ಚಿಕ್ಕಮಗಳೂರಿನ ಕೊಪ್ಪದಲ್ಲಿ ಶಂಕಿತ ಉಗ್ರ ಸೆರೆ

ಚಿಕ್ಕಮಗಳೂರು, ಭಟ್ಕಳ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಉಗ್ರರ ಚಟುವಟಿಕೆ ತಾಣಗಳನ್ನು ಕಂಡು ಹಿಡಿಯಲಾಗಿದ್ದು, ಒಂದಿಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ ಎಂಬ ಮಾಧ್ಯಮ ವರದಿಯಲ್ಲಿ ಎರಡು ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು ಶನಿವಾರ (ಸೆ.1) ಅಲ್ಲಗೆಳೆದಿದ್ದರು. ಆದರೆ, ಉಗ್ರರ ಅಡಗುತಾಣಗಳ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಭಾನುವಾರ ಮುಂಜಾನೆಯಿಂದಲೇ ಕಾರ್ಯಾಚರಣೆಗೆ ಇಳಿದಿದ್ದಾರೆ.
ಇದೀಗ ಬಂದ ಸುದ್ದಿ: ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಗೃಹ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಚಿಕ್ಕಮಗಳೂರು ಮತ್ತು ಮೂಡಿಗೆರೆಯಲ್ಲಿ ಶಂಕಿತ ಭಯೋತ್ಪಾದಕರನ್ನು ಬೆಂಗಳೂರಿನ ಸಿಸಿಬಿ ಪೋಲಿಸರು ದಸ್ತಗಿರಿ ಮಾಡಿದ್ದಾರೆ ಎನ್ನುವ ವದಂತಿ ಯೊಂದು ಜಿಲ್ಲೆಯಲ್ಲಿ ಹರಡಿದ್ದು, ಸಾರ್ವಜನಿಕ ವಲಯದಲ್ಲಿ ಭೀತಿ ಸೃಷ್ಟಿಸಿತ್ತು.
ಆರಂಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಶಂಕಿತ ಭಯೋತ್ಪಾದಕನೋರ್ವನನ್ನು ಬಂಧಿಸಲಾಗಿದೆ ಎಂಬ ಸುದ್ದಿ ಎಸ್ ಎಂಎಸ್ ಮೂಲಕ ಹಬ್ಬಿತು. ಕೆಲವು ಹೊತ್ತಿನ ಬಳಿಕ ಮೂಡಿಗೆರೆ ಜುಮ್ಮಾ ಮಸೀದಿ ರಸ್ತೆಯಲ್ಲಿ ಶಂಕಿತ ಭಯೋತ್ಪಾದಕನೋರ್ವನನ್ನು ಬಂಧಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದವು.
ಈ ಕುರಿತು ಸಾರ್ವಜನಿಕರು ತೀವ್ರ ಕುತೂಹಲ ಮತ್ತು ಭಯಭೀತರಾಗಿ ಒಬ್ಬರಿಗೊಬ್ಬರು ಮೊಬೈಲ್ ಮೂಲಕ ಪರಸ್ಪರ ವಿಚಾರಿಸುತ್ತಿರುವ ಸಂಗತಿ ಕಂಡು ಬಂದವು.
ಈ ಬಗ್ಗೆ ಚಿಕ್ಕಮಗಳೂರು ಮತ್ತು ಮೂಡಿಗೆರೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ್ರನ್ನು ಸಂಪರ್ಕಿಸಿದಾಗ ಜಿಲ್ಲೆಯಲ್ಲಿ ಭಯೋತ್ಪಾದಕರ ಬಂಧನ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇದು ಕೇವಲ ಊಹಾಪೋಹ ಅಥವಾ ಕಪೋಲಕಲ್ಪಿತ ಎಂದು ನಿರಾಕರಿಸಿದರು.
***
ಭಟ್ಕಳ: ಭಟ್ಕಳ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಉಗ್ರ ಚಟುವಟಿಕೆಗಳು ನಡೆಯುತ್ತಿಲ್ಲ. ಮತ್ತು ಈ ಕುರಿತು ಯಾರನ್ನೂ ಬಂಧಿಸಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ವದಂತಿಯಷ್ಟೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಬಾಲಕೃಷ್ಣನ್ ಸ್ಪಷ್ಟಪಡಿಸಿದ್ದಾರೆ.
ಭಟ್ಕಳದಲ್ಲಿ ದಾವೂದ್ ಇಬ್ರಾಹೀಂ ಸಹೋದರನೋರ್ವನ ವಾಣಿಜ್ಯ ಕಟ್ಟಡ ಇದ್ದು, ಅದರ ಲಕ್ಷಾಂತರ ಬಾಡಿಗೆ ಹಣ ಉಗ್ರ ಚಟುವಟಿಕೆಗೆ ಸೇರುತ್ತಿದೆ ಎಂಬ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಹರಡಿತ್ತು.ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಭಟ್ಕಳದಂತಹ ಪ್ರದೇಶದಲ್ಲಿ ಲಕ್ಷಾಂತರ ಬಾಡಿಗೆ ವ್ಯವಹಾರ ನಡೆಸಲು ಸಾಧ್ಯವೇ ಎಂದು ಮರು ಪ್ರಶ್ನಿಸಿದ್ದಾರೆ.
ಅಲ್ಲದೆ ಭಟ್ಕಳದಲ್ಲಿ ದಾವೂದ್ ಸಂಬಂಧಿಯ ವಾಣಿಜ್ಯ ಕಟ್ಟಡ ಇರುವ ಕುರಿತಂತೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಎಸ್ಪಿ ಕೆ.ಬಾಲಕೃಷ್ಣನ್ ಸ್ಪಷ್ಟಪಡಿಸಿದರು. ಭಟ್ಕಳ ಕುರಿತಂತೆ ಆಗಾಗ ಗಾಳಿ ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಇದನ್ನು ನಂಬುವ ಹಾಗಿಲ್ಲ ಎಂದ ಅವರು, ರಿಯಾಜ್, ಯಾಸಿನ್ ಅವರ ಭಟ್ಕಳ ಮೂಲದ ಬಗ್ಗೆ ಮಾಹಿತಿ ಇದೆ ಬಿಟ್ಟರೆ ಉಳಿದಂತೆ ಇದುವರೆವಿಗೂ ಯಾವುದೇ ಉಗ್ರ ಚಟುವಟಿಕೆ, ಬಂಧನ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ.












Click it and Unblock the Notifications