ಬೆಂಗಳೂರು ಸ್ತಬ್ಧ, ಪಾದಯಾತ್ರೆ ಕೈಬಿಟ್ಟ ಯಡಿಯೂರಪ್ಪ
ಬೆಂಗಳೂರು, ಅ.6: ಕಾವೇರಿ ನದಿ ನೀರಿಗಾಗಿ ನಡೆದಿರುವ ಹೋರಾಟಾರ್ಥವಾಗಿ ಕರ್ನಾಟಕ ಬಂದ್ ಯಶಸ್ವಿಯಾಗಿ ನಡೆದಿದೆ. ರಾಜಧಾನಿ ಬೆಂಗಳೂರು ಸಂಪೂರ್ಣವಾಗಿ ಸ್ತಬ್ಧವಾಗಿದೆ.
ಹೌದು ರಾಜಧಾನಿಯ ರಸ್ತೆಗಳು ಬಿಕೋ ಎನ್ನುತ್ತಿದ್ದು, ಹದಿನೈದು ಇಪ್ಪತ್ತು ವರ್ಷಗಳ ಬೆಂಗಳೂರು ಕಣ್ಣಿಗೆ ಕಟ್ಟುವಂತಿದೆ. ಯಾವುದೇ ವ್ಯಾಪಾರ ಚಟುವಟಿಕೆಗಳೂ ನಡೆಯುತ್ತಿಲ್ಲ. ಮನೆಗಳಲ್ಲೇ ಕುಳಿತು ಮಹಾಜನತೆ ವೀಕೆಂಡ್ ಆಚರಿಸುತ್ತಿದ್ದಾರೆ. ದೌರ್ಭಾಗ್ಯವೆಂದರೆ ಮನರಂಜನೆಗಾಗಿ ನೋಡಲು ಟಿವಿಗಳೂ ಇಲ್ಲದಿರುವುದರಿಂದ ವಿಲವಿಲ ಎನ್ನುತ್ತಿದ್ದಾರೆ.

ದಿನಗೂಲಿಗಳು ಅನ್ಯ ದಾರಿ ಕಾಣದೆ ತೆರೆದಿರುವ ನಾಲ್ಕಾರು ಗೂಡಂಗಡಿಗಳಿಗೆ ಮುತ್ತಿಕೊಂಡಿದ್ದಾರೆ. ಕಾಫಿ-ಬನ್ನು ಸವಿಯುತ್ತಾ ಅಲ್ಲಲ್ಲಿ ಗುಂಪುಗೂಡಿದ್ದಾರೆ. ಇನ್ನು ಯುವಜನತೆ ಕುತೂಹಲಕ್ಕಾಗಿ ತಮ್ಮ ಖಾಸಗಿ ವಾಹನಗಳನ್ನೇರಿ ನಗರ ಸಂಚಾರ ನಡೆಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಸಣ್ಣಪುಟ್ಟ ಪ್ರತಿಭಟನೆಗಳು ನಡೆಯುತ್ತಿದ್ದು, 'ಬೇಕೇ ಬೇಕು ನ್ಯಾಯ ಬೇಕು' ಘೋಷಣೆಗಳು ಕಿವಿಗೆ ಅಪ್ಪಳಿಸುತ್ತಿದೆ.
ಬೆಳಗ್ಗೆ ಬಿಎಂಟಿಸಿ ಬಸ್ಸುಗಳು ಎಂದಿನಂತೆ ರಸ್ತೆಗಿಳಿದವಾದರೂ ಒಂದೆರಡು ಕಡೆ ಕಲ್ಲುತೂರಾಟ ನಡೆಯುತ್ತಿದ್ದಂತೆ ಎಲ್ಲ ಬಸ್ಸುಗಳೂ ಡಿಪೋ ಸರಿಕೊಂಡಿವೆ. ಇನ್ನು, ಹೆಗಲ ಮೇಲೆ ಕನ್ನಡ ಬಾವುಟ ಧರಿಸಿ, ಕರ್ನಾಟಕದ 'ಜವಾಬ್ದಾರಿ' ಹೊತ್ತ ಕಟ್ಟಾಳುಗಳು ಬಲವಂತವಾಗಿ ತರಕಾರಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ಆದರೆ ದೇವಸ್ಥಾನಗಳಿಗೆ ವಿನಾಯಿತಿ ಇರುವುದರಿಂದ ಹೂವಿನಂಗಡಿಗಳು ಮಾತ್ರ ಅಲ್ಲಲ್ಲಿ ಪರಿಮಳ ಬೀರುತ್ತಿವೆ.
ಶೆಟರ್ ಎಳೆದುಕೊಂಡು ಸಿಎಂ ಶೆಟ್ಟರ್: ಕೊನೆಗೆ ಬ್ಯಾಂಕ್ ಎಟಿಎಂಗಳೂ ಶೆಟರ್ ಎಳೆದುಕೊಂಡಿವೆ. ಆದರೆ ಶೆಟರ್ ಎಳೆದುಕೊಂಡು ತಮ್ಮ ಅಧಿಕೃತ ನಿವಾಸದಲ್ಲಿ ಕುಳಿತಿರುವ ಮುಖ್ಯಮಂತ್ರಿ ಶೆಟ್ಟರ್ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾವೇರಿಗಾಗಿ ಅಹೋರಾತ್ರಿ ನಿದ್ದೆಗೆಟ್ಟು, ಬೀದಿಯಲ್ಲಿ ಕುಳಿತಿರುವಾಗ ಹಾಲಿ ಮುಖ್ಯಮಂತ್ರಿ ತಮ್ಮ ನಿವಾಸದ ಸುತ್ತ ಭದ್ರ ಕೋಟೆ ನಿರ್ಮಿಸಿಕೊಂಡು, ಕೈದಿಯಂತೆ ಗುಪ್ತ ಸಭೆಗಳನ್ನು ನಡೆಸುತ್ತಿರುವುದು ಜನತೆಯನ್ನು ಕೆರಳಿಸಿದೆ.
ಈ ಬಗ್ಗೆ ಮೌರ್ಯ ಸರ್ಕಲ್ಲಿನಲ್ಲಿ ಯಡಿಯೂರಪ್ಪ ಅವರ ಪಕ್ಕದಲ್ಲೇ ತಾವೂ ಧರಣಿಗೆ ಕುಳಿತಿರುವ ಮಾಜಿ ಕೇಂದ್ರ ಸಚಿವ ವಿ ಧನಂಜಯ್ ಕುಮಾರ್ ಅವರು ಶೆಟ್ಟರ್ ಮೇಲೆ ತಮ್ಮ ಸಿಟ್ಟನ್ನು ತೀರಿಸಿಕೊಂಡಿದ್ದಾರೆ. ಸಿಎಂ ಶೆಟ್ಟರ್ ಅವರು ತಕ್ಷಣ ಜನರ ಮಧ್ಯೆ ಬರಬೇಕು. ರೈತರಲ್ಲಿ ಭರವಸೆ ತುಂಬುವಂತಹ ಮಾತುಗಳನ್ನಾಡಬೇಕು. ರೈತರ ಹೋರಾಟಕ್ಕೆ ದನಿಯಾಗಬೇಕು ಎಮದು ಆಗ್ರಹಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪನವರು ಕಾವೇರಿ ಕೊಳ್ಳದ ರೈತರಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಈ ಸಂಬಂಧ ಈಗಾಗಲೇ ಮಂಡ್ಯದ ಮಾದೇಗೌಡರ ಜತೆ ಮಾತುಕತೆ ನಡೆಸಿದ್ದಾರೆ. ನಾಳೆ ಭಾನುವಾರ ಕೆಆರ್ ಎಸ್ ವರೆಗೂ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದರು. ಆದರೆ ಅವರು ಹಿರಿಯರು. ಆರೋಗ್ಯದ ದೃಷ್ಟಿಯಿಂದ ಖುದ್ದಾಗಿ ಕೆಆರ್ ಎಸ್ ವರೆಗೂ ನಡೆದುಕೊಂಡು ಹೋಗುವುದು ಆಗದ ಮಾತು. ಹಾಗಾಗಿ ಕೆಆರ್ ಎಸ್ ಪಾದಯಾತ್ರೆ ಕೈಬಿಟ್ಟಿದ್ದಾರೆ. ಆದರೆ ವಾಹನದಲ್ಲಿ ಅಲ್ಲಿಯವರೆಗೂ ನಾಳೆ ತೆರಳಿ, ತಮ್ಮ ಅಖಂಡ ಬೆಂಬಲ ಸೂಚಿಸಲಿದ್ದಾರೆ ಎಂದು ಯಡಿಯೂರಪ್ಪ ಅವರ ವಕ್ತಾರ ಧನಂಜಯ್ ಕುಮಾರ್ ತಿಳಿಸಿದ್ದಾರೆ.
ಅನಂತ್ ಕುಮಾರ್ ಕಟ್ಟಪ್ಪಣೆ : ನಗರದ 128 ಬಿಜೆಪಿ ಕಾರ್ಪೊರೇಟರುಗಳು ಯಾವುದೇ ಕಾರಣಕ್ಕೂ ಯಡಿಯೂರಪ್ಪ ಧರಣಿ ಕುಳಿತಿರುವ ಜಾಗದತ್ತ ಸುಳಿಯಬಾರದು. ಇದು ಪಕ್ಷದ ಕಟ್ಟಾಜ್ಞೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಕಟ್ಟಪ್ಪಣೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಯಾವೊಬ್ಬ ಬಿಜೆಪಿ ಕಾರ್ಪೊರೇಟರ್ ಸಹ ಯಡಿಯೂರಪ್ಪಗೆ ಸಾಥ್ ನೀಡಿಲ್ಲ.
ಒಟ್ಟಿನಲ್ಲಿ ಕದಡಿದ ಕಾವೇರಿ ನೀರಿನಲ್ಲಿ ಆಡಳಿತಾರೂಢ ಬಿಜೆಪಿ ಮಂದಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.












Click it and Unblock the Notifications