ಹೆಬ್ಬೆಟ್ಟು ಮಂಜನ ವಿರುದ್ಧ ರೆಡ್ಕಾರ್ನರ್ ನೋಟಿಸ್

ಇತ್ತೀಚೆಗೆ ಉದ್ಯಮಿ ದಯಾನಂದ ಪೈ ಅವರ ಕಾರಿನ ಮೇಲೆ ಹೆಬ್ಬೆಟ್ಟು ಮಂಜನ ಸಹಚರರು ಗುಂಡಿನ ದಾಳಿ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮಂಜನ ನಾಲ್ವರು ಸಹಚರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಖಾಸಗಿ ಮಾಧ್ಯಮಗಳ ಜೊತೆ ಹೆಬ್ಬೆಟ್ಟು ಮಂಜ ಮಾತನಾಡಿ, ಈ ಕೃತ್ಯದ ಹಿಂದೆ ತನ್ನ ಕೈವಾಡ ಇರುವುದನ್ನು ದೃಢಪಡಿಸಿದ್ದ.
ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಹಲವು ಅಪರಾಧ ಕೃತ್ಯ ಎಸಗಿ ಕೆಲ ವರ್ಷಗಳಿಂದ ಕೊಲ್ಕತ್ತ ಮೂಲಕ ನೇಪಾಳಕ್ಕೆ ತೆರಳಿ ಅಲ್ಲಿಂದ ಮಲೇಷ್ಯಾಕ್ಕೆ ತೆರಳಿ ಸೌದಿ ಅರೇಬಿಯಾದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.
ವಿದೇಶದಲ್ಲೆ ಇದ್ದುಕೊಂಡು ತನ್ನ ಸಹಚರರ ಮೂಲಕ ಬೆಂಗಳೂರಿನ ಪ್ರತಿಷ್ಠಿತ ಉದ್ಯಮಿಗಳಿಗೆ ಪ್ರಾಣ ಬೆದರಿಕೆ ಹಾಕಿ ಹಫ್ತಾ ವಸೂಲಿ ಮಾಡುತ್ತಿದ್ದಾನೆ ಎಂದ್ ತಿಳಿದು ಬಂದಿದೆ.
ಕುಖ್ಯಾತ ರೌಡಿ ಹೆಬ್ಬೆಟ್ಟು ಮಂಜನ ವಿರುದ್ಧ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿರುವ ಬೆಂಗಳೂರು ಪೊಲೀಸರು ಆರೋಪಿಯನ್ನು ಗಡಿಪಾರು ಮಾಡುವಂತೆ ಸೌದಿ ಅರೇಬಿಯಾಗೆ ಮಾಹಿತಿ ರವಾನಿಸಿರುವುದಾಗಿ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಬಿ.ದಯಾನಂದ ತಿಳಿಸಿದ್ದಾರೆ.
ಹೆಬ್ಬೆಟ್ಟು ಮಂಜನ ವಿರುದ್ಧ ಶಿವಮೊಗ್ಗ ವಿವಿಧ ಪೊಲೀಸ್ ಠಾಣೆಯಲ್ಲಿ 11 ಪ್ರಕರಣ ದಾಖಲಾಗಿದ್ದು ಬೆಂಗಳೂರು ನಗರದಲ್ಲಿ 4 ಪ್ರಕರಣಗಳು ದಾಖಲಾಗಿವೆ. 3 ಕೊಲೆ, 3 ಕೊಲೆ ಯತ್ನ, 4 ದೊಂಬಿ, 2 ಬೆದರಿಕೆ ಹಾಗೂ 3 ದರೋಡೆ ಪ್ರಕರಣಗಳು ಹೆಬ್ಬೆಟ್ಟು ಮಂಜನ ಭಾಗಿಯಾಗಿದ್ದಾನೆ.
ಶಿವಮೊಗ್ಗ ಮೂಲದವನಾದ ಮಂಜ,, ಪಿಯುಸಿ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ್ದ. ಶಾಲಾ, ಕಾಲೇಜು ದಿನಗಳಲ್ಲಿ ಪ್ರತಿಭಾವಂತೆ ಫುಟ್ಬಾಲ್ ಆಟಗಾರನಾಗಿದ್ದ.
ಉದ್ಯೋಗ ಅರಸಿ ಬೆಂಗಳೂರಿಗೆ ಬಂದವನು ಕೊನೆಗೆ ಪಾತಕ ಲೋಕಕ್ಕೆ ಇಳಿದುಬಿಟ್ಟ. ಆರಂಭದಲ್ಲಿ ಸಣ್ಣ ಪುಟ್ಟ ಗ್ಯಾಂಗ್ ವಾರ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ. ನಂತರ ತನ್ನದೇ ಗುಂಪು ಕಟ್ಟಿಕೊಂಡು ದರೋಡೆ, ಸುಲಿಗೆ ಮಾಡತೊಡಗಿದ>
ಕುಖ್ಯಾತ ಕೊರಂಗು ಕೃಷ್ಣನ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜೈಲಿಗೆ ಕಳುಹಿಸಲಾಗಿತ್ತು. ಆತನನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಎರಡು ವರ್ಷಗಳ ಹಿಂದೆ ಬಿಡುಗಡೆ ಮಾಡಲಾಗಿತ್ತು. ನಂತರ ಆತ ಎಲ್ಲಿ ಹೋದ ಏನಾದ ಎಂಬುದರ ಬಗ್ಗೆ ಸುಳಿವು ಸಿಕ್ಕಿರಲಿಲ್ಲ.
ದಯಾನಂದ ಪೈ ಅವರ ಮೇಲೆ ದಾಳಿ ಮಾಡಿದ ನಂತರ ಪೊಲೀಸರು ಮತ್ತೊಮ್ಮೆ ಮಂಜನ ಬೇಟೆಯಲ್ಲಿ ತೊಡಗಿದ್ದಾರೆ.












Click it and Unblock the Notifications