ಸಿಎಂ ನೀಡಿದ ಶಾಕ್,ಶಾಸಕರ ವಿದೇಶ ಪ್ರವಾಸ ರದ್ದು
ರಾಜ್ಯದ 146 ತಾಲೂಕುಗಳು ತೀವ್ರ ಬರ ಎದುರಿಸುತ್ತಿರ ಬೇಕಾದರೆ ಸಾರ್ವಜನಿಕರ ದುಡ್ಡಿನಲ್ಲಿ ಶಾಸಕರ ವಿದೇಶ ಪ್ರವಾಸ ತೀವ್ರ ಟೀಕೆಗೆ ಗುರಿಯಾದ ಬೆನ್ನಲ್ಲೇ ಮುಖ್ಯಮಂತ್ರಿ ಶೆಟ್ಟರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
12 ಶಾಸಕರ ಎರಡನೇ ತಂಡ ಇದೇ 26ರಂದು ರಷ್ಯಾ ಮತ್ತು ಯುರೋಪ್ ಖಂಡಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಸಿಎಂ ಅದಕ್ಕೂ ತಡೆಹಾಕಿದ್ದಾರೆ. ತಮ್ಮ ತಮ್ಮ ಪಕ್ಷದ ಶಾಸಕರುಗಳು ಅಧ್ಯಯನದ ನೆಪದಲ್ಲಿ ವಿದೇಶ ಪ್ರವಾಸಕ್ಕೆ ತೆರಳಿದ್ದರೂ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಕುಮಾರಸ್ವಾಮಿ, ಸದಾನಂದ ಗೌಡ, ಧರಂ ಸಿಂಗ್ ಸೇರಿದಂತೆ ಹಲವಾರು ಮುಖಂಡರು ಪ್ರವಾಸಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು.
ಸದ್ಯ ವಿದೇಶ ಪ್ರವಾಸದಲ್ಲಿರುವ 12 ಶಾಸಕರುಗಳ ಪೈಕಿ 9ಜನ ಶಾಸಕರು ತಮ್ಮ ಕುಟುಂಬದವರೊಂದಿಗೆ ಪ್ರವಾಸಕ್ಕೆ ತೆರಳಿದ್ದಾರೆ. ಪ್ರತಿ ಶಾಸಕರ ಈ ವಿದೇಶ ಪ್ರವಾಸಕ್ಕೆ ಸರಕಾರ ಬೊಕ್ಕಸದಿಂದ ಆರು ಲಕ್ಷ ರೂಪಾಯಿ ವ್ಯಯಿಸುತ್ತಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಸ್ಪೀಕರ್ ಬೋಪಯ್ಯ ವಿದೇಶ ಪ್ರವಾಸಕ್ಕೆ ಅನುಮತಿ ನೀಡಬಾರದಾಗಿತ್ತು ಎಂದು ಆಪಾದಿಸಿದೆ. ಕಾಂಗ್ರೆಸ್ ಪಕ್ಷದಿಂದ ಬಿ ಸಿ ಪಾಟೀಲ್ (ಹಿರೇಕೆರೂರು), ಡಾ. ಸುಧಾಕರ್ ರೆಡ್ಡಿ (ಚಿಂತಾಮಣಿ), ಜೆಡಿಎಸ್ ನಿಂದ ವೆಂಕಟರಾವ್ ನಾಡೇಗೌಡ (ಸಿಂಧನೂರು), ಎಚ್ ಎಸ್ ಪ್ರಕಾಶ್ (ಹಾಸನ), ಎಚ್ ಕೆ ಕುಮಾರಸ್ವಾಮಿ (ಸಕಲೇಶಪುರ) ವಿದೇಶ ಪ್ರವಾಸದಲ್ಲಿದ್ದಾರೆ.
ಬಿಜೆಪಿಯ ಶಾಸಕರಾದ ಬಸವರಾಜ್ ನಾಯಕ್, ರಮೇಶ್ ಬಿ, ಮೋಹನ್ ಲಿಂಬಿಕಾಯಿ, ಚಂದ್ರಕಾಂತ್ ಬೆಲ್ಲದ್, ಪ್ರಭು ಚವಾಣ್ ಜೊತೆಗೆ ಕಮಿಟಿ ಸದಸ್ಯರಾದ ಸುರೇಶ್ ಮತ್ತು ಪ್ರತಾಪ್ ಪಾಟೀಲ್ ವಿದೇಶ ಪ್ರವಾಸಕ್ಕೆ ತೆರಳಿದವರು.