ಬಿಎಸ್ವೈಗೆ ಮುಖ್ಯಮಂತ್ರಿ/ ರಾಜ್ಯಾಧ್ಯಕ್ಷ ಪಟ್ಟ: ಈಶ್ವರಪ್ಪ
ಬೆಂಗಳೂರು, ಅ. 27: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ 'ಬೃಹಸ್ಪತಿ' ಎಂಬ ಬಿರುದಾಂಕಿತ ಕೆಎಸ್ ಈಶ್ವರಪ್ಪ ಅವರು ಪಕ್ಷ ಬಿಟ್ಟು ಬಹುದೂರ ಸಾಗಿರುವ ಯಡಿಯೂರಪ್ಪ ಅವರನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಅವರನ್ನ ಪಕ್ಷದಲ್ಲೇ ಉಳಿಸಿಕೊಳ್ಳುವ ಮಾತನ್ನಾಡಿದ್ದಾರೆ.
'ಈ ಹಿಂದೆಯೂ ಮಾಧ್ಯಮಗಳು ಇದೇ ರೀತಿ ಬೊಂಬಡಾ ಹೊಡೆದಿದ್ದವು. ಯಡಿಯೂರಪ್ಪ (ಪಕ್ಷ ಬಿಟ್ಟು) ಹೋಗೇಬಿಟ್ಟರೂ ಎಂದೇ ಡಂಗುರ ಸಾರಲಾಗಿತ್ತು. ಆದರೆ ನಮ್ಮ ಪಕ್ಷದ ಹಿರಿಯ ತಲೆಗಳು ಆಗ (ಇಸವಿ ಮರೆತುಹೋಗಿದೆ) ಅವರನ್ನು ಪಕ್ಷದಲ್ಲೇ ಉಳಿಯುವಂತೆ ಮಾಡಲಿಲ್ವಾ? ಹಾಗಾಗಿ ಈಗಲೂ ಅಷ್ಟೇ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುತ್ತೇವೆ' ಪಕ್ಷದ ರಾಜ್ಯಾಧ್ಯಕ್ಷರೂ ಆದ ಈಶ್ವರಪ್ಪ ಈಗ್ಗೆ ಕೆಲ ಹೊತ್ತಿನ ಮುಂಚೆ ಘೋಷಿಸಿದ್ದಾರೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪರಿಶಿಷ್ಟ ವರ್ಗ ಮೋರ್ಚಾ ನಡೆಯುತ್ತಿದ್ದು, ಆ ಅಂಗವಾಗಿ ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರಿಗೆ ಈ ವಿಷಯವನ್ನು ತಿಳಿಸಿದರು.

ಯಡಿಯೂರಪ್ಪ ಪಕ್ಷದ ಹಿರಿಯ ನಾಯಕರು. ಅವರ ಆಶೀರ್ವಾದ/ಮಾರ್ಗದರ್ಶನ ನಮಗೆ ಬೇಕೇ ಬೇಕು. ಹಾಗಾಗಿ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುತ್ತೇವೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಯಡಿಯೂರಪ್ಪಗೆ ಮುಖ್ಯಮಂತ್ರಿ/ ರಾಜ್ಯಾಧ್ಯಕ್ಷ ಪಟ್ಟ: 'ಇದು ನನ್ನೊಬ್ಬನ ಅಭಿಪ್ರಾಯವಲ್ಲ. ನಿನ್ನೆ ರಾತ್ರಿ ಎಲ್ಲ ಹಿರಿಯ ನಾಯಕರೂ ಸಭೆ ಸೇರಿದ್ದೆವು. ಎಲ್ಲರ ಒಕ್ಕೊರಲ ಅಭಿಪ್ರಾಯದಂತೆ ಯಡಿಯೂರಪ್ಪ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುತ್ತೇವೆ. ಈ ಸಂಬಂಧ ಇದೇ 30ರಂದು ದೆಹಲಿಯಲ್ಲಿ ವರಿಷ್ಠರ ಜತೆ ಮಾತನಾಡುತ್ತೇವೆ. ವರಿಷ್ಠರ ತೀರ್ಮಾನದಂತೆ ಯಡಿಯೂರಪ್ಪಗೆ ಮುಖ್ಯಮಂತ್ರಿ ಪಟ್ಟ ಅಥವಾ ರಾಜ್ಯಾಧ್ಯಕ್ಷ ಪಟ್ಟ ನೀಡಿದರೂ ನಮ್ಮದೇನೂ ಅಭ್ಯಂತರವಿಲ್ಲ' ಎಂದು ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.
ಕುತೂಹಲದ ಸಂಗತಿಯೆಂದರೆ ನಿನ್ನೆ ಮಧ್ಯೆ ರಾತ್ರಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮತ್ತೊಬ್ಬ ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಡಾಲರ್ಸ್ ಕಾಲನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಧಾವಿಸಿ, ಮಾತುಕತೆ ನಡೆಸಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಪಕ್ಷ ತೊರೆಯುವುದು ಬೇಡವೆಂದು ಇಬ್ಬರೂ ನಾಯಕರು ಯಡಿಯೂರಪ್ಪಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.












Click it and Unblock the Notifications