ಗಣಿ ಕಂಪನಿಯಿಂದ ಪಕ್ಷಗಳಿಗೆ ಕೋಟಿಗಟ್ಟಲೇ ದಾನ

ಸಂಸ್ಥೆಯ ಒಡೆಯ ಅನಿಲ್ ಅಗರವಾಲ್ ಅವರು ತಮ್ಮ ಸಂಸ್ಥೆಯ 2011-12ರ ವಾರ್ಷಿಕ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದಾರೆ. 2011-12ರ ಆರ್ಥಿಕ ವರ್ಷದಲ್ಲಿ 5.69 ಮಿಲಿಯನ್ ಡಾಲರ್(ಸುಮಾರು 28 ಕೋಟಿ ರು ಗಳನ್ನು ವಿವಿಧ ರಾಜಕೀಯ ಪಕ್ಷಗಳಿಗೆ ದಾನವಾಗಿ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2009-10ರಲ್ಲಿ ನಡೆದ ಚುನಾವಣೆಗಳಿಗೆ 2.66 ಮಿಲಿಯನ್ ಡಾಲರ್ ಹಣ ಖರ್ಚು ಮಾಡಲಾಗಿದೆ. 2003-04 ರಿಂದ ಇಲ್ಲಿವರೆಗೂ ಸುಮಾರು 8.29 ಮಿಲಿಯನ್ ಡಾಲರ್ ಹಣವನ್ನು ರಾಜಕೀಯ ಪಕ್ಷಗಳಿಗೆ ವೇದಾಂತ ಸಂಸ್ಥೆ ನೀಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಲಂಡನ್ ಷೇರುಪೇಟೆ ಪಟ್ಟಿಯಲ್ಲಿರುವ ವೇದಾಂತ ಸಂಸ್ಥೆ ತನ್ನ ವಾರ್ಷಿಕ ವರದಿಯನ್ನು ಪ್ರಕಟಿಸಿದ್ದು, 2006-07 ಹಾಗೂ 2008-09ರ ಅವಧಿಯಲ್ಲಿ ಮಾತ್ರ ದಾನ ಧರ್ಮ ಮಾಡುವ ಗೋಜಿಗೆ ಹೋಗಿಲ್ಲ ಎನ್ನಲಾಗಿದೆ.
ಭಾರತದಲ್ಲಿ ರಾಜಕೀಯ ಪಕ್ಷಗಳಿಗೆ ಡೊನೇಷನ್(ಪಾರ್ಟಿ ಫಂಡ್) ನೀಡುವುದು ಸಾಮಾನ್ಯ ಪ್ರಕ್ರಿಯೆ. ಇದರಿಂದ ಪ್ರಜಾಪ್ರಭುತ್ವ ಉಳಿಸಬಹುದು. ಚುನಾವಣಾ ಖರ್ಚು ವೆಚ್ಚ ತೂಗಿಸಬಹುದು ಎಂದು 2011-12 ರ ವಾರ್ಷಿಕ ವರದಿಯಲ್ಲಿ ಸಂಸ್ಥೆ ಹೇಳಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 14 ಬಿಲಿಯನ್ ಡಾಲರ್ ಆದಾಯ ಗಳಿಸಿರುವ ವೇದಾಂತ ಸಂಸ್ಥೆ ಸ್ಟರ್ಲೈಟ್ ಇಂಡಸ್ಟ್ರೀಸ್, ಸೆಸಾ ಗೋವಾ, ಕ್ರೈನ್ ಇಂಡಿಯಾ ಹಾಗೂ ಹಿಂದೂಸ್ತಾನ್ ಜಿಂಕ್ ಎಂಬ ಸಂಸ್ಥೆಗಳನ್ನು ಹೊಂದಿದೆ.
ರಾಜಕೀಯ ಪಕ್ಷಗಳಿಗೆ ಫಂಡ್ ನೀಡುವುದನ್ನು ತಡೆಹಿಡಿಯುವಂತೆ ಯುಕೆ ಮೂಲದ ಷೇರುಪೇಟೆ ಸಲಹೆಗಾರ ಸಂಸ್ಥೆ ಪಿರ್ಕ್ ಸಮೂಹ ಇತ್ತೀಚೆಗೆ ವೇದಾಂತಗೆ ಸಲಹೆ ನೀಡಿತ್ತು. ಆ.28 ರಂದು ನಡೆಯಲಿರುವ ಪ್ರಧಾನ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚೆ ಹಾಗೂ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ.
ವೇದಾಂತ ಸಂಸ್ಥೆಯ ಹೇಳಿಕೆಯಿಂದ ಭಾರತದ ಷೇರುಪೇಟೆಯಲ್ಲಿ ಸೋಮವಾರ (ಆ.27) ಮೈನಿಂಗ್ ಹಾಗೂ ಸ್ಟೀಲ್ ಕಂಪನಿಗಳ ಷೇರುಗಳ ಏರುಪೇರು ಆಗುವ ಮುನ್ಸೂಚನೆಯಿದೆ. ಆ.28ರ ತನಕ ಯಾವುದಕ್ಕೂ ಸೂಕ್ಷ್ಮವಾಗಿ ವ್ಯವಹಾರ ನಡೆಸುವಂತೆ ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ರಾಯ್ ಪುರನಲ್ಲಿ ಬಡವರಿಗಾಗಿ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಸಲು ಅನಿಲ್ ಅಗರವಾಲ್ ಮಾಲೀಕತ್ವದ ಗಣಿ ಸಂಸ್ಥೆ ವೇದಾಂತ ಮುಂದಾಗಿತ್ತು. ಗಣಿ ಕಂಪೆನಿ ವೇದಾಂತ ಚತ್ತೀಸ್ ಘಡ್ ನ ರಾಯ್ ಪುರದಲ್ಲಿ 350 ಕೋಟಿ ರುಪಾಯಿಗಳ ವೆಚ್ಚದಲ್ಲಿ 360 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆ ಯನ್ನು ನಿರ್ಮಿಸಲಿದೆ.
ಲಂಡನ್ ಮೂಲದ ಅನಿವಾಸಿ ಭಾರತೀಯ 'ಮೆಟಲ್ ಕಿಂಗ್' ಅನಿಲ್ ಅಗರ್ ವಾಲ್ ಅವರು 3.5 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದು, ವೇದಾಂತ ಸಂಸ್ಥೆ ಭಾರತ ಮಾತ್ರವಲ್ಲದೆ ಆಸ್ಟ್ರೇಲಿಯಾ, ಜಾಂಬಿಯಾದಲ್ಲೂ ಕಚೇರಿ ಹೊಂದಿದೆ. 2011ರಲ್ಲಿ ಟಾಪ್ 15 ಅತಿ ಶ್ರೀಮಂತ ಭಾರತೀಯರಲ್ಲಿ ಅನಿಲ್ ಅಗರ್ ವಾಲ್ ಕೂಡಾ ಕಾಣಿಸಿಕೊಂಡಿದ್ದರು. ಈಗ ಅನಿಲ್ ಸಂಸ್ಥೆ ವಾರ್ಷಿಕ ವರದಿ ಬಹುಚರ್ಚಿತ ವಿಷಯವಾಗಿ ಪರಿಣಮಿಸಿದೆ.












Click it and Unblock the Notifications