ಬಿಜೆಪಿ ಅಭ್ಯರ್ಥಿಗೆ ಸೋಲುಣಿಸಿದ ಯಡಿಯೂರಪ್ಪ

ಯಡಿಯೂರಪ್ಪ-ವಿಶ್ವನಾಥ್ ಜೋಡಿ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮಣ್ಣುಮುಕ್ಕಿಸಿದೆ. ಬಿಜೆಪಿಯ ಅಭ್ಯರ್ಥಿ ಮಂಜುಳಾ ಶಂಕರ್ ಅವರಿಗೆ ಕಡಿಮೆ ಮತಗಳು (8) ದಕ್ಕುವ ಮೂಲಕ ಆಡಳಿತ ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಇದೇ ವೇಳೆ ರಾಜಕೀಯವಾಗಿ ಮಹತ್ವವಾಗಿರುವ ಬೆಂಗಳೂರು ನಗರ ಜಿ.ಪಂ. ಯಡಿಯೂರಪ್ಪ ಹಿಡಿತಕ್ಕೆ ಸಿಕ್ಕಿದೆ.
ಯಲಹಂಕ ಬಿಜೆಪಿ, ಲೋಕಾಯುಕ್ತದಲ್ಲಿ ಅಕ್ರಮ ಆಸ್ತಿ ಆರೋಪಿಯಾಗಿರುವ ಶಾಸಕ ಎಸ್ಆರ್ ವಿಶ್ವನಾಥ್ ಅವರ ಪತ್ನಿ ವಾಣಿಶ್ರೀ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕಾಂಗ್ರೆಸ್ ಜತೆ 'ಕೈ'ಜೋಡಿಸಿದ ಪರಿಣಾಮ 10 ತಿಂಗಳ ತರುವಾಯ ಬೆಂ.ಜಿ.ಪಂ ಅಧ್ಯಕ್ಷರಾಗಿ ಅಧಿಕಾರ ಚಲಾಯಿಸಲಿದ್ದಾರೆ.
ಇನ್ನು, ಜೆಡಿಎಸ್ ಮತದಾನದಲ್ಲಿ ಬಾಗವಹಿಸದೆ ಯಡಿಯೂರಪ್ಪ ಪಟಾಲಂಗೆ ಗೆಲುವು ದಕ್ಕುವಂತೆ ನೋಡಿಕೊಂಡಿದೆ. ವಾಣಿಶ್ರೀ ವಿಶ್ವನಾಥ್ ಗೆ 34ರ ಪೈಕಿ 22 ಮತಗಳು ಸಂದಾಯವಾಗಿವೆ.
'ಬೃಹಸ್ಪತಿಗಳಿಗೆ' ಟಾಂಗ್: ಉಪಮುಖ್ಯಮಂತ್ರಿಗಳಾದ ಅಶೋಕ್ ಮತ್ತು ಈಶ್ವರಪ್ಪ ಅವರು ಮಂಜುಳಾ ಶಂಕರ್ ಗೆಲುವಿಗೆ ಇನ್ನಿಲ್ಲದ ಪ್ರಯತ್ನ ನಡೆಸಿದರು. ಆದರೆ ಯಡಿಯೂರಪ್ಪ ಅವರು 'ಬೃಹಸ್ಪತಿಗಳಿಗೆ' ಸರಿಯಾಗಿ ಟಾಂಗ್ ನೀಡಿ ತಮ್ಮ ತಾಕತ್ತೇನು ಎಂಬುದನ್ನು ತೋರಿಸಿದ್ದಾರೆ.
ಗಮನಾರ್ಹವೆಂದರೆ ಉಪಾಧ್ಯಕ್ಷರಾಗಿ ವಿಶ್ವನಾಥ್ ಬೆಂಬಲಿತ ಜಿನ್ನುಬಾಯಿ ಭಾಗ್ಯರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅತ್ತ ಶಿವಮೊಗ್ಗದಲ್ಲೂ ಯಡಿಯೂರಪ್ಪನವರು ಇಂತಹುದೇ ರಾಜಕೀಯ ದಾಳಗಳನ್ನು ಉರುಳಿಸುತ್ತಿರುವುದು ಈಶ್ವರಪ್ಪಗೆ ಎಚ್ಚರಿಕೆ ಗಂಟೆಯಾಗಿದೆ.












Click it and Unblock the Notifications