ಸೆ.20ರ ಭಾರತ್ ಬಂದ್ ಗೆ ನೀವು ರೆಡಿನಾ?
ಎಫ್ ಡಿಐ ಹಾಗೂ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಭಾನುವಾರ (ಸೆ.16) ದಂದೇ ಶಿವಸೇನೆ ಕಾರ್ಯಕರ್ತರು ಮುಂಬೈನ ಗಲ್ಲಿಗಲ್ಲಿಗಳಲ್ಲಿ ಸಂಚರಿಸಿ ಬಂದ್ ನ ಬಗ್ಗೆ ಪ್ರಚಾರ ನೀಡುತ್ತಾ, ಪ್ರತಿಭಟನೆಯ ಮುನ್ನೋಟ ತೋರಿಸಿದ್ದಾರೆ.
ಸೆ.15 ರಂದು ಸಭೆ ಸೇರಿದ ಎನ್ ಡಿಎ ಮೈತ್ರಿಕೂಟ ಸಭೆ ನಂತರ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ, 'ಎಫ್ ಡಿಐಗೆ ಪೂರಕ ವಾತಾವರಣ ದೇಶದಲ್ಲಿಲ್ಲ. ವಿದೇಶಿ ಉದ್ಯಮಿಗಳಿಗೆ ಅನುಕೂಲಕರವಾಗಿದೆ. ರೀಟೈಲ್ ಕ್ಷೇತ್ರಕ್ಕೆ ವಿದೇಶಿ ಕಂಪನಿಗಳು ದಾಳಿ ಇಟ್ಟರೆ ನಮ್ಮ ಮಾರುಕಟ್ಟೆ ಏರುಪೇರಾಗುತ್ತದೆ. ಸೆ.20ರಂದು ದೇಶವ್ಯಾಪಿ ಬಂದ್ ನಡೆಸಲು ನಿರ್ಧರಿಸಲಾಗಿದೆ. ಬವಣೆಯಲ್ಲಿ ಬದುಕುತ್ತಿರುವ ಜನರ ಆಕ್ರೋಶವೇ ಯುಪಿಎ ಸರ್ಕಾರವನ್ನು ಕಿತ್ತು ಎಸೆಯಲಿದೆ ಎಂದು ಹೇಳಿದರು.
ಡೀಸೆಲ್ ಬೆಲೆ ಏರಿಕೆ ಮತ್ತು ಹೊಸ ಆರ್ಥಿಕ ಸುಧಾರಣಾ ಕ್ರಮಗಳನ್ನು ಪ್ರಧಾನಿ ಮನಮೋಹನ್ ಸಿಂಗ್ ಶನಿವಾರ ಸಮರ್ಥಿಸಿಕೊಂಡಿದ್ದರೆ, ಸರ್ಕಾರದ ಜನ ವಿರೋಧಿ ಧೋರಣೆ ಖಂಡಿಸಿ ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಕೂಡಾ ಟೊಂಕ ಕಟ್ಟಿ ನಿಂತಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ತೃತೀಯ ರಂಗ ಎನ್ನಬಹುದಾದ ಕಾಂಗ್ರೆಸ್ಸೇತರ ನಾಯಕರು ಮುಲಾಯಂ ಸಿಂಗ್ ಯಾದವ್ (ಸಮಾಜವಾದಿ ಪಕ್ಷ), ಎಚ್. ಡಿ. ದೇವೇಗೌಡ (ಜೆಡಿಎಸ್), ಪ್ರಕಾಶ್ ಕಾರಟ್ (ಸಿಪಿಎಂ), ಎಸ್. ಸುಧಾಕರ್ ರೆಡ್ಡಿ (ಸಿಪಿಐ), ನವೀನ್ ಪಟ್ನಾಯಕ್ (ಬಿಜೆಡಿ), ಎನ್. ಚಂದ್ರಬಾಬು ನಾಯ್ಡು (ಟಿಡಿಪಿ), ದೇವವ್ರತ ಬಿಸ್ವಾಸ್ (ಫಾರ್ವರ್ಡ್ ಬ್ಲಾಕ್) ಮತ್ತು ಟಿ. ಜೆ. ಚಂದ್ರಚೂಡನ್ (ಆರ್ಎಸ್ಪಿ) ಜಂಟಿ ಹೇಳಿಕೆ ಬಿಡುಗಡೆ ಮಾಡಿ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.
ಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ, ರಾಜಸ್ತಾನ, ಉತ್ತರಾಖಂಡ, ಆಂಧ್ರಪ್ರದೇಶ, ಅಸ್ಸಾಂ ರಾಜ್ಯಗಳಲ್ಲಿ ಯುಪಿಎ ಎಫ್ ಡಿಐ ನೀತಿಗೆ ಸ್ವಾಗತ ಸಿಕ್ಕಿದೆ. ಕೇಂದ್ರ ಸರ್ಕಾರ ಆರ್ಥಿಕ ನೀತಿಯನ್ನು ಅಮೆರಿಕದ ಉದ್ಯಮಿಗಳು ಹಾಗೂ ಮಾಧ್ಯಮಗಳು ಹಾಡಿ ಹೊಗಳಿದೆ. ಭಾರತದ ಕಂಪನಿಗಳೊಂದಿಗೆ ವಹಿವಾಟು ನಡೆಸಲು ಅಮೆರಿಕದ ಪ್ರಮುಖ 400 ಕಂಪನಿಗಳು ತುದಿಗಾಲ ಮೇಲೆ ನಿಂತಿದೆ ಎಂಬ ಸುದ್ದಿ ಇದೆ.
ಒಂದು ವೇಳೆ ಕೇಂದ್ರ ಸರ್ಕಾರ ನಿರ್ಧಾರ ಹಿಂತೆಗೆದುಕೊಳ್ಳದಿದ್ದಲ್ಲಿ ತಮ್ಮ ಪಕ್ಷ ಕಠಿಣ ನಿರ್ಧಾರ ತೆಗೆದುಕೊಳ್ಳಲಿದೆ. ಈ ಬಗ್ಗೆ ಚರ್ಚಿಸಲು ಮಂಗಳವಾರ ಪಕ್ಷದ ಸಭೆ ಕರೆಯಲಾಗಿದೆ ಎಂದು ತೃಣಮೂಲ ನಾಯಕಿ ಮಮತಾ ಬ್ಯಾನರ್ಜಿ ಎಚ್ಚರಿಸಿದ್ದಾರೆ.
ಬಿಜೆಪಿ ಎನ್ ಡಿಎ ನೇತೃತ್ವದ ಬಂದ್ ಗೆ ಅಖಿಲ ವ್ಯಾಪಾರಿಗಳ ಒಕ್ಕೂಟ, ಭಾರತ್ ವ್ಯಾಪರ್ ಮಂಡಲ್ ಕೂಡಾ ಬೆಂಬಲ ನೀಡುತ್ತಿದೆ. ಎಲ್ಲ ಅಂಗಡಿಗಳನ್ನು ಮುಚ್ಚಲು ಆದೇಶ ನೀಡಲಾಗಿದೆ ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೆಲ್ ವಾಲ್ ಹೇಳಿದ್ದಾರೆ.