ಧ ಪ್ರಚಾರ ಮಾಡಿದ್ದರು.
ಆದರೆ ಈಗ 'ನಾನು, ರಾಮುಲು ಸೋದರರಿದ್ದಂತೆ. ಅಹಿಂದ ಕಡೆಗೆ ರಾಮುಲುದು ಅಖಂಡ ನಿಷ್ಠೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಶೋಷಿತ ವರ್ಗದವರು ಈ ರಾಜ್ಯದ ಚುಕ್ಕಾಣಿ ಹಿಡಿಯುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ನಾವಿಬ್ಬರೂ ಒಟ್ಟಿಗೆ ಕೆಲ್ಸ ಮಾಡ್ತೇವೆ' ಎಂದು ವರ್ತೂರು ಘೋಷಿಸಿದ್ದಾರೆ. ಆದರೆ ಬೇಲಿ ಜಿಗಿಯುವ ವರ್ತೂರು ಪ್ರಕಾಶರ ಬಗ್ಗೆ ಶ್ರೀರಾಮುಲು ಏನನ್ನುತ್ತಾರರೋ ಕಾದು ನೋಡಬೇಕಾಗಿದೆ.












Click it and Unblock the Notifications