ಸೆ.8ಕ್ಕೆ ತಾಳಗುಪ್ಪ- ಬೆಂಗಳೂರು ರೈಲು ಸಂಚಾರ
ಸೆ.8 ರಿಂದ ತಾಳಗುಪ್ಪ ಹಾಗೂ ಬೆಂಗಳೂರು ನಡುವೆ ರೈಲು ಸಂಚರಿಸಲಿದ್ದು, ಕೇಂದ್ರ ಸಚಿವ ಕೆಎಚ್ ಮುನಿಯಪ್ಪ ಅವರು ಚಾಲಬ್ನೆ ನೀಡಲಿದ್ದಾರೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
ನಗರದ ಪಿಇಎಸ್ ಐಟಿ ಕಾಲೇಜು ಆವರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಟಿಎಂ ಶಾಖೆ ಆರಂಭಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
ಕೆಎಚ್ ಮುನಿಯಪ್ಪ ಅವರನ್ನು ಚಾಲನೆ ನೀಡಲು ಆಹ್ವಾನಿಸಲಾಗಿದ್ದು, ಅವರ ಬಿಡುವಿನ ಸಮಯಕ್ಕೆ ಕಾಯಲಾಗಿತ್ತು. ಹೀಗಾಗಿ ಉದ್ಘಾಟನೆ ಕಾರ್ಯಕ್ರಮ ಕೊಂಚ ವಿಳಂಬವಾಗಿದೆ ಎಂದು ರಾಘವೇಂದ್ರ ಹೇಳಿದರು.
ಹೊಸ ರೈಲು ಮಾರ್ಗ ಬಂದ ಕೂಡಲೇ ಈಗಿರುವ ಮೈಸೂರು ತಾಳಗುಪ್ಪ ರೈಲನ್ನು ನಿಲ್ಲಿಸಲಾಗುತ್ತೆ ಎಂಬ ಸಂಶಯಬೇಡ. ಮೈಸೂರು-ತಾಳಗುಪ್ಪ ರೈಲು ಎಂದಿನಂತೆ ಸಂಚರಿಸಲಿದೆ. ಬೆಂಗಳೂರು ಹಾಗೂ ತಾಳಗುಪ್ಪ ನಡುವೆ ರೈಲು ಮಾರ್ಗಕ್ಕಾಗಿ ಬ್ರಾಡ್ ಗೇಜ್ ಪರಿವರ್ತನೆ ಮಾಡಲಾಗಿದೆ.
ಶಿವಮೊಗ್ಗ ಹಾಗೂ ತಾಳಗುಪ್ಪ ಬ್ರಾಡ್ ಗೇಜ್ ಪರಿವರ್ತನೆಗೆ ಸುಮಾರು 240 ಕೋಟಿ ರು ವೆಚ್ಚವಾಗಿದೆ ಎಂದು ರಾಘವೇಂದ್ರ ಹೇಳಿದರು. ಶಿವಮೊಗ್ಗ ಹರಿಹರ ಮಾರ್ಗದ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ರೈತರ ಅನುಮತಿಗಾಗಿ ಕಾಯಲಾಗುತ್ತಿದೆ ಎಂದರು.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬೆಳಿಗ್ಗೆ 6.30ಕ್ಕೆ ಬರುವ ರೈಲು 8.10ಕ್ಕೆ ತಾಲಗುಪ್ಪ ತಲುಪಲಿದೆ. ಇದೇ ರೈಲು ರಾತ್ರಿ 8 ಗಂಟೆಗೆ ತಾಳಗುಪ್ಪದಿಂದ ಹೊರಟು ಶಿವಮೊಗ್ಗ ತಲುಪಿ ರಾತ್ರಿ 10.30ಕ್ಕೆ ಶಿವಮೊಗ್ಗದಿಂದ ಬೆಂಗಳೂರು ತಲುಪಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಕೊಡಗಿಗೆ ರೈಲು: ಮೈಸೂರಿನಿಂದ ಕೊಡುಗಿಗೆ ರೈಲು ಸಂಪರ್ಕ ಕಲ್ಪಿಸಲು ಯೋಜಿಸಿದ್ದು, ಆರು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.ರೈಲ್ವೇ ಪೊಲೀಸರಿಗೆ ಈ ನಿಟ್ಟಿನಲ್ಲಿ ಹೆಚ್ಚಿನ ಅಧಿಕಾರ ಕೊಡಲು ಚಿಂತಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದಾರೆ.