RSS ಹಿರಿಯ ಮುಖಂಡ ಕೆ.ಎಸ್. ಸುದರ್ಶನ್ ವಿಧಿವಶ
ಮೈಸೂರು, ಸೆ.15: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮಾಜಿ ಸರ ಸಂಚಾಲಕ ಕೆ.ಎಸ್. ಸುದರ್ಶನ (81) ಅವರು ಇಂದು ಮುಂಜಾನೆ ರಾಯಪುರದ ಸ್ವಗೃಹದಲ್ಲಿ ವಿಧಿವಶರಾದರು.

ಮೈಸೂರಿನಲ್ಲಿ ಸೋದರನ ಮನೆಯಲ್ಲಿ ವಾಸವಾಗಿದ್ದ ಮಂಡ್ಯ ಕೆಆರ್ ಪೇಟೆ ತಾಲೂಕಿನ ಕುಪ್ಪಹಳ್ಳಿ ಸೀತಾರಾಮಯ್ಯ ಸುದರ್ಶನ ಕಳೆದ ತಿಂಗಳು (ಆ. 3) ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ದಾರಿ ತಪ್ಪಿದ್ದರಿಂದ ಮನೆಗೆ ಮರಳುವುದು ತಡವಾಗಿ, ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದರು.
ಅವಿವಾಹಿತರಾಗಿದ್ದ ಸುದರ್ಶನ್ ಅವರು ತಮ್ಮ ಬಾಳಪಥದಲ್ಲಿ ಇಂದು ಮುಂಜಾನೆ ಸಂಘದ ಭಗವಧ್ವಜಕ್ಕೆ ಅಂತಿಮ ನಮಸ್ತೆ ಸಲ್ಲಿಸಿದ್ದಾರೆ. ನಾಗ್ಪುರದಲ್ಲಿ ನಾಳೆ ಮಧ್ಯಾಹ್ನ ಅಂತಿಮ ಸಂಸ್ಕಾರ ನೆರವೇರಲಿದೆ. ಸುದರ್ಶನ್ ಅವರು ಟೆಲಿಕಮ್ಯುನಿಕೇಷನ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು.
ಈಗಿನ ಛತ್ತೀಸ್ ಗಢದ ರಾಯ್ ಪುರದಲ್ಲಿ ಸಂಕೇತಿ ಹಿಂದೂ ಕುಟುಂಬದಲ್ಲಿ ಜನಿಸಿದ (ಜೂನ್ 18, 1931) ಕೆಎಸ್ ಸುದರ್ಶನ್ ಅವರು ಮೊದಲ ಬಾರಿಗೆ ತಮ್ಮ 9ನೆಯ ವಯಸ್ಸಿನಲ್ಲಿ ಆರೆಸ್ಸೆಸ್ ಶಾಖೆಯಲ್ಲಿ ಪಾಲ್ಗೊಂಡಿದ್ದರು. 1954ರಲ್ಲಿ ಪ್ರಚಾರಕ್ ಆಗಿ ಅವರನ್ನು ನೇಮಿಸಲಾಗಿತ್ತು. ಸಂಕೇತಿ ಭಾಷೆಯ ಜತೆಗೆ ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ, ಛತ್ತೀಸ್ ಗಡಿ ಮತ್ತಿತರ ಭಾಷೆಗಳನ್ನು ಅವರು ನಿರರ್ಗಳವಾಗಿ ಮಾತನಾಡುತ್ತಿದ್ದರು.












Click it and Unblock the Notifications