ಯಡಿಯೂರಪ್ಪಗೆ ಸದಾ ಬಾಗಿಲು ತೆರೆದಿದೆ: ಕಾಂಗ್ರೆಸ್

ವಿಧಾನಸಭೆ ಸನಿಹದಲ್ಲೇ ಇರುವಾಗ ಲಿಂಗಾಯತ ಸಮುದಾಯದ ಹಿರಿಯರೊಬ್ಬರು ತಮ್ಮ ಪಡಸಾಲೆಯೊಳಗೆ ನಡೆದು ಬಂದರೆ ಸುಮ್ಮನಿರೋಕ್ಕಾಗುತ್ತದಾ? ನಮ್ಮ ಕಿಟಕಿ, ಬಾಗಿಲುಗಳು ಸದಾ ತೆರೆದೇ ಇರುತ್ತದೆ. ಹಿರಿಯ/ಪ್ರಭಾವಿ ವ್ಯಕ್ತಿಯೊಬ್ಬರು ಅಲ್ಲಿ ಚಲಿಸುವಾಗ ಅತ್ತಿತ್ತ ಕಣ್ಣಾಡಿಸುವುದು ಸಹಜ. ಹಾಗಾಗಿ ನಮ್ಮತ್ತ ಅವರ (ಯಡಿಯೂರಪ್ಪ) ದೃಷ್ಟಿ ಬಿದ್ದಿರಬಹುದು' ಎಂದು ಕಾಂಗ್ರೆಸ್ ವಕ್ತಾರೆ ರೇಣುಕಾ ಚೌಧರಿ ಅವರು ಪ್ರತಿಕ್ರಿಯಿಸಿದ್ದಾರೆ.
'ಯಡಿಯೂರಪ್ಪ ಅವರು ಸೋನಿಯಾ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರಲ್ಲಾ, ಏನು ವಿಷಯ?' ಅಂತ ಸುದ್ದಿಗಾರರು ಕೇಳಿದ್ದೇ ತಡ ರೇಣುಕಾ ಚೌಧರಿ ಮೇಲಿನಂತೆ ಉತ್ತರಿಸಿದ್ದಾರೆ. ಹಾಗಾದರೆ, ಚುನಾವಣೆ ಕಾಲದಲ್ಲಿ ಪ್ರಭಾವಿ ಸಮುದಾಯವೊಂದರ ನಾಯಕ ಯಡಿಯೂರಪ್ಪ ಅವರು ಪಕ್ಷದತ್ತ ದೃಷ್ಟಿ ಹರಿಸಿರುವುದು ಕಾಂಗ್ರಸ್ ಗೆ ಬಯಸದೇ ಬಂದ ಭಾಗ್ಯವಾಗುತ್ತದಾ?
ಯಡಿಯೂರಪ್ಪ ಅವರು ವೀರಶೈವ ಸಮುದಾಯದ ಪ್ರಭಾವಿ ನಾಯಕ. ಕರ್ನಾಟಕದ ಜನಸಂಖ್ಯೆಯಲ್ಲಿ ಶೇ. 17ರಷ್ಟು ಇವರದೇ ಪಾಲು. ಬಿಜೆಪಿಯಲ್ಲಿನ ಗೊಂದಲ, ತಮ್ಮ ಪಕ್ಷದಲ್ಲಿ ವೀರಶೈವ ನಾಯಕರು ಬಂಡಾಯವೆದ್ದಿರುವುದನ್ನು ಗಣನೆಗೆ ತೆಗೆದುಕೊಂಡು ಯಡಿಯೂರಪ್ಪ ಅವರ 'ಕೈ' ಹಿಡಿಯುವುದೇ ಲೇಸು ಎಂದೇನಾದರೂ ಕಾಂಗ್ರೆಸ್ ಯೋಚಿಸುತ್ತಿದೆಯಾ? ಯಡಿಯೂರಪ್ಪ ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗಿಳಿದ ದಿನದಿಂದಲೂ ಕಾಂಗ್ರೆಸ್ ಮತ್ತು ಯಡಿಯೂರಪ್ಪ ಕಣ್ಣುಗಳು ಪರಸ್ಪರ ಸಂಧಿಸುತ್ತಿವೆ.
1990ರಿಂದಲೂ ಕರ್ನಾಟಕದಲ್ಲಿ ವೀರಶೈವ ನಾಯಕರು ಕಾಂಗ್ರೆಸ್ ಪಕ್ಷದಿಂದ ಮಾರು ದೂರ ಇದ್ದಾರೆ. ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲರನ್ನು ಏಕಾಏಕಿ ಆ ಸ್ಥಾನದಿಂದ ಕಿತ್ತೊಗೆದಿದ್ದೇ ಇದಕ್ಕೆ ಕಾರಣ. ಅಂದು ಕಾಂಗ್ರೆಸ್ಸಿನಿಂದ ವಿಮುಖಗೊಂಡ ವೀರಶೈವರು ಇದುವರೆಗೂ ಆ ಪಕ್ಷದತ್ತ ಕಣ್ಣೆತ್ತಿ ನೋಡಿಲ್ಲ.
ಈ ಮಧ್ಯೆ, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷವು ಯಡಿಯೂರಪ್ಪ ಅವರನ್ನು ತಮ್ಮ ಪಕ್ಷದತ್ತ ಸೆಳೆಯಲು ಉತ್ಸುಕವಾಗಿದೆ ಎಂದು ವರದಿಯಾಗಿದೆ.
ಸಮಾಜವಾದಿ ಆಗಲಿದ್ದಾರಾ ಯಡಿಯೂರಪ್ಪ?: ಲೋಕಸಭಾ ಚುನಾವಣೆ ವೇಳೆಗೆ ತೃತೀಯ ರಂಗದ ನೆರವಿನೊಂದಿಗೆ ಪ್ರಧಾನಿ ಪಟ್ಟಕ್ಕೇರುವ ಪ್ರಯತ್ನ ನಡೆಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಅವರು ಯಡಿಯೂರಪ್ಪ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಯಡಿಯೂರಪ್ಪ ಅವರು ಈ ಆಹ್ವಾನಕ್ಕೆ ತಕ್ಷಣಕ್ಕೇನೂ ಪ್ರತಿಕ್ರಿಯೆ ನೀಡದಿದ್ದರೂ ಮುಂದಿನ ಎಲ್ಲ ಸಾಧ್ಯತೆಗಳನ್ನೂ ಕಾದು ನೋಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಶಿವಮೊಗ್ಗದ ಬಂಗಾರಪ್ಪ ಅವರೂ ಬಿಜೆಪಿಯನ್ನು ತೊರೆದ ನಂತರ ಸಮಾಜವಾದಿ ಪಕ್ಷವನ್ನು ಅಪ್ಪಿಕೊಂಡಿದ್ದರು. ಆ ಪಕ್ಷದಿಂದಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವನ್ನೂ ಸಾಧಿಸಿದ್ದರು ಎಂಬುದು ಗಮನಾರ್ಹ. ಹಾಗಾದರೆ ಬಂಗಾರಪ್ಪ ಹಾದಿಯಲ್ಲಿ ಯಡಿಯೂರಪ್ಪ ಸಹ ಸೈಕಲ್ ತುಳಿಯಲು ಹೋಗುತ್ತಾರಾ?












Click it and Unblock the Notifications