ಉಡುಪಿಯಲ್ಲಿ ದೇಶದ ಅತಿ ದೊಡ್ಡ ಏಕಶಿಲೆ ವಿಗ್ರಹ

ಹೌದು, ನಮ್ಮದೇ ಉಡುಪಿಯ ಸಮೀಪ ಬೈಲೂರು ಗ್ರಾಮದಲ್ಲಿ 2016ರ ವೇಳೆಗೆ ಪೂರ್ಣ ನಿಲುವಿನ ಸ್ವಾಮಿ ವಿವೇಕಾನಂದರ ಇಂತಹ ಬೃಹತ್ ಏಕಶಿಲೆ ವಿಗ್ರಹವೊಂದು ರಚನೆಯಾಗಲಿದೆ. ಕಳೆದ ಜನವರಿಯಿಂದ ಇದರ ಕೆತ್ತನೆಯ ಕಾರ್ಯ ಆರಂಭವಾಗಿದೆ. ಇದರ ಎತ್ತರ ಬರೋಬ್ಬರಿ 100 ಅಡಿ. ಇದರ ಕೆತ್ತನೆಯ ವೆಚ್ಚ 50 ಕೋಟಿ ರೂಪಾಯಿ. ಬೆಂಗಳೂರಿನ ಆಂಗ್ಲ ದೈನಿಕ Bangalore Mirror ಈ ಬಗ್ಗೆ ಸಮಗ್ರವಾಗಿ ವರದಿ ಮಾಡಿದೆ.
ಉಡುಪಿ ಮತ್ತು ಕಾರ್ಕಳ ಮಧ್ಯೆ ಉಡುಪಿ ತಾಲೂಕಿಗೆ ಸೇರಿದ ಯೆರ್ಲಪಾಡಿ ಬಳಿ ಶ್ರೀ ರಾಮಕೃಷ್ಣ ಮಠ (ಬೈಲೂರು ಮಠ) ಇದೆ. ಇದೇ ಮಠದಲ್ಲಿ ಸ್ವಾಮಿ ವಿವೇಕಾನಂದರ ಉದ್ದೇಶಿತ ವಿಗ್ರಹ ತಲೆಯೆತ್ತಲಿದೆ. 'ಇದು ಯಾವುದೇ ದಾಖಲೆ ನಿರ್ಮಾಣಕ್ಕಾಗಿ ಅಲ್ಲದಿದ್ದರೂ ಮನುಕುಲದ ಪರಿವರ್ತನೆಗಾಗಿ' ಎನ್ನುತ್ತಾರೆ ಕೆತ್ತನೆಯ ನಿರ್ವಹಣೆ ನೋಡಿಕೊಳ್ಳುತ್ತಿರುವ ಬ್ರಹ್ಮಚಾರಿ ದೀಪು ಮಹಾರಾಜ ಅವರು ಹೇಳಿದ್ದಾರೆ.
ತಲೆಯಿಂದ ಉಂಗುಷ್ಠದವರೆಗೂ 86 ಅಡಿ ಎತ್ತರ, ಅಗಲ 30 ಅಡಿ ಇದೆ. ಈ ಶಿಲ್ಪದ ತೂಕ 2,500 ಟನ್. ಈ ಇಡೀ ಪರಿಮಾಣವು ಕಮಲದ ಚೌಕಟ್ಟಿನ ಮೇಲೆ ನಿಲ್ಲಲಿದೆ. ಬೆಂಗಳೂರಿನ ಶಿಲ್ಪ ಕಲಾಕಾರ ಅಶೋಕ್ ಗುಡಿಗಾರ್ ಅವರು ಸ್ವಾಮಿ ವಿವೇಕಾನಂದ ವಿಗ್ರಹದ ಪ್ರಧಾನ ಕಲಾಕಾರರು. ಇವರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತರು. ಇವರಿಗೆ ಕಾರ್ಕಳದ ಗುಣಾವತೇಶ್ವರ ಭಟ್ ನೆರವಾಗಲಿದ್ದಾರೆ. ಇವರು ಕೆನರಾ ಬ್ಯಾಂಕ್ ಶಿಲ್ಪ ಶಾಲೆಯ ಪ್ರಿನ್ಸಿಪಾಲ್ ಆಗಿದ್ದಾರೆ. ಒಟ್ಟು 150 ಪರಿಣತ ಕೆತ್ತನೆಕಾರರು ಇದಕ್ಕೆ ಮೂರ್ತ ಸ್ವರೂಪ ನೀಡಲಿದ್ದಾರೆ.
ಅಷ್ಟಕ್ಕೂ 110x30x18 ಅಡಿ ವಿಸ್ತೀರ್ಣದ ಈ ಏಕಶಿಲೆ ದೊರಕಿದ್ದು ಇಲ್ಲೇ ಹತ್ತಿರದಲ್ಲಿ. ಆಶ್ರಮದಿಂದ 14 ಕಿಮೀ ದೂರದಲ್ಲಿರುವ ಜಾರ್ಕಳ ಬಳಿ. ಇಲ್ಲಿಂದ ಆಶ್ರಮಕ್ಕೆ ವಿಗ್ರವನ್ನು ಸಾಗಿಸುವುದು ನಿಜಕ್ಕೂ ಸವಾಲಿನ ವಿಚಾರ. ಈ ನಿಟ್ಟಿನಲ್ಲಿ, ಹೊಸ ಮಾರ್ಗದ ರಚನೆ ನಡೆಯಲಿದೆ. ಜರ್ಮನಿಯ ಗೋಲ್ಡ್ ಹಾಫರ್ ಕಂಪನಿ ಈ ವಿಗ್ರಹದ ಸಾಗಣೆಗಾಗಿ ವಿಶೇಷ ವಾಹನವನ್ನು ರಚಿಸಿದೆ ಒಟ್ಟು 720 ಚಕ್ರಗಳ, 90 ಆಕ್ಸೆಲ್ ವಾಹನ ಇದಾಗಲಿದೆ. ಇಟಲಿ ಕಂಪನಿ ನಿರ್ಮಿಸಿರುವ ಜಾಕ್ ಮೂಲಕ ವಿಗ್ರಹವನ್ನು ವಾಹನದಲ್ಲಿ ಎತ್ತಿಡಲಾಗುವುದು.












Click it and Unblock the Notifications