ರೈತರಿಂದ ಬೆಂಗ್ಳೂರಿಗೆ ಕಾವೇರಿ ನೀರು ಪೂರೈಕೆ ಬಂದ್

ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೀಡಿದ ಕರೆಯ ಮೇರೆಗೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಗ್ರಾಮದಲ್ಲಿರುವ ಬೆಂಗಳೂರು ನೀರು ಸರಬರಾಜು ಮಂಡಳಿಗೆ ವಿಧಾನಪರಿಷತ್ ಮಾಜಿ ಸದಸ್ಯ ಜಿ ಮಾದೇಗೌಡರ ಪುತ್ರ ಮಧು ಮಾದೇಗೌಡ ನೇತೃತ್ವದಲ್ಲಿ ಸಾವಿರಾರು ರೈತರು ಮುತ್ತಿಗೆ ಹಾಕಿ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿದರು.
ಮಂಡ್ಯ, ಮೈಸೂರು ಭಾಗದ ಜನ ಮಾತ್ರ ಹೋರಾಟ ನಡೆಸುತ್ತಿದ್ದಾರೆ. ಬೆಂಗಳೂರು ಜನತೆಗೆ ಕಾವೇರಿ ನದಿ ನೀರೇ ದಿಕ್ಕು ಎನ್ನುವ ಕನಿಷ್ಠ ಜ್ಞಾನ ಬೆಂಗಳೂರಿಗರಿಗಿಲ್ಲ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಸರಬರಾಜು ಆಗುವ ಎಲ್ಲಾ ಪೈಪ್ಗಳನ್ನು ಕತ್ತರಿಸಬೇಕಾಗುತ್ತದೆ. ಆಗ ಹೋರಾಟದ ಕಾವು ಬೆಂಗಳೂರಿಗರಿಗೂ ಅರ್ಥವಾಗುತ್ತದೆ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ನಾವು ಹೋರಾಡುತ್ತಿರುವುದು ಕಾವೇರಿ ನೀರಿಗಾಗಿ. ಬೆಂಗಳೂರಿನ ಜನತೆಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಇದು ಕಾವೇರಿ ನೀರಿನ ಉಳಿವಿಗಾಗಿ ನಡೆಯುತ್ತಿರುವ ಹೋರಾಟ, ಕಾವೇರಿ ನೀರು ಜಿಲ್ಲೆಗಷ್ಟೇ ಸೀಮಿತವಲ್ಲ. ಬೆಂಗಳೂರಿನವರು ಕಾವೇರಿ ನೀರು ಕುಡಿಯುತ್ತಿದ್ದು ಹೋರಾಟದಲ್ಲಿ ಪಾಲ್ಗೊಳ್ಳುವುದು ಅವರ ಕರ್ತವ್ಯ.
ನಮ್ಮ ಹೋರಾಟಕ್ಕೆ ಬೆಂಗಳೂರಿನವರು ಸ್ಪಂದಿಸದ ಕಾರಣ ಅವರನ್ನು ಎಚ್ಚರಿಸುವ ದೃಷ್ಟಿಯಿಂದ ಇಲ್ಲಿಂದ ಹೋಗುತ್ತಿರುವ ನೀರನ್ನು ನಿಲ್ಲಿಸಿದ್ದೇವೆ. ಈಗಲಾದರೂ ರಾಜಧಾನಿ ಜನರು ಆರಾಮಾಗಿರುವುದನ್ನು ಬಿಟ್ಟು ನಮ್ಮ ಹೋರಾಟಕ್ಕೆ ಸ್ಪಂದಿಸಲೇಬೇಕು ಎಂದು ಮಧು ಮಾದೇಗೌಡ ಹೇಳಿದ್ದಾರೆ.
ಬೆಂಗಳೂರಿಗೆ ಮಂಡ್ಯದಿಂದ ಕಾವೇರಿ ನೀರು ಪೂರೈಕೆಯಾಗುತ್ತದೆ. ಬೆಂಗಳೂರು ಮಹಾನಗರದ 50 ರಿಂದ 60 ಲಕ್ಷ ಜನರ ನೀರಿನ ದಾಹವನ್ನು ಕಾವೇರಿ ನೀಗಿಸುತ್ತಾಳೆ.
ರೈತರ ಹೋರಾಟ ಇದೇ ರೀತಿ ಮುಂದುವರಿದು ಬೆಂಗಳೂರಿಗೆ ನೀರು ಸರಬರಾಜು ನಿಂತರೆ ಅದರ ಪರಿಣಾಮ ಊಹಿಸಲೂ ಅಸಾಧ್ಯ, ಬೆಂಗಳೂರು ನಗರದ ಇಡೀ ಜನಜೀವನವೇ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಯಿದೆ.
ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯಗಳಿಂದ ಕಾವೇರಿ ನದಿಗೆ ಬಿಟ್ಟ ನೀರನ್ನು ಮಳವಳ್ಳಿ ತಾಲೂಕು ತೊರೆಕಾಡನ ಹಳ್ಳಿ ಬಳಿ ನಾಲ್ಕು ಹಂತಗಳ ಮೂಲಕ ಇಡೀ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತದೆ.












Click it and Unblock the Notifications