ದೇಹದಾನ ಮಾಡಿ ಆದರ್ಶ ಮೆರೆದ ದಂಪತಿಗಳು
ದೇಹದಾನ ಪತ್ರಕ್ಕೆ ಸಹಿ ಹಾಕಿರುವ ಡಾ.ಅವಿನಾಶ ದಂಪತಿಗಳಿಗೆ ರಾಂಪುರೆ ವೈದ್ಯಕೀಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರು ಪ್ರಶಂಸಾ ಪತ್ರವನ್ನು ನೀಡಿದ್ದಾರೆ. ದೇಹಾಂತ್ಯವಾದ ಮೇಲೆ ದೇಹವನ್ನು ಪ್ರಯೋಗಾಲಯಕ್ಕೆ ನೀಡುವವರು ತೀರ ಕಡಿಮೆ. ಮೃತರ ಶರೀರ ಪಂಚಭೂತಗಳಲ್ಲಿ ವಿಲೀನವಾಗಲಿ ಅಥವಾ ಮಣ್ಣಲ್ಲಿ ಮಣ್ಣಾಗಲಿ ಎಂದೇ ಆಶಿಸುವರು ಎಲ್ಲ. ಆದರೆ, ತಮ್ಮ ದೇಹವನ್ನೇ ಪ್ರಯೋಗಾಲಯಕ್ಕೆ ದಾನ ಮಾಡಿ ಈ ದಂಪತಿಗಳು ಆದರ್ಶ ಮೆರೆದಿದ್ದಾರೆ.
ಸವಿತಾ ಮೂಲತ ಧಾರವಾಡ ಜಿಲ್ಲೆಯ ನರಗುಂದ ತಾಲ್ಲೂಕಿಗೆ ಸೇರಿದವರಾಗಿದ್ದು, ತಮ್ಮ ಕಾಲೇಜು ದಿನಗಳಿಂದಲೇ ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಪ್ರತಿ ವರ್ಷ ಒಂದಿಷ್ಟು ಹಣವನ್ನು ಸಮಾಜಸೇವೆಗಾಗಿ ವಿನಿಯೋಗಿಸುತ್ತಿದ್ದಾರೆ. ಮೊದಮೊದಲು ದೇಹದಾನಕ್ಕೆ ವಿರೋಧಿಸಿದ್ದ ಡಾ.ಅವಿನಾಶ್ ನಂತರ ಪತ್ನಿಯ ನಿರ್ಧಾರಕ್ಕೆ ಹೆಮ್ಮೆ ಎನ್ನಿಸಿ ತಾವೂ ದೇಹ ದಾನಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ನಿರ್ಧಾರಕ್ಕೆ ಅವರ ಇಬ್ಬರು ಹೆಣ್ಣು ಮಕ್ಕಳು ಅಸಮಾಧಾನ ವ್ಯಕ್ತಪಡಿಸಿದ್ದರೂ ಆಮೇಲೆ ಅದನ್ನು ಗೌರವಿಸಿದ್ದಾರೆ.
ತಾವು ಓದಿದ ಎಂ.ಆರ್.ಮೆಡಿಕಲ್ ಕಾಲೇಜಿಗೆ ತಮ್ಮ ದೇಹ ದಾನ ಮಾಡಿದ ಡಾ.ಅವಿನಾಶ್ ಕೆಂಭಾವಿ ಒಂದು ರೀತಿಯ ಋಣ ತೀರಿಸಿದ್ದಾರೆ. ಅವರ ನಿರ್ಧಾರವನ್ನು ಹಾಗೂ ಪತಿಗೆ ಪ್ರೇರಣೆಯಾದ ಸವಿತಾ ಅವಿನಾಶ್ ಅವರನ್ನು ಹೆಮ್ಮಯಿಂದ ಪ್ರಶಂಸಿಸುತ್ತಿದ್ದಾರೆ ಅವರ ಗೆಳೆಯರು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಯಲು ಇತ್ತೀಚಿಗೆ ದೇಹದ ಕೊರತೆ ಇದ್ದು ಇಂತಹ ಅವಿಸ್ಮರಣೀಯ ನಿರ್ಧಾರ ತೆಗೆದುಕೊಂಡ ದಂಪತಿಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಶ್ಲಾಘಿಸಿದ್ದಾರೆ.
ತಮ್ಮ ನಂತರವೂ ಜನ ತಮ್ಮನ್ನು ನೆನೆಯುವಂತೆ ಮಾಡಿದ ವೈದ್ಯ ಅವಿನಾಶ್ ಹಾಗೂ ಸವಿತಾ ಅವರ ದೇಹದಾನ ನಿರ್ಧಾರ ವಿರಳ ಪ್ರಕರಣವಾಗಿದೆ. ಕಣ್ಣು, ಮೂತ್ರಪಿಂಡದಂತಹ ಮಹತ್ವದ ಅಂಗಗಳನ್ನು ಮತ್ತೆ ಮರುಜೋಡಣೆಮಾಡಿ ತೊಂದರೆ ಅನುಭವಿಸುತ್ತಿರುವವರಿಗೆ ಸಹಾಯವಾಗಲಿ ಎನ್ನುವ ದಂಪತಿಗಳ ಇಚ್ಛೆಗೆ ಹ್ಯಾಟ್ಸಾಫ್ ಹೇಳಲೇಬೇಕು. ಕನ್ನಡದ ಮೇರುನಟ ಶಿವರಾಜ್ ಕುಮಾರ್ ಮತ್ತು ಅವರ ಸಹೋದರರಾದ ರಾಘವೇಂದ್ರ ಮತ್ತು ಪುನೀತ್ ಅವರು ಕೂಡ ತಮ್ಮ ದೇಹಗಳನ್ನು ದಾನ ಮಾಡುವ ಸಂಕಲ್ಪ ಮಾಡಿದ್ದಾರೆ.