ಸಿದ್ದು ಬಂದಿದ್ದೇ ಬಂದಿದ್ದು ಕಾಂಗ್ರೆಸ್ ಎಕ್ಕುಟ್ಟೋಯಿತು

ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣೆಗೆ ಹೋದರೆ ಕಾಂಗ್ರೆಸ್ ಪಕ್ಷಕ್ಕೆ 60 ಸ್ಥಾನ ಕೂಡಾ ಲಭಿಸದು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎಲ್ಲವೂ ಸರಿ ಇದ್ದವು. ನಂತರ ವಲಸೆ ಬಂದವರ ಕಾಟದಿಂದ ಪಕ್ಷ ಹದೆಗೆಟ್ಟಿ ಹೋಯಿತು. ಅದರಲ್ಲೂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಯಾವಾಗ ಬಂದರೋ ಪಕ್ಷ ಎಕ್ಕುಟ್ಟು ಹೋಯಿತು ಎಂದು ಮಹಾದೇವ್ ಹೇಳಿಕೆ ನೀಡಿದ್ದಾರೆ.
ತಾನು ಕಾಂಗ್ರೆಸ್ ಪಕ್ಷದಲ್ಲಿದ್ದರೆ ಹಿಂದುಳಿದ ವರ್ಗದವರು ತನ್ನ ಜೊತೆ ಬರುತ್ತಾರೆ ಎನ್ನುವ ಭ್ರಮೆ ಸಿದ್ದರಾಮಯ್ಯ ಅವರಿಗಿದೆ. ಬೇರೆ ಪಕ್ಷದಲ್ಲೂ ಹಿಂದುಳಿದ ವರ್ಗದ ನಾಯಕರಿದ್ದಾರೆ. ಸಿದ್ದು ಅಧಿಕಾರಕದ ಆಸೆಗೆ ಕಾಂಗ್ರೆಸ್ ಸೇರಿದಾರೆಯೇ ಹೊರತು ಕಾಂಗ್ರೆಸ್ ಕಟ್ಟಿ ಬೆಳೆಸಲು ಬಂದಿದ್ದಲ್ಲ ಎಂದು ಮಹಾದೇವ್ ಟೀಕಿಸಿದ್ದಾರೆ.
ತನಗೆ ಅಧಿಕಾರ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಿದ್ದು ಜೆಡಿಎಸ್ ತೊರೆದದ್ದು, ಸ್ವಾಭಿಮಾನಕ್ಕೆ ಧಕ್ಕೆಯಾಗಿ ಅಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೂಚಿಸಿದರೆ ಸಿದ್ದರಾಮಯ್ಯ ವಿರುದ್ದ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸುವೆ. ಯಾವುದೇ ಕಾರಣಕ್ಕೂ ಜೆಡಿಎಸ್ ಕಾಂಗ್ರೆಸ್ ಜೊತೆ ಹೊಂದಾಣಿಕೆ ನಡೆಸುವುದಿಲ್ಲ ಎಂದು ಮಹಾದೇವ್ ಸ್ಪಷ್ಟ ಪಡಿಸಿದ್ದಾರೆ.
ವೀರಶೈವರಲ್ಲಿ ಒಗ್ಗಟ್ಟಿಲ್ಲ. ಆ ಪಂಗಡದವರನ್ನು ರಾಜಕೀಯ ಪಕ್ಷಗಳು ಸಂಕುಚಿತ ಮನೋಭಾವದಿಂದ ನೋಡುತ್ತಿದೆ. ಇಬ್ಬರು ಮುಖ್ಯಮಂತ್ರಿಗಳು ಆ ಪಂಗಡದಿಂದ ಆಯ್ಕೆಯಾಗಿದ್ದರೂ ಆ ಸಮುದಾಯ ಅಭಿವೃದ್ದಿಯಾಗಿಲ್ಲ. ಮಾತಿನ ಮಧ್ಯೆ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಛೇಡಿಸಿದ ಮಹಾದೇವ್ ಸಿದ್ದು ಒಬ್ಬ ಅವಕಾಶವಾದಿ ಎಂದಿದ್ದಾರೆ.












Click it and Unblock the Notifications