ಲಾರಿ ಮುಷ್ಕರ:ಬೆಲೆಯೇರಿಕೆಯ ಬಿಸಿಗೆ ಸಜ್ಜಾಗಿ
ಈ ನಡುವೆ ಕಳೆದ ಕೆಲ ವರ್ಷಗಳಿಂದ ಒಂದಲ್ಲಾ ಒಂದು ನೆಪ ಇಟ್ಟುಕೊಂಡು ಮುಷ್ಕರ ನಡೆಸುತ್ತಿರುವ ಲಾರಿಗಳು ಗಣೇಶ ಹಬ್ಬದ ದಿನವಾದ ಸೆಪ್ಟಂಬರ್ 19ರಿಂದ ಮತ್ತೆ ಮುಷ್ಕರ ಹೂಡಲಿವೆ. ಕಾರಣ, ಡಿಸೇಲ್ ಬೆಲೆ ಏರಿಕೆ.
ಕೇಂದ್ರ ಸರಕಾರ ಏಕಾಏಕಿ ಡಿಸೇಲ್ ಬೆಲೆಯನ್ನು ಲೀಟರ್ ವೊಂದಕ್ಕೆ ಆರು ರೂಪಾಯಿ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಲಾರಿ ಮಾಲೀಕರ ಮತ್ತು ಏಜೆಂಟರ ಒಕ್ಕೂಟ ಸೇರಿದಂತೆ ಎಲ್ಲಾ ಸರಕು ಸಾಗಾಣಿಕೆ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಮುಷ್ಕರ ಹೂಡಲಿವೆ.
ಸೆ 18ರಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ಮುಂಬೈನಲ್ಲಿ ಸಭೆ ಸೇರಿ ಉದ್ದೇಶಿತ ಮುಷ್ಕರದ ರೂಪುರೇಷೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
ಈಗಾಗಲೇ ಟೋಲ್ ಸಂಗ್ರಹ, ಚಾಲಕರ ಕೊರತೆಯಿಂದಾಗಿ ನಾನಾ ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಡೀಸೆಲ್ ಬೆಲೆಯೇರಿಕೆ ನಮ್ಮನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ ಹಾಕಲಿವೆ.
ಹಾಗಾಗಿ ನಮಗೆ ಮುಷ್ಕರ ನಡೆಸದೆ ಬೇರೆ ದಾರಿ ಇಲ್ಲ ಎಂದು ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಹೇಳಿಕೆ ನೀಡಿದ್ದಾರೆ.
ಕೇಂದ್ರ ಸರಕಾರ ಈ ಕೂಡಲೇ ಬೆಲೆಯನ್ನು ವಾಪಾಸ್ ಪಡೆಯಬೇಕು. ಸೆ 18ರೊಳಗೆ ವಾಪಾಸ್ ಪಡೆಯದಿದ್ದಲ್ಲಿ 19ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದು ನಮಗೆ ಅನಿವಾರ್ಯವಾಗಲಿದೆ ಎಂದು ಷಣ್ಮುಗಪ್ಪ ಹೇಳಿದ್ದಾರೆ.
ಲಾರಿ ಮುಷ್ಕರದಿಂದ ದೈನಂದಿನ ಜೀವನಕ್ಕೆ ಅಗತ್ಯವಾದ ತರಕಾರಿ, ಹೂವು, ಹಣ್ಣು, ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯವಾಗಲಿವೆ. ಮರಳು ಲಾರಿಗಳು ಕೂಡ ಬೆಂಬಲ ಸೂಚಿಸಿರುವುದರಿಂದ ಕಟ್ಟಡ ನಿರ್ಮಾಣಕ್ಕೂ ತೊಂದರೆಯಾಗಲಿವೆ.