ವಿಟಿಯು ಕ್ಯಾರಿ ಓವರ್, ಸಪ್ಲಿ ಪರೀಕ್ಷೆಗೆ ಸಿದ್ಧರಾಗಿ : HC
ವಿಟಿಯು ಅಧೀನದಲ್ಲಿ ಬರುವ ಕಾಲೇಜುಗಳಲ್ಲಿ ಕ್ಯಾರಿಓವರ್ ನೀಡುವಂತೆ ಬೆಂಗಳೂರು ಮೂಲದ ಎಂ.ಯೋಗೀಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ನೇತೃತ್ವದ ಏಕಸದಸ್ಯ ಪೀಠ, ಇಂಜಿನಿಯರಿಂಗ್ ಪದವಿಯಲ್ಲಿ ಒಂದು ಮತ್ತು ಎರಡನೇ ಸೆಮಿಸ್ಟರ್ ನಲ್ಲಿ 4 ಕ್ಕಿಂತ ಅಧಿಕ ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಒಂದು ವಾರದೊಳಗೆ ವಿಶೇಷ ಮರು ಪರೀಕ್ಷೆ ಮಾಡಿ, ಅದರಲ್ಲಿ ತೆರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಮುಂದಿನ ಸೆಮಿಸ್ಟರ್ಗೆ ದಾಖಲಾತಿ ನೀಡಿ. ನಾಲ್ಕು ಮತ್ತು ಆರನೇ ಸೆಮಿಸ್ಟರ್ಗೆ ಕ್ಯಾರಿಓವರ್ ಪದ್ದತಿ ನೀಡುವ ಮಾತೇ ಇಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಈ ಪರೀಕ್ಷೆಯಲ್ಲಿ ಪಾಸಾಗುವವರಿಗೆ ಮಾತ್ರ ಮುಂದಿನ ಸೆಮಿಸ್ಟರ್ಗೆ ಪ್ರವೇಶ ಕಲ್ಪಿಸಲು ಅವಕಾಶ ನೀಡಿದೆ. ಆದರೆ, 4 ಮತ್ತು 6 ಸೆಮಿಸ್ಟರ್ಗೆ ಮಾತ್ರ ಕ್ಯಾರಿ ಓವರ್ ನೀಡುವ ಮಾತೇ ಇಲ್ಲ ಎಂದು ನ್ಯಾ ರಾಮಮೋಹನ ರೆಡ್ಡಿ ಅವರ ನ್ಯಾಯಪೀಠ ಖಡಾಖಂಡಿತವಾಗಿ ಹೇಳಿದೆ.
ಗುಣ ಮಟ್ಟದ ಶಿಕ್ಷಣ ಮರಿಚೀಕೆ: ವಿದೇಶ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿಕೊಂಡರೆ ನಮ್ಮ ಶಿಕ್ಷಣದ ಗುಣಮಟ್ಟ ಬಹಳಷ್ಟು ಕಡಿಮೆ ಇದೆ. ವಿಶ್ವದ ಯಾವ ದೇಶದಲ್ಲೂ ಇಲ್ಲದ ಕ್ಯಾರಿ ಓವರ್ ಪದ್ದತಿ ನಮ್ಮಲ್ಲಿ ಮಾತ್ರ ಯಾಕೆ ಎಂದು ಪೀಠ ಪ್ರಶ್ನಿಸಿತು. ವಿಶ್ವವಿದ್ಯಾಲಯಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಕಾಲೇಜುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ.
ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ನೀಡುತ್ತಾ ಹೋದಂತೆ ಅವರು ಇನ್ನಷ್ಟು ಸೋಮಾರಿಗಳಾಗುತ್ತಾರೆ. ಅಧ್ಯಯನದ ಬಗ್ಗೆ ಸರಿಯಾಗಿ ಗಮನ ಹರಿಸುವುದಿಲ್ಲ. ವಿದೇಶ ವಿಶ್ವವಿದ್ಯಾಲಯಗಳಿಗೆ ಹೋಲಿಕೆ ಮಾಡಿಕೊಂಡರೆ ನಮ್ಮ ಶಿಕ್ಷಣದ ಗುಣಮಟ್ಟ ಬಹಳಷ್ಟು ಕಡಿಮೆ ಇದೆ.
ರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳು ಅಧ್ಯಯನಕ್ಕಿಂತ ಹೆಚ್ಚಾಗಿ ಟಿ.ವಿ ನೋಡುತ್ತಾ, ಎಸ್ಎಂಎಸ್ ಮಾಡುತ್ತಾ, ಕಂಪ್ಯೂಟರ್ನಲ್ಲಿ ಆಟವಾಡುತ್ತಾ ಕಾಲಕಳೆಯುತ್ತಾರೆ. ಅದಕ್ಕೆ ಸರಿಯಾಗಿ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಿರುತ್ತಾರೆ. ಚಿಂತಕರು, ಜ್ಞಾನಿಗಳು ತುಂಬಿರಬೇಕಾದ ವಿವಿಗಳಲ್ಲಿ ಅಲ್ಪಜ್ಞಾನ ಹೊಂದಿದವರೆ ಹೆಚ್ಚಾಗಿದ್ದಾರೆ. ವಿಶ್ವವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ದಾಖಲೆ ಮಾಡಿಕೊಂಡು ಅದರಿಂದ ಹಣಮಾಡಿಕೊಳ್ಳುತ್ತಿದ್ದಾರೆ ಎಂದು ನ್ಯಾ. ರಾಮಮೋಹನ್ ರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ಹೈಕೋರ್ಟಿನ ತೀರ್ಪಿನಿಂದ ಸುಮಾರು 19,000 ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಎರಡು ವರ್ಷಗಳ ಕೆಳಗೆ ಜಾರಿಗೊಂಡ ಈ ಕ್ಯಾರಿ ಓವರ್ ಪದ್ಧತಿಗೆ ವ್ಯಾಪಕ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಈ ನಿಯಮದ ಪ್ರಕಾರ ಒಬ್ಬ ವಿದ್ಯಾರ್ಥಿ ಯಾವುದೇ ಘಟ್ಟದಲ್ಲಿ ಕಳೆದ ವರ್ಷದ 4 ವಿಷಯಕ್ಕಿಂತ ಅಧಿಕ ಬ್ಯಾಕ್ ಲಾಗ್ ಹೊಂದಿರುವಂತಿಲ್ಲ. ಹೆಚ್ಚಿನ ಬ್ಯಾಕ್ ಲಾಗ್ ಹೊಂದಿದ್ದರೆ ಆ ಸೆಮಿಸ್ಟರ್ ಮತ್ತೊಮ್ಮೆ ಓದಬೇಕಾಗುತ್ತದೆ.
ಈ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿದ ವಿದ್ಯಾರ್ಥಿ ವೃಂದ ಸಂಪ್ಲಿಮೆಂಟರಿ ಪರೀಕ್ಷೆಯಲ್ಲಿ ಬ್ಯಾಕ್ ಲಾಗ್ ವಿಷಯಗಳನ್ನು ಪೂರ್ಣಗೊಳಿಸುತ್ತೇವೆ ಎಂದು ವಿದ್ಯಾರ್ಥಿ ವೃಂದ ಹೇಳಿದೆ.
ವಿಟಿಯು ನಿಯಮದ ಪ್ರಕಾರ ಸ್ವಾಯುತ್ತತೆ (non-autonomous) ಪಡೆಯದ ಎಲ್ಲಾ ಕಾಲೇಜುಗಳಲ್ಲಿ ಐದನೇ ಸೆಮಿಸ್ಟರ್ ಇಂಜಿನಿಯರಿಂಗ್ ತರಗತಿಗೆ ವಿದ್ಯಾರ್ಥಿ ಅರ್ಹತೆ ಪಡೆಯಬೇಕಾದರೆ ಮೊದಲ ಎರಡು ಸೆಮಿಸ್ಟರ್ ಗಳ ಎಲ್ಲಾ ಪಠ್ಯ ವಿಷಯಗಳಲ್ಲಿ ಪಾಸಾಗಿರಬೇಕು. ಹಾಗೂ ನಾಲ್ಕನೇ ಮತ್ತು ಐದನೇ ಸೆಮಿಸ್ಟರ್ ನ ಎಲ್ಲಾ ವಿಷಯಗಳಲ್ಲಿ ಪಾಸ್ ಆದರೆ ಮಾತ್ರ 7 ನೇ ಸೆಮಿಸ್ಟರ್ ತರಗತಿಗೆ ಹಾಜರಾಗಬಹುದಾಗಿತ್ತು.