ಸೋಮಣ್ಣ,ಬಚ್ಚೇಗೌಡ,ಯೋಗೀಶ್ವರ್ ಬಿಜೆಪಿಗೆ ಗುಡ್ ಬೈ?

ಬಿಜೆಪಿಯಲ್ಲಿನ ಆಂತರಿಕ ಕಲಹ, ಭ್ರಷ್ಟಾಚಾರ ಜೊತೆಗೆ ಬಿಜೆಪಿಯ ಪ್ರಮುಖ ನಾಯಕರು ವಲಸೆ ಬಂದವರ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುತ್ತಿರುವುದರಿಂದ ಸಚಿವರುಗಳಾದ ವಿ ಸೋಮಣ್ಣ, ಬಿ ಎನ್ ಬಚ್ಚೇಗೌಡ, ಸಿ ಪಿ ಯೋಗೀಶ್ವರ್ ಅಲ್ಲದೆ ತುಮಕೂರಿನ ಸಂಸದ ಜಿ ಎಸ್ ಬಸವರಾಜ್ ಪಕ್ಷ ತೊರೆದು ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.
ಸಂಸದ ಬಸವರಾಜ್ ತುಮಕೂರು ಗ್ರಾಮಾಂತರ ಅಥವಾ ಗುಬ್ಬಿ, ವಿ ಸೋಮಣ್ಣ ರಾಜಾಜಿನಗರ, ಹೊಸಕೋಟೆಯಿಂದ ಬಚ್ಚೇಗೌಡ ಸ್ಪರ್ಧಿಸಲು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಕಾಂಗ್ರೆಸ್ ನಾಯಕಿ ತೇಜಶ್ವಿನಿ ಅರಣ್ಯ ಸಚಿವ ಯೋಗೀಶ್ವರ್ ರಾಮನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಬೇಕೆಂದು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಈ ಎಲ್ಲಾ ಪ್ರಭಾವಿ ಲಿಂಗಾಯಿತ ನಾಯಕರುಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ಉತ್ಸುಕ ತೋರಿದ್ದರೂ ಇನ್ನೂ ಯಾವುದೇ ಖಚಿತ ಭರವಸೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಪ್ಪತ್ತು ಸಾವಿರಗಿಂತ ಕಡಿಮೆ ಮತ ಪಡೆದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಈ ಬಾರಿ ಟಿಕೆಟ್ ನೀಡದಿರಲು ನಿರ್ಧರಿಸಿರುವುದರಿಂದ ತಾನು ಬಯಸಿದ ರಾಜಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಕಣಕ್ಕೆ ಇಳಿಯ ಬಹುದು ಎನ್ನುವುದು ವಿ ಸೋಮಣ್ಣ ಅವರ ಲೆಕ್ಕಾಚಾರ.
ಬೆಂಗಳೂರಿನಲ್ಲಿ ಪಕ್ಷ ಬಿಟ್ಟು ಪಕ್ಷ ಸೇರುವವರಿಗೆ ಕಾಂಗ್ರೆಸ್ ಬಾಗಿಲು ತೆರೆದಿಲ್ಲ ಎಂದು ರಾಜ್ಯಾಧ್ಯಕ್ಷ ಪರಮೇಶ್ವರ್ ಹೇಳಿಕೆ ನೀಡಿದ್ದರೂ ಈ ನಾಲ್ಕೂ ನಾಯಕರು ದೆಹಲಿ ಮಟ್ಟದಲ್ಲಿ ಪ್ರಭಾವಿಗಳಾಗಿರುವುದರಿಂದ ಹೈಕಮಾಂಡ್ ಪಕ್ಷಕ್ಕೆ ರೆಡ್ ಕಾರ್ಪೆಟ್ ಸ್ವಾಗತ ನೀಡಬಹುದು.
ದಾವಣಗೆರೆಯ ಪ್ರಭಾವಿ ಲಿಂಗಾಯಿತ ಸಮುದಾಯದ ಮುಖಂಡ ಶಾಮನೂರು ಶಿವಶಂಕರಪ್ಪ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಕೂಗಿಗೆ ಕಾಂಗ್ರೆಸ್ ಹೈಕಮಾಂಡ್ ಸೊಪ್ಪು ಹಾಕಿರಲಿಲ್ಲ.
ಹೀಗಾಗಿ ಲಿಂಗಾಯಿತ ಸಮುದಾಯವನ್ನು ಸೆಳೆಯಲು ಈ ನಾಲ್ಕೂ ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರೆ ಜಾತಿ ಲೆಕ್ಕಾಚಾರ ವರ್ಕೌಟ್ ಆಗಬಹುದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ ಆಗಿದ್ದರೂ ಆಗಿರಬಹುದು.












Click it and Unblock the Notifications