ಬರಸ್ಥಿತಿ ನಿರ್ವಹಣೆಗೆ ಸರಕಾರ ಸನ್ನದ್ಧ : ಶೆಟ್ಟರ್

ರಾಜ್ಯ ಬರ ಪರಿಹಾರಕ್ಕಾಗಿ ಈಗಾಗಲೇ ಕೇಂದ್ರಕ್ಕೆ 11,400 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 700 ಕೋಟಿ ರೂ.ಗಳ ಅಲ್ಪಾವಧಿ ಯೋಜನೆಗಾಗಿ 400 ಕೋಟಿ ರೂ. ದೀರ್ಘಾವಧಿ ಯೋಜನೆಗಳಿಗಾಗಿ ನೀಡುವಂತೆ ಮನವಿ ಮಾಡಲಾಗಿದೆ. ಇದಲ್ಲದೆ ರಾಜ್ಯದ 18 ಲಕ್ಷದ ರೈತರು ಕೃಷಿಗಾಗಿ ಪಡೆದ 19 ಸಾವಿರ ಕೋಟಿ ರೂ. ಸಾಲವನ್ನು ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆದಿದ್ದು ಈ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆಯೆಂದರು.
ಕೇಂದ್ರ ಬರ ಅಧ್ಯಯನ ತಂಡ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದು ಈ ತಂಡ ನಾಳೆ ಬೆಂಗಳೂರಿಗೆ ಆಗಮಿಸಲಿದೆ. ಈ ತಂಡದೊಂದಿಗೆ ಶನಿವಾರ ತಾವು ಸಮಾಲೋಚನೆ ಹಾಗೂ ಚರ್ಚೆ ನಡೆಸಿ ರಾಜ್ಯದ ಬೇಡಿಕೆಯನ್ನು ಮನನ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದರು.
ತಾವು ಈಗಾಗಲೇ ಧಾರವಾಡ, ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಹಾಗೂ ಗದಗ ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಸ್ಥಿತಿ ಪರಿಶೀಲನೆ ಮಾಡಿದ್ದು ಬರುವ ವಾರ ಹೈದರಾಬಾದ್ ಹಾಗೂ ಮೈಸೂರು ಕರ್ನಾಟಕದ ಹಲವು ಜಿಲ್ಲೆಗಳಿಗೆ ಭೇಟಿ ನೀಡಿ ಬರ ಸ್ಥಿತಿಯನ್ನು ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಬರಸ್ಥಿತಿ ಕುರಿತು ತಾವು ಪ್ರತಿದಿನ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ಬರ ಪ್ರದೇಶಗಳಲ್ಲಿ ಗೋಶಾಲೆ, ಮೇವು ಪೂರೈಕೆ, ಕುಡಿಯುವ ನೀರು ಮತ್ತು ಉದ್ಯೋಗಾವಕಾಶ ಕುರಿತಂತೆ ತ್ವರಿತವಾಗಿ ಸ್ಪಂದಿಸಲು ನಿರ್ದೇಶನ ನೀಡಿರುವುದಾಗಿ ತಿಳಿಸಿದರು.












Click it and Unblock the Notifications