ಡಾಕ್ಟರ್ ಜಾಫರ್ ಕೈಯಲ್ಲಿ ಗನ್ ಕೊಟ್ಟಿದ್ದು ಯಾರು?

ತನಿಖೆಯಲ್ಲಿ ತೊಡಗಿರುವ ಬೆಂಗಳೂರು ಸಿಸಿಬಿ ಪೊಲೀಸರು ಈ ರಹಸ್ಯವನ್ನು ಭೇದಿಸಲು ಹೊರಟಿದ್ದಾರೆ. ಅವರ ಪ್ರಕಾರ, ಬುಧವಾರ, ಆಗಸ್ಟ್ 30ರಂದು ಹುಬ್ಬಳ್ಳಿಯಲ್ಲಿ ಬಂಧಿತನಾಗಿರುವ ಜಾಫರ್ ಇಕ್ಬಾಲ್ ಶೋಲಾಪುರ ಕೈಗೆ ಈ ವಿದೇಶಿ ಪಿಸ್ತೂಲನ್ನು ಹಸ್ತಾಂತರಿಸಿದ್ದು ತಲೆಮರೆಸಿಕೊಂಡಿರುವ ಮತ್ತೊಬ್ಬ ಭಯೋತ್ಪಾದಕ, ನಿಷೇಧಿತ ಸಂಘಟನೆ ಸ್ಟುಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ(ಸಿಮಿ)ದ ಮುಖಂಡ ಜಾಕಿರ್.
ಅತ್ಯಂತ ಬುದ್ಧಿವಂತ ಎಂದು ಪರಿಗಣಿತನಾಗಿರುವ ಡಾ. ಜಾಫರ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಕರ್ನಾಟಕದಲ್ಲಿ ಪತ್ರಕರ್ತರು, ಸಂಸದ, ಪತ್ರಿಕೋದ್ಯಮಿಗಳನ್ನು ಹತ್ಯೆ ಮಾಡಲು ರೂಪಿಸಲಾಗಿದ್ದ ಸಂಚಿನ ರೂವಾರಿ ಇದೇ ಜಾಫರ್. ಈ 'ಆಪರೇಷನ್'ನ ರೂಪುರೇಷೆ ಸಿದ್ಧಪಡಿಸಿ, ತನಗೆ ಬೇಕಾದ ವ್ಯಕ್ತಿಗಳನ್ನು, ಹತ್ಯೆಯ ಸಂಚನ್ನು ಕಾರ್ಯಗತಗೊಳಿಸಲು ನೇಮಕ ಮಾಡಿದ್ದು ಡಾ. ಜಾಫರ್. ಉತ್ತಮ ಡಾಕ್ಟರ್ ಎನಿಸಿದ್ದ ಡಾ. ಜಾಫರ್ ತನ್ನ 'ಆಪರೇಷನ್'ನಲ್ಲಿ ಮಾತ್ರ ಸಫಲನಾಗಲಿಲ್ಲ.
ಡಾ. ಜಾಫರ್ ಮೊದಲು ನಿಷೇಧಿತ ಭಯೋತ್ಪಾದನಾ ಸಂಘಟನೆ ಸಿಮಿಯೊಡನೆ ಗುರುತಿಸಿಕೊಂಡಿದ್ದ. ಅಲ್ಲಿಯೇ ಆತನಿಗೆ ಜಾಕಿರ್ನೊಡನೆ ಗೆಳೆತನ ಬೆಳೆದದ್ದು. 2008ರಲ್ಲಿ ಹುಬ್ಬಳ್ಳಿಯ ಸಿಮಿ ಉಗ್ರರ ಮೇಲೆ ದಾಳಿ ನಡೆದಾಗ ಅನೇಕರನ್ನು ಬಂಧಿಸಲಾಗಿತ್ತು, ಆದರೆ ಅತ್ಯಂತ ಚಾಣಾಕ್ಷ ಬುದ್ಧಿಯ ಜಾಕಿರ್ ಮಾತ್ರ ತಪ್ಪಿಸಿಕೊಂಡಿದ್ದ. ಉನ್ನತ ಮೂಲಗಳ ಪ್ರಕಾರ, ದೇಶ ಬಿಟ್ಟು ತೊಲಗಿದ್ದ ಜಾಕಿರ್ ಈಗ ಮತ್ತೆ ಭಾರತದಲ್ಲಿ ಕಾಣಿಸಿಕೊಂಡಿದ್ದು, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಕಾರ್ಯೋನ್ಮುಖನಾಗಿದ್ದಾರೆ.
ಭಯೋತ್ಪಾದಕರಿಗೆ ವಿಶ್ವವಿದ್ಯಾಲಯದಂತಿರುವ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ತನ್ನ ಭಯೋತ್ಪಾದನಾ ಚಟುವಟಿಕೆಗಾಗಿ ಡಾ. ಜಾಫರ್ ಅಂಥವರನ್ನೇ ಹುಡುಕುತ್ತಿತ್ತು. ವೈದ್ಯ ಹೇಳಿದ್ದು ಹಾಲು ಅನ್ನು, ರೋಗಿ ಬಯಸಿದ್ದು ಹಾಲು ಅನ್ನ ಎಂಬಂತೆ, ಡಾ. ಜಾಕಿರ್ ವೈದ್ಯನಾಗಿದ್ದರೂ ಭಯೋತ್ಪಾದನಾ ರೋಗ ಬರಿಸಿಕೊಂಡು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಮತ್ತು ಯವ ಪಡೆಯನ್ನು ಉಗ್ರ ಚಟುವಟಿಕೆಗಳಿಗೆ ಹುರಿಗೊಳಿಸುವಲ್ಲಿ ನಿರತನಾದ.
ಈಗ ಬಂಧಿತರಾಗಿರುವ ಎಲ್ಲ 11 ಶಂಕಿತ ಉಗ್ರರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲು ಸೂಚಿಸಲಾಗಿದೆ. ಇವರಿಗೆ ಹಣ ಎಲ್ಲೆಲ್ಲಿಂದ ಸಂದಾಯವಾಗುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇವರ ಬ್ಯಾಂಕ್ ಖಾತೆಗಳು ಹುಬ್ಬಳ್ಳಿ, ಭಟ್ಕಳ ಮತ್ತು ಬಿಜಾಪುರದ ಕೆಲ ಶಾಖೆಗಳಲ್ಲಿ ಇವೆ ಎಂಬ ವಿವರಗಳನ್ನು ಪೊಲೀಸರು ಕಲೆಹಾಕಿದ್ದಾರೆ.












Click it and Unblock the Notifications