ವೀರಶೈವರು ಹಿಂದೂಗಳಲ್ಲ ಅಂದ್ರು, ಅವ್ರು

ನಂತರ ಮೈಕ್ ಬಳಿ ಬಂದ ಯಡಿಯೂರಪ್ಪ ಅವರು ಹಳೆ ವಿವಾದಕ್ಕೆ ಮತ್ತೆ ಹೊಸದಾಗಿ ಚಾಲನೆ ನೀಡದೆ ನುಣಚಿಕೊಂಡರು.
'ಯಾರಾದರೂ ನಿಮ್ಮ ದೇಶ ಯಾವುದು ಎಂದು ಕೇಳಿದರೆ ಹಿಂದೂಗಳ ದೇಶ ಎಂದು ಹೇಳುತ್ತೇವೆ. ನಾವೆಲ್ಲರೂ ಭಾರತೀಯರು ಎನುತ್ತೇವೆ. ಆದರೆ ತಿಪ್ಪಣ್ಣನವರ ಅಭಿಪ್ರಾಯದ ಕುರಿತಂತೆ ತಾನೇನೂ ಹೇಳುವುದಿಲ್ಲ. ಸಮಾಜದ ಗುರು-ಹಿರಿಯರು ಚರ್ಚಿಸುತ್ತಾರೆ ಎಂದು ಹೇಳಿ ವಿವಾದಕ್ಕೆ ಆಸ್ಪದ ಕೊಡದೆ ಜಾರಿಗೊಂಡರು.
ಕುವೆಂಪು ರಂಗಮಂದಿರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಂಘಟನೆಯ ಶಿವಮೊಗ್ಗ ಜಿಲ್ಲಾ ಘಟಕದ ಉದ್ಘಾಟನೆ ಸಮಾರಂಭದಲ್ಲಿ ವೀರಶೈವರು ಹಿಂದೂಗಳಲ್ಲ ಎಂಬ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ರಾಜ್ಯಾಧ್ಯಕ್ಷ ತಿಪ್ಪಣ್ಣನವರ ಹೇಳಿಕೆ ನೀಡಿದ್ದು ವಿಶೇಷ.
ವೀರಶೈವರು ಹಿಂದೂಗಳಲ್ಲ ಎಂಬುದನ್ನು ಈಗಾಗಲೇ ಮಹಾಸಭಾ ಒಪ್ಪಿಕೊಂಡು ಅಂಗೀಕರಿಸಿದೆ. ಈ ಹಿಂದೆ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಯಿತು. ಇದೀಗ ವಿರೋಧ ವ್ಯಕ್ತಪಡಿಸಿದವರೂ ಸಹಮತ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಪ್ಪಣ್ಣ ಹೇಳಿದರು.
ಹಿಂದೂ ಧರ್ಮದ ಚಾತುವರ್ಣ ವ್ಯವಸ್ಥೆಯನ್ನು ವಿರೋಧಿಸಿ ವೀರಶೈವ ಧರ್ಮವನ್ನು ಹುಟ್ಟು ಹಾಕಲಾಯಿತು. ಹಿಂದೂ ಧರ್ಮದಲ್ಲಿ ಇಂದಿಗೂ ಕೂಡ ಚಾತುವರ್ಣ ವ್ಯವಸ್ಥೆ ಮುಂದುವರಿದುಕೊಂಡು ಬಂದಿದೆ. ಆದರೆ ವೀರಶೈವ ಧರ್ಮದಲ್ಲಿ ಆ ವ್ಯವಸ್ಥೆಯಿಲ್ಲ.
ಇದರ ಜೊತೆಗೆ ದಲಿತ ಬ್ರಾಹ್ಮಣನಾಗಲು ಹಿಂದೂ ಧರ್ಮದಲ್ಲಿ ಸಾಧ್ಯವಿಲ್ಲ. ಆದರೆ ವೀರಶೈವ ಸಮಾಜದಲ್ಲಿ ಯಾವುದೇ ಜಾತಿ, ಧರ್ಮದವರು ಪರಿವರ್ತನೆಯಾಗಿ ವೀರಶೈವನಾಗಬಹುದು. ಇದು ಎರಡು ಧರ್ಮಗಳ ನಡುವಿನ ವ್ಯತ್ಯಾಸ ತೋರಿಸುತ್ತದೆ. ಹೀಗಾಗಿ ವೀರಶೈವರು ಹಿಂದೂಗಳೇ ಅಲ್ಲ ಎಂದು ತಿಪ್ಪಣ್ಣ ವಿವರಿಸಿದರು.
ಹಿಂದೂ ಎಂಬ ಧರ್ಮವೇ ಇಲ್ಲ. ಹಿಂದೂ ಎಂಬುದು ಜೀವನ ವಿಧಾನವಾಗಿದೆ ಈ ಬಗ್ಗೆ ಸುಪ್ರೀಂಕೋರ್ಟ್ ಕೂಡಾ ಆದೇಶ ನೀಡಿದೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ: ವೀರಶೈವರು ಹಾಗೂ ಲಿಂಗಾಯಿತರು ಬೇರೆ ಬೇರೆಯಲ್ಲ. ಈ ಕುರಿತಂತೆ ಗೊಂದಲ ಸೃಷ್ಟಿಸುವುದು ಬೇಡ. ವೀರಶೈವ ಸಮಾಜದಲ್ಲಿರುವ ಉಪ ಪಂಡಗಡಗಳನ್ನು ಒಂದೂಗೂಡಿಸಬೇಕಿದೆ. ಸರ್ಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶದಿಂದ ಉಪ ಪಂಗಡಗಳನ್ನು ಸಂಘಟಿಸುತ್ತಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಸಕಾರದ ಸವಲತ್ತುಗಳನ್ನು ಪಡೆಯುವುದಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ ಉಪ ಪಂಗಡಗಳು ಒಗ್ಗೂಡಿ ಸಮಾಜವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದು ಶಿವಶಂಕರಪ್ಪ ಸಲಹೆ ನೀಡಿದರು.
ಸಮಾರಂಭದಲ್ಲಿ ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಬಸವ ಮರುಳ ಸಿದ್ದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯಸಭೆ ಸದಸ್ಯ ಆಯನೂರು ಮಂಜುನಾಥ್, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಜಿ.ಪಂ. ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications