ಅತ್ಲಾಗೆ ಗಂಡನೂ ಆಗ್ಲಿಲ್ಲ, ಇತ್ಲಾಗೆ ಮತ್ತೊಂದು ಆಗ್ಲಿಲ್ಲ

ಆದರೆ, ಪವಿತ್ರ ಪ್ರೇಮ ಸಂಬಂಧದಲ್ಲಿ ನಂಬಿಕೆ ದ್ರೋಹ ಬಗೆದವನಿಗೆ ಎಂಥಾ ಶಿಕ್ಷೆ ಕೊಟ್ಟರೂ ಸಾಲದು ಎಂದು ಕೋರ್ಟ್ ಆವರಣದಲ್ಲಿ ಮಾತುಗಳು ಕೇಳಿ ಬರುತ್ತಿತ್ತು.
ಚಂದ್ರಕಲಾ ಎಂಬುವರನ್ನು ಮದುವೆಯಾಗುತ್ತೇನೆಂದು ನಂಬಿಸಿ ದೈಹಿಕ ಸಂಪರ್ಕ ಇಟ್ಟುಕೊಂಡ ಆರೋಪಿ ಚಂದ್ರಶೇಖರ್ ಗೆ ಪ್ರಧಾನ ಜಿಲ್ಲಾ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ. ಚಂದ್ರ ಅಂಡ್ ಚಂದ್ರು ಪ್ರೇಮ್ ಕಹಾನಿ ಇಲ್ಲಿದೆ...
ಪ್ರೇಮಿ ಕಾಮಿಯಾಗಿ ಕೈಕೊಟ್ಟ ಕತೆ: ಚಿಕ್ಕಮಗಳೂರು ನಗರ ನಿವಾಸಿ ಚಂದ್ರಕಲಾಳನ್ನು ಎಚ್ ಜಿ ಚಂದ್ರಶೇಖರ್ ಸುಮಾರು 7 ವರ್ಷಗಳಿಂದ ತುಂಬಾ ನಿಷ್ಠೆಯಿಂದ ಪ್ರೀತಿಸುತ್ತಿದ್ದ. ಚಂದ್ರಕಲಾಳಿಗೂ ಚಂದ್ರು ಬಗ್ಗೆ ಸಾಫ್ಟ್ ಕಾರ್ನರ್ ಇತ್ತು. ನಗರದ ರತ್ನಗಿರಿ ಬೋರೆ, ಅಜಾದ್ ಪಾರ್ಕ್, ಟೌನ್ ಕ್ಯಾಂಟೀನ್ ಮುಂತಾದ ಕಡೆ ಈ ಜೋಡಿ ಓಡಾಡುತ್ತಿದ್ದನ್ನು ಕಂಡ ಕೆಲವರು ಚಂದ್ರಕಲಾ ಮನೆಯವರಿಗೆ ಕಿವಿಯೂದಿದ್ದಾರೆ.
ಹಿಂದು ಮುಂದು ವಿಚಾರಿಸದೆ ಚಂದ್ರಕಲಾ ಮನೆಯವರು ಆಕೆಗೆ ನಿಂಗೇಶ್ ಎಂಬ ಯುವಕನೊಂದಿಗೆ ಮದುವೆ ಮಾಡಿಬಿಟ್ಟರು. ಈ ದಂಪತಿಗೆ ಒಂದು ಗಂಡು ಸಂತಾನ ಕೂಡಾ ಆಗಿತ್ತು. ಆದರೆ, ಚಂದ್ರಕಲಾಳಿಗೆ ಹಳೆ ಪ್ರೇಮಿ ಕಾಟ ತಪ್ಪಲಿಲ್ಲ.
ಒಂದು ಮುಸ್ಸಂಜೆ ವೇಳೆಯಲ್ಲಿ ಚಂದ್ರಕಲಾಳನ್ನು ಚಂದ್ರು ಭೇಟಿ ಮಾಡಿ 'ನಿನ್ನ ಗಂಡನನ್ನು ಬಿಟ್ಟು ನನ್ನ ಜೊತೆ ಸಂಸಾರ ಮಾಡು ಬಾ, ನಾನು ಮದುವೆಯಾಗಿ ಸಾಕುತ್ತೇನೆ ಎಂದು ಹೇಳಿದ್ದಾನೆ. ಅದು ನಿಂಗೇಶ್ ಗೆ ಗೊತ್ತಾಗಿದೆ.
ತಕ್ಷಣವೇ ಚಂದ್ರಕಲಾಳನ್ನು ತವರು ಮನೆಗೆ ಅಟ್ಟಿದ್ದಾನೆ. ಗಂಡನನ್ನು ಬಿಟ್ಟು ತನ್ನ ತಾಯಿ ಮನೆಗೆ ಬಂದ ಚಂದ್ರಕಲಾಳನ್ನು ಮತ್ತೆ ಮತ್ತೆ ಭೇಟಿ ಮಾಡಿದ ಚಂದ್ರು ತನ್ನ ಹಳೆ ಪ್ರೇಮ ಮತ್ತೊಮ್ಮೆ ಚಿಗುರೊಡೆಯುವಂತೆ ಮಾಡುವಲ್ಲಿ ಸಫಲನಾಗಿದ್ದಾನೆ.
ಚಂದ್ರುವನ್ನು ನಂಬಿ ಮತ್ತೊಮ್ಮೆ ಆತನಿಗೆ ಮನಸ್ಸು ದೇಹ ಕೊಟ್ಟಿದ್ದಾಳೆ. ಪ್ರೇಮಪಾಶಕ್ಕೆ ಬಿದ್ದ ಚಂದ್ರಕಲಾಳನ್ನು ಮನೋಸೋಇಚ್ಛೆ ಅನುಭವಿಸಿದ ಚಂದ್ರು ಅಪ್ಪಟ ಪ್ರೇಮಿಯಂತೆ ಪೋಸ್ ನೀಡಿದ್ದಾನೆ. ಆದರೆ,ತಿಂಗಳುಗಳು ಕಳೆದು ಚಂದ್ರಕಲಾ ಗರ್ಭಿಣಿ ಎಂಬ ವಿಷಯ ಹೊರ ಬಿದ್ದಿದೆ.
ವಿಷಯ ತಿಳಿಯುತ್ತಿದ್ದಂತೆ ಗಾಬರಿಗೊಂಡ ಚಂದ್ರು ಊರು ಬಿಟ್ಟು ಓಡಿ ಹೋಗಿದ್ದಾನೆ. ಕಾಯುವ ತನಕ ಕಾದ ಚಂದ್ರಕಲಾ ಇತ್ತ ಗಂಡನ ಸಹಾಯವೂ ಇಲ್ಲದೆ, ಪ್ರೇಮಿಯ ಸಂಗವೂ ಇಲ್ಲದೆ ಪರಿತಪಿಸಿದ್ದಾಳೆ. ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ.
ನಗರ ಪೋಲಿಸರು ಭಾ.ದ.ಸಂ ಕಲಂ 376ರ ಅಪರಾಧಕ್ಕೆ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಎ. ಪಾಟೀಲ್ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಚಂದ್ರಶೇಖರನಿಗೆ ಭಾ.ದಂ.ಸಂ. ಕಲಂ 417 ರ ಆರೋಪಕ್ಕೆ ಒಂದು ವರ್ಷ ಸಜೆ ಹಾಗೂ 2,00,000 ರು. ದಂಡ ವಿಧಿಸಿದ್ದಾರೆ.
ಒಟ್ಟು ದಂಡದ ಮೊತ್ತದಲ್ಲಿ 1,50,000 ರೂ. ಹಣವನ್ನು ಫಿರ್ಯಾದಿ ಚಂದ್ರಕಲಾರವರ ಮಗ ದೀಕ್ಷಿತ್ಗೆ ಹಾಗೂ 25,000 ರೂ. ಹಣವನ್ನು ಫಿರ್ಯಾದಿಗೆ ಪಾವತಿಸುವಂತೆ ಮತ್ತು ಉಳಿದ 25,000 ರೂ. ದಂಡದ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಬೇಕೆಂದು ತೀರ್ಪು ನೀಡಿದ್ದಾರೆ.












Click it and Unblock the Notifications