ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕನ್ನಡ ಫಲಕ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಸುದ್ದಿಗಾರರೊಂದಿಗೆ ಮಾತನಾಡಿ, ವರ್ಷಾಂತ್ಯಕ್ಕೆ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ಕನ್ನಡ ಸಂಸ್ಕೃತಿ ಬಿಂಬಿಸುವ ವಾತವರಣ ಸೃಷ್ಟಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಮೊದಲ ಹಂತವಾಗಿ ಬಿಐಎಎಲ್ ನ ಎಲ್ಲಾ ದರ್ಶಕ ಫಲಕಗಳು ಅಂಗ್ಲಭಾಷೆಯ ಜೊತೆಗೆ ಕನ್ನಡದಲ್ಲಿ ಕಾಣಿಸಲಿದೆ ಎಂದರು.
ಈ ಬಗ್ಗೆ ವಿಮಾನ ಪ್ರಾಧಿಕಾರಕ್ಕೂ ಪ್ರಸ್ತಾಪ ಸಲ್ಲಿಸಲಾಗಿದೆ. ಮೊದಲ ಹಂತದಲ್ಲಿ ಕನ್ನಡ ನಾಮಫಲಕಗಳು ಮುಂದಿನ ಮೂರು ತಿಂಗಳಲ್ಲಿ ಕಾಣಿಸಲಿದೆ. ವಿಮಾನಯಾನ ಸೂಚನೆಗಳು, ಆಗಮನ, ನಿರ್ಗಮನ ಸೂಚನೆಯನ್ನು ಕೂಡಾ ಕನ್ನಡದಲ್ಲಿ ನೀಡುವಂತೆ ಕೇಳಿಕೊಳ್ಳಲಾಗಿದೆ.
ವಿಮಾನ ನಿಲ್ದಾಣದ ಮಳಿಗೆಗಳಲ್ಲಿ ಕನ್ನಡ ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆಗಳು ಸಿಗುವಂತೆ ಮಾಡುತ್ತೇವೆ ಎಂದು ಬಿಐಎಎಲ್ ನ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ.
ಕನ್ನಡ ರಾಜ್ಯೋತ್ಸವ ದಿನದಂದು ಪ್ರತಿ ವರ್ಷ ತಪ್ಪದೇ ಸಂಭ್ರಮದಿಂದ ನಾಡ ಹಬ್ಬ ಆಚರಿಸುವಂತೆ ಬಿಐಎಎಲ್ ಸಂಸ್ಥೆಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದ ಒಳಗೂ ಹೊರಗೂ ಕನ್ನಡಮಯ ವಾತವರಣ ಸೃಷ್ಟಿ, ನಿಯಮ ಅಳವಡಿಕೆ, ಬೆಳವಣಿಗೆ ಬಗ್ಗೆ ನಿಗಾ ವಹಿಸುವಂತೆ ಸಂಬಂಧಪಟ್ಟ ತಹಸೀಲ್ದಾರರಿಗೂ ಸೂಚಿಸಲಾಗಿದೆ.
ನಮ್ಮ ಹೆಮ್ಮೆಯ ಕನ್ನಡ ಭಾಷೆ ಬಳಕೆ ಮಾಡಲು ಯಾರ ಮೇಲೂ ಒತ್ತಡ ಹೇರಬೇಕಿಲ್ಲ. ಪ್ರೀತಿಯಿಂದ ಬೆಳೆದು ಬಂದಿರುವ ಭಾಷೆ, ಪ್ರೀತಿಯಿಂದಲೇ ಬೆಳೆಯುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಈ ಸಂದರ್ಭದಲ್ಲಿ ಹೇಳಿದರು.
ನಂತರ ನಗರದ ಹೊರವಲಯದ ಬಿಡದಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಘಟಕಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಚಂದ್ರು, ಅಲ್ಲಿನ ವ್ಯವಸ್ಥಾಪಕರೊಡನೆ ಚರ್ಚೆ ನಡೆಸಿದರು. ಸಂಸ್ಥೆಯ ನಾಮಫಲಕಗಳನ್ನು ಕನ್ನಡದಲ್ಲಿ ಇರುವಂತೆ ನೋಡಿಕೊಳ್ಳಿ, ನಾಡಹಬ್ಬ ಆಚರಿಸಿ ಎಂದು ಸೂಚಿಸಿದರು.
ನಿಮ್ಮ ಸಂಸ್ಥೆಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ನಿರ್ಲಕ್ಷ್ಯಕ್ಕೆ ಒಳಗಾಗಿದಿದ್ದರೆ, ತಪ್ಪದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಮೊರೆ ಹೊಕ್ಕಿರಿ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಕರ್ನಾಟಕ ಸರ್ಕಾರದ ಒಂದು ಪ್ರತ್ಯೇಕ ಮಂಡಳಿ ಅಥವಾ ಪ್ರಾಧಿಕಾರವಾಗಿದೆ. ಈ ಸಂಸ್ಥೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಹೀಗಿದ್ದರೂ ಕೂಡ ಸದರಿ ಪ್ರಾಧಿಕಾರವು ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಲು ಅಥವಾ ಕಾರ್ಯಗತಗೊಳಿಸಲು ಸ್ವಾಯತ್ತ ಅಧಿಕಾರವನ್ನು ಹೊಂದಿದೆ. ಕರ್ನಾಟಕ ರಾಜ್ಯದ ಆಡಳಿತದಲ್ಲಿ ಕನ್ನಡ ಭಾಷೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಪ್ರಾಧಿಕಾರವು ಶ್ರಮಿಸುತ್ತಿದೆ.