ತೃಣಮೂಲ ಮಮತೆ ಕಳೆದುಕೊಂಡ ಯುಪಿಎ 2

ಕೊಲ್ಕೊತ್ತಾದಲ್ಲಿ ತಮ್ಮ ಪಕ್ಷದ ಸಂಸದರು ಮತ್ತು ಮುಖಂಡರೊಂದಿಗೆ 3 ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಮೇಲೆ ಮಮತಾ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಡೀಸೆಲ್ ಬೆಲೆ ಏರಿಕೆ, ಎಲ್ಪಿಜಿ ಸಬ್ಸಿಡಿ ಕಡಿತ, ಬಹು ಬ್ರ್ಯಾಂಡ್ ರೀಟೈಲ್ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಬಗ್ಗೆ ಯುಪಿಎ ತಳೆದಿರುವ ನೀತಿಯನ್ನು ಪುನರ್ ಪರಿಶೀಲಿಸುವಂತೆ ಯುಪಿಎ ಸರ್ಕಾರಕ್ಕೆ ಮಮತಾ ಅವರು 72 ಗಂಟೆಗಳ ಡೆಡ್ ಲೈನ್ ನೀಡಿದ್ದರು.
ಮಮತಾ ನೀಡಿದ್ದ ಗುಡುವು ಮುಗಿದರೂ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದ ಕಾರಣ. ಮಂಗಳವಾರ ಮಮತಾ ತಮ್ಮ ಪಕ್ಷದ ಸದಸ್ಯರೊಡನೆ ಚರ್ಚಿಸಿ ಯುಪಿಎಗೆ ನೀಡಿರುವ ಬೆಂಬಲ ವಾಪಸ್ ಪಡೆಯುವ ಕಠಿಣ ನಿರ್ಧಾರ ಪ್ರಕಟಿಸಿದ್ದಾರೆ.
ಕೇಂದ್ರ ಸರ್ಕಾರದಲ್ಲಿ 6 ಜನ ಸಚಿವ(1 ಕ್ಯಾಬಿನೆಟ್ ದರ್ಜೆ, 5 ರಾಜ್ಯ ಸಚಿವರು)ರೂ ಸೇರಿದಂತೆ ಒಟ್ಟು 19 ಜನ ಸಂಸದರನ್ನು ಹೊಂದಿರುವ ಟಿಎಂಸಿ ಯುಪಿಎಯಿಂದ ಹೊರಬರುವ ನಿರ್ಧಾರ ಪ್ರಕಟಿಸಿರುವುದರಿಂದ ಕೇಂದ್ರ ಸರ್ಕಾರ ತೀವ್ರ ಇಕ್ಕಟ್ಟಿನಲ್ಲಿ ಸಿಲುಕಲಿದೆ.
ತೃಣಮೂಲ ಕಾಂಗ್ರೆಸ್ ಬೇಡಿಕೆ: ಬಹುಬ್ರಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಆದೇಶ ಹಿಂತೆಗೆದುಕೊಳ್ಳಬೇಕು. ವರ್ಷದಕ್ಕೆ 6 ಎಲ್ ಪಿಜಿ ಸಿಲೆಂಡರ್ ನಿಂದ 12 ಸಿಲೆಂಡರ್ ಗೆ ಮಿತಿ ಏರಿಸಬೇಕು. ಡೀಸೆಲ್ ಬೆಲೆ ಏರಿಕೆ 5 ರು ನಿಂದ 3-4ರು ಗಳಿಗೆ ಇಳಿಸಬೇಕು ಎಂಬ ಬೇಡಿಕೆಯನ್ನು ಮಮತಾ ಬ್ಯಾನರ್ಜಿ ಮುಂದಿಟ್ಟಿದ್ದರು.
ಅದರೆ, ಮಮತಾ ಬೇಡಿಕೆಗೆ ಯುಪಿಎ ಸೊಪ್ಪು ಹಾಕದ ಕಾರಣ, ಟಿಎಂಸಿ ಬೆಂಬಲ ವಾಪಸ್ ತೆಗೆದುಕೊಂಡಿದೆ. ಟಿಎಂಸಿ ಬೆಂಬಲ ತೆಗೆದುಕೊಂಡ ಮೇಲೆ ಯುಪಿಎ ಸಂಸದರ ಬಲ 251ಕ್ಕೆ ಕುಸಿದಿದೆ.
545 ಸದಸ್ಯರ ಲೋಕಸಭೆಯಲ್ಲಿ ಬಹುಮತಕ್ಕೆ 272 ಮತಗಳು ಬೇಕಾಗುತ್ತದೆ. ಯುಪಿಎಗೆ ಇನ್ನೂ 21 ಸದಸ್ಯರ ಬೆಂಬಲ ಬೇಕಿದೆ.
ಸಮಾಜವಾದಿ ಪಕ್ಷ (22) ಅಥವಾ ಬಹುಜನ ಸಮಾಜವಾದಿ ಪಕ್ಷ (21) ಹಾಗೂ ಇನ್ನಿತರರ ಬಾಹ್ಯ ಬೆಂಬಲದಿಂದ ಯುಪಿಎ ಅಗತ್ಯ ಮತ ಪಡೆದು ರಾಜ್ಯಭಾರ ಮುಂದುವರೆಸುವ ನಿರೀಕ್ಷೆಯಿದೆ.
ಆದರೆ, ಸಿಲೆಂಡರ್ ಮಿತಿ ಕೆಲವು ರಾಜ್ಯಗಳಲ್ಲಿ 9 ರಿಂದ 12ಕ್ಕೆ ಏರಿಸಲು ಈಗಾಗಲೇ ಅನುಮತಿ ನೀಡುವ ಮೂಲಕ ಸೋನಿಯಾ ಗಾಂಧಿ ಆವರು ಮಮತಾ ಅವರ ಸಹಾಯ ಹಸ್ತ ಭದ್ರ ಪಡಿಸಿಕೊಳ್ಳುವ ಸಂಧಾನ ಪ್ರಕ್ರಿಯೆ ಆರಂಭಿಸಿದ್ದಾರೆ.
ಮಮತಾ ಮಾತ್ರ ಯುಪಿಎ ವಿರುದ್ಧ ಹರಿಹಾಯ್ದಿದ್ದು, ಬ್ಲಾಕ್ ಮೇಲ್ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ದೇಶ ಮಧ್ಯಂತರ ಚುನಾವಣೆ ಎದುರಿಸಬೇಕಾದರೆ ನಾವು ಜವಾಬ್ದಾರರಲ್ಲ. ಯುಪಿಎ 2 ಆಯಸ್ಸು 3 ರಿಂದ 6 ತಿಂಗಳು ಮಾತ್ರ ಎಂದು ಭವಿಷ್ಯ ನುಡಿದಿದ್ದಾರೆ.












Click it and Unblock the Notifications