ಯಾರಿಗೆ ಬೇಕಾಗಿದೆ ಬಿಜೆಪಿ : ಶಿವಮೊಗ್ಗದಲ್ಲಿ ಬಿಎಸ್ವೈ ಕಹಿನುಡಿ

ಶನಿವಾರ ಶಿವಮೊಗ್ಗದಲ್ಲಿ ನಡೆಸಿದ ಅವರ ಬೆಂಬಲಿಗರ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಬಿಜೆಪಿ ನಾಯಕರು ಮಾಡುತ್ತಿರುವ ಅವಮಾನದಿಂದ ಬೇಸತ್ತು ಪಕ್ಷ ಬಿಡುತ್ತಿದ್ದೇನೆ. ಯಾವ ಪುರುಷಾರ್ಥಕ್ಕೆ ಈ ಪಕ್ಷದಲ್ಲಿರಬೇಕು. ರಾಜ್ಯದ ಮತ್ತು ಹಿರಿಯ ನಾಯಕರು ನನ್ನ ಬೆನ್ನಹಿಂದೆ ಚೂರಿಹಾಕಿದ್ದಾರೆ ಎಂದು ಕಹಿಭಾವನೆ ತುಂಬಿಕೊಂಡು ನುಡಿದರು.
ಈ ಸಮಾವೇಶದಲ್ಲಿ ಯಡಿಯೂರಪ್ಪನವರ ಎಲ್ಲಾ ಕಟ್ಟಾ ಬೆಂಬಲಿಗರು ಭಾಗವಹಿಸಿದ್ದರು. ರೇಣುಕಾಚಾರ್ಯ, ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ, ಸಂಸದ ರಾಘವೇಂದ್ರ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು. ಶಿವಮೊಗ್ಗದಲ್ಲಿ ಭಾರೀ ಮಳೆ ಸುರಿದ್ದದಿಂದ ಬಹಿರಂಗ ಸಭೆಯನ್ನು ಪಿಇಎಸ್ ಕಾಲೇಜು ಸಭಾಂಗಣಕ್ಕೆ ಸ್ಥಳಾಂತರಿಸಬೇಕಾಯಿತು.
ಬಿಜೆಪಿಯಿಂದ ಈಗಾಗಲೆ ಸಾಕಷ್ಟು ದೂರ ನಡೆದಿರುವ ಅವರು, ಎಂದಿನಂತೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಮತ್ತು ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಮಾತಿನ ದಾಳಿಗೆ ಗುರಿ ಮಾಡಿದರು. ಇಬ್ಬರನ್ನೂ ವಾಚಾಮಗೋಚರವಾಗಿ ಬೈದು ಮನಸ್ಸನ್ನು ಹಗುರ ಮಾಡಿಕೊಂಡರು. ಶಿವಮೊಗ್ಗದಲ್ಲಿ ಶನಿವಾರ ಭಾರೀ ಮಳೆ ಸುರಿದಿದ್ದರಿಂದ ಬೆಂಬಲಿಗರ ಸಭೆಯನ್ನು ಪಿಇಎಸ್ ಕಾಲೇಜಿಗೆ ಸ್ಥಳಾಂತರಿಸಬೇಕಾಯಿತು.
ಪಕ್ಷ ಬಿಟ್ಟು ಹೋಗುತ್ತಿದ್ದೇನೆ : ಷಡ್ಯಂತ್ರ ರಚಿಸಿ ನನ್ನನ್ನು ಕಳೆದ ವರ್ಷ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಲಾಯಿತು (31ನೇ ಜುಲೈ, 2011). ಈಶ್ವರಪ್ಪನವರು ನನ್ನ ವಿರುದ್ಧ ಸಂಚು ರಚಿಸುತ್ತಲೇಬಂದರು, ಹಿರಿಯರ ಕಿವಿಯೂದಿ ಇಲ್ಲಸಲ್ಲದ ಮಾತುಗಳನ್ನು ಹೇಳಿ ನನ್ನನ್ನು ಪದಚ್ಯುತರನ್ನಾಗಿ ಮಾಡಿದರು ಎಂದು ಈಶ್ವರಪ್ಪ ವಿರುದ್ಧ ಆಕ್ರೋಶವನ್ನು ಕಾರಿಕೊಂಡರು.
ನಿತಿನ್ ಗಡ್ಕರಿ ಕೂಡ ನನಗೆ ಮೋಸ ಮಾಡಿದರು. ಅವರು ಒಬ್ಬ ವಚನಭ್ರಷ್ಟ ನಾಯಕ. ಮುಖ್ಯಮಂತ್ರಿ ಪದವಿಯಿಂದ ಇಳಿದ 24 ಗಂಟೆಯೊಳಗೆ ರಾಜ್ಯಾಧ್ಯಕ್ಷ ಪಟ್ಟ ಕೊಡುತ್ತೇನೆಂದು ಹೇಳಿ, ಮೋಸ ಮಾಡಿದರು. ನೀಡಿದ ಭರವಸೆಯನ್ನು ಅವರು ಉಳಿಸಿಕೊಳ್ಳಲಿಲ್ಲ. ಬಿಜೆಪಿಗೆ ನಾನು ಬೇಡವಾಗಿದ್ದರೆ, ನನಗೂ ಬಿಜೆಪಿ ಬೇಕಾಗಿಲ್ಲ. ಯಾರಿಗೆ ಬೇಕಾಗಿದೆ ಬಿಜೆಪಿ ಎಂದು ಅವರು ನೋವಿನಿಂದ ಮನದಿಂಗಿತ ವ್ಯಕ್ತಪಡಿಸಿದರು.
ಮತ್ತೆ ಅಧಿಕಾರಕ್ಕೆ ಬರುತ್ತೇನೆ : ನಾನು ಯಾವುದೇ ಸ್ಥಾನದ ಆಕಾಂಕ್ಷೆಯಿಂದ ಪಕ್ಷ ಬಿಡುತ್ತಿಲ್ಲ. ಆದರೆ, ಜನರ ಆಶೀರ್ವಾದವಿದ್ದರೆ ಮತ್ತೆ ಅಧಿಕಾರಕ್ಕೆ ಬಂದೇಬರುತ್ತೇನೆ. ಜನರೂ ಆಶೀರ್ವಾದ ಮಾಡುತ್ತಾರೆಂಬ ನಂಬಿಕೆಯಿದೆ. ಕೂಡಲೆ ಇಡೀ ರಾಜ್ಯದಲ್ಲಿ ಸಂಚರಿಸಲಿದ್ದೇನೆ. ಜನರು ಕೈಬಿಡುವುದಿಲ್ಲವೆಂಬ ನಂಬಿಕೆಯಿದೆ ಎಂದು ಯಡಿಯೂರಪ್ಪ ಆಶಾಭಾವನೆ ವ್ಯಕ್ತಪಡಿಸಿದರು.












Click it and Unblock the Notifications