ವಿದ್ಯಾರ್ಥಿನಿಯರ ಅಪಹರಣ, ವೇಶ್ಯಾವಾಟಿಕೆ ಯತ್ನ: ಬಂಧನ

20ರ ಹರಯದ ಈ ಆರೋಪಿಗಳಿಗೆ ನ್ಯಾಯಾಲಯ 2 ವಾರಗಳ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರನ್ನು ಕರಿಂದಳ ನಿವಾಸಿ, ರಿಕ್ಷಾ ಚಾಲಕ ಅನೀಶ್(22), ಕಾಞಂಗಾಡ್ ತೈಕಡಪ್ಪುರಂನ ಅಮಲ್ದೇವ್ (22), ಪಯ್ಯನ್ನೂರು ವೆಳ್ಳೂರಿನ ಮುಂಗತ್ ಮುಬಶೀರ್(26) ಎಂದು ಗುರುತಿಸಲಾಗಿದೆ. ಇವರು ಅಪಹರಿಸಿ ಕೊಂಡೊಯ್ದಿದ್ದ ಕಾಡಂಕೋಡು ನಿವಾಸಿಗಳಾದ 10ನೇ ತರಗತಿ ಹಾಗೂ 9ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರನ್ನು ರಕ್ಷಿಸಲಾಗಿದೆ.
ಪ್ರಕರಣದ ಸೂತ್ರಧಾರರಾದ ಅನೀಶ್ ಹಾಗೂ ಅಮಲ್ದೇವ್ ಈ ಬಾಲಕಿಯರನ್ನು ಪ್ರೀತಿಸುವ ನಾಟಕವಾಡುತ್ತಿದ್ದರು. ಅದನ್ನು ನಂಬಿ ಈ ವಿದ್ಯಾರ್ಥಿನಿಯರು ನಾಪತ್ತೆಯಾಗುವ ಹಿಂದಿನ ದಿನದ ಬೆಳಿಗ್ಗೆ ಸುಳ್ಳು ಕಾರಣ ನೀಡಿ ಮನೆಯಿಂದ ಹೊರಬಿದ್ದಿದ್ದರು.
ಆರೋಪಿಗಳಿಬ್ಬರೂ ಪಯ್ಯನ್ನೂರಿಗೆ ಸರ್ಕಸ್ಗೆ ಹೋಗೋಣವೆಂದು ಹೇಳಿ ಬೇರೆ-ಬೇರೆಯಾಗಿ ಅಟೋರಿಕ್ಷಾದಲ್ಲಿ ಇಬ್ಬರು ಬಾಲಕಿಯರನ್ನು ಕರೆದೊಯ್ದಿದ್ದರು. ಆ ವೇಳೆ ವಿದ್ಯಾರ್ಥಿನಿಯ ಸಂಬಂಧಿಕರೊಬ್ಬರು ಅಪರಿಚಿತ ಯುವಕನ ಜೊತೆ ಆಕೆ ಆಟೋದಲ್ಲಿ ಹೋಗುತ್ತಿರುವುದನ್ನು ಕಂಡು ಮನೆಯವರಿಗೆ ಮಾಹಿತಿ ನೀಡಿದ್ದರು.
ಕಂಗಾಲಾದ ಪೋಷಕರು ಸದರಿ ವಿದ್ಯಾರ್ಥಿನಿಯ ಮೊಬೈಲಿಗೆ ಕರೆ ಮಾಡಿದಾಗ ಅತ್ತ ಕಡೆಯಿಂದ ಯುವಕ ಮಾತನಾಡಿದ್ದಾನೆ. ಈಕೆ ತಮ್ಮ ಜೊತೆಗಿದ್ದು ಎರಡು ದಿನ ಬಿಟ್ಟು ಮರಳುವುದಾಗಿ ತಿಳಿಸಿದ್ದಾನೆ.
ಪೀಕಲಾಟಕ್ಕಿಟ್ಟುಕೊಂಡ ಬಾಲಕಿಯ ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಇಬ್ಬರು ಬಾಲಕಿಯರನ್ನು ಸರ್ಕಸ್ಗೆಂದು ಪುಸಲಾಯಿಸಿ ಕರೆ ತಂದಿದ್ದ ಅನೀಶ್ ಹಾಗೂ ಅಮಲ್ ದೇವ್, ಇವರನ್ನು ಮುಬಶೀರ್ನ ಮಾಲೀಕತ್ವದ ವಸತಿಗೃಹಕ್ಕೆ ಕರೆದೊಯ್ದಿದ್ದರು. ಅಲ್ಲಿ ತಮ್ಮ ತೀಟೆಗೆ ಬಳಸಿ ಇವರನ್ನು ಇತರರಿಗೂ ಹಂಚಲು ಸಂಚು ನಡೆಸಿದ್ದರು.
ಆದರೆ, ಅಷ್ಟರಲ್ಲಿ ಲಾಡ್ಜಿಗೆ ದಾಳಿಯಿಟ್ಟ ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಗಳ ತಂಡಕ್ಕೆ ವೇಶ್ಯಾವಾಟಿಕಾ ಜಾಲದೊಂದಿಗೆ ಸಂಪರ್ಕವಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಂದಿನ ಕಾರ್ಯಾಚರಣೆ ಕೈಗೊಳ್ಳಲಾಗಿದೆ.












Click it and Unblock the Notifications