ಯಡಿಯೂರಪ್ಪ ಅವ್ರಿಗೆ ಆದಷ್ಟು ಬೇಗ ಬ್ರೇಕ್ ಹಾಕಿ
ಮಲ್ಲೇಶ್ವರಂನ ಬಿಜೆಪಿ ಕಚೇರಿ(ಜಗನ್ನಾಥ ಭವನ)ಯಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಡಿಸಿಎಂ ಕೆಎಸ್ ಈಶ್ವರಪ್ಪ, ಸಂಸದ ಪ್ರಹ್ಲಾದ್ ಜೋಶಿ ಒಳಗೊಂಡಂತೆ ಪಕ್ಷದ ಪ್ರಮುಖರು ಸೋಮವಾರ (ಅ.22) ಸಮಾಲೋಚನೆ ಮುಕ್ತಾಯವಾದ ಮೇಲೆ ಸದಾನಂದ ಗೌಡರು ಮೇಲ್ಕಂಡ ಹೇಳಿಕೆ ನೀಡಿದ್ದಾರೆ.
ಅಸಲಿಗೆ, ಚಲನಚಿತ್ರದಲ್ಲಿ ನಟಿಸುವ ಬಗ್ಗೆ ಸ್ಪಷ್ಟನೆ ನೀಡಲು ಸುದ್ದಿಗಾರರನ್ನು ಕರೆಸಿಕೊಂಡಿದ್ದ ಸದಾನಂದ ಗೌಡರು, ಯಡಿಯೂರಪ್ಪ ಹಾಗೂ ಪಕ್ಷದ ಮುಂದಿನ ನಡೆ ನುಡಿ ಬಗ್ಗೆ ಹೆಚ್ಚು ಮಾತನಾಡಿದರು.
'ಬಿಜೆಪಿಯಲ್ಲಿದ್ದುಕೊಂಡೇ ಪ್ರತ್ಯೇಕ ಪಕ್ಷ ಸ್ಥಾಪನೆ ಮಾತನಾಡುವುದು ಸರಿಯಿಲ್ಲ. ಯಡಿಯೂರಪ್ಪ ಅವರು ಪಕ್ಷ ತೊರೆಯುವ ಬಗ್ಗೆ ಆದಷ್ಟು ಬೇಗ ನಿರ್ಧರಿಸುವುದು ಒಳ್ಳೆಯದು. ರಾಷ್ಟ್ರೀಯ ರಾಜಕೀಯ ಪಕ್ಷವಾಗಿ ಈ ರೀತಿ ಇರಸು ಮುರುಸು ಅನುಭವಿಸುವುದು ಒಳ್ಳೆಯದಲ್ಲ. ಆದಷ್ಟು ಭೇಗೆ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.
ಚುನಾವಣೆಗೂ ಮುನ್ನ ಪಕ್ಷದ ಸಂಘಟನೆಯಾಗಬೇಕಿದ್ದು, ನಿತಿನ್ ಗಡ್ಕರಿ ಅವರು ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುತ್ತಾರೆ ಎಂಬ ಭರವಸೆ ಇದೆ. ಇಲ್ಲದಿದ್ದರೆ ಕಾರ್ಯಕರ್ತರಲ್ಲಿ ಗೊಂದಲ ಬೆಳೆಯುತ್ತಾ ಹೋಗುತ್ತದೆ. ಇದು ಪಕ್ಷದ ಬೆಳವಣಿಗೆಗೆ ಮಾರಕವಾಗುತ್ತದೆ ಎಂದು ಸದಾನಂದ ಗೌಡ ಅಭಿಪ್ರಾಯಪಟ್ಟರು.
ಸಭೆ ನಿರ್ಣಯ: ಪಕ್ಷ ಸಂಘಟನೆಗೆ ಒತ್ತು ನೀಡುವುದು. ಅ.27 ಕ್ಕೆ ಎಸ್ ಸಿ ಎಸ್ ಟಿ ಕಾರ್ಯಕಾರಿಣಿ ಸಭೆ ಸೇರಿದಂತೆ ನಾಲ್ಕಾರು ಸಮಾವೇಶಗಳನ್ನು ಹಮ್ಮಿಕೊಳ್ಳುವುದು. ಬಿಎಸ್ ಯಡಿಯೂರಪ್ಪ ಅವರು ಪಕ್ಷ ತೊರೆಯುವ ವಿಚಾರವನ್ನು ನಿತಿನ್ ಗಡ್ಕರಿ ಅವರಿಗೆ ಒಪ್ಪಿಸುವುದು ಮುಂತಾದ ನಿರ್ಣಯಗಳು ಕೈಗೊಳ್ಳಲಾಗಿದೆ.