ಜನ್ಮಾಷ್ಟಮಿಗೆ ಇಸ್ಕಾನ್ನಿಂದ ದಾಖಲೆ ಲಡ್ಡು ವಿತರಣೆ
ಬಾಲಕೃಷ್ಣನ 5240ನೇ ಜನ್ಮದ ನೆನಪಿನಲ್ಲಿ 524 ಕಿ.ಗ್ರಾಂ. ತೂಕದ ಲಡ್ಡುಗಳು ಭಕ್ತಾದಿಗಳಿಗೆ ಸಮರ್ಪಣೆಯಾಗಲಿವೆ. ಬೆಳಗಿನ ಜಾವ 10 ಗಂಟೆಯಿಂದಲೇ ಲಡ್ಡು ಪ್ರಸಾದ ವಿತರಣೆ ಕಾರ್ಯ ಆರಂಭವಾಗಿದೆ. ಬೆಂಗಳೂರಿನಲ್ಲಿ ನಡೆದ ಅತೀ ದೊಡ್ಡ ಲಡ್ಡು ವಿತರಣಾ ಸಮಾರಂಭ ಎಂದು ಇದನ್ನು ಬಿಂಬಿಸಲಾಗಿದ್ದು, ಇಡೀ ದಿನ ಪ್ರಸಾದ ವಿತರಣೆಯಾಗಲಿದೆ.
ಬೆಂಗಳೂರಿನಲ್ಲಿರುವ ಸಾವಿರಾರು ಕೃಷ್ಣಭಕ್ತರು ಈಗಾಗಲೆ ಮಾರತ್ಹಳ್ಳಿಯತ್ತ ಕಾಲು ಹಾಕಿದ್ದಾರೆ. ಈ ಜನ್ಮಾಷ್ಟಮಿಯ ಸಮಾರಂಭಕ್ಕೆ ರೆಡ್ ಎಫ್ಎಮ್ 93.5 ರೇಡಿಯೋ ಮೀಡಿಯಾ ಸಂಗಾತಿಯಾಗಿದ್ದು, ಮಕ್ಕಳಿಗಾಗಿ ಮತ್ತು ದೊಡ್ಡವರಿಗಾಗಿ ಆ.10 ಮತ್ತು 11ರಂದು ಅನೇಕ ಸ್ಪರ್ಧೆಗಳನ್ನು ಆಯೋಜಿಸಲಿದೆ. ಆಯೋಜಕರ ಪ್ರಕಾರ, ಎರಡು ದಿನಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಕೃಷ್ಣನ ಜನ್ಮದಿನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಎರಡು ದಿನ ನಡೆಯಲಿರುವ ಮತ್ತಿತರ ಕಾರ್ಯಕ್ರಮಗಳು
* ಇಸ್ಕಾನ್ನ ವಿಶ್ವಖ್ಯಾತಿಯ ಸಂಗೀತಗಾರರಿಂದ ಭಜನ ಮತ್ತು ಕೀರ್ತನೆ
* ಕೃಷ್ಣದ ಬಾಲಲೀಲೆಯನ್ನು ಆಧರಿಸಿ ವರ್ಣಚಿತ್ರಕಲೆ ಮತ್ತು ಟಾಟೂ ಸ್ಪರ್ಧೆ
* ಭಗವಾನ್ ಶ್ರೀಕೃಷ್ಣನಿಗೆ 108 ವಿವಿಧ ಬಗೆಯ ಸಾಂಪ್ರದಾಯಿಕ ಭೋಜ್ಯಗಳ ಸಮರ್ಪಣೆ
* ಗೀತಾ ವಾಚನ, ಮಕ್ಕಳಿಗಾಗಿ ರಸಪ್ರಶ್ನೆ ಮತ್ತಿತರ ಸ್ಪರ್ಧೆಗಳು
ನಗರದ ಎಲ್ಲೆಡೆಯಲ್ಲಿಯೂ ಶ್ರೀಕೃಷ್ಣನ ಜನ್ಮಾಷ್ಮಮಿಯ ಸಂಭ್ರಮ ಮನೆಮಾಡಿದೆ. ಅನೇಕ ದೇವಸ್ಥಾನಗಳಲ್ಲಿ ಕಳೆದ ರಾತ್ರಿ 12 ಗಂಟೆಗೆ ಕೃಷ್ಣನನ್ನು ತೊಟ್ಟಿಲಲ್ಲಿ ತೂಗಿ ಭಗವಂತನ ಗುಣಗಾನ ಮಾಡಲಾಯಿತು. ವಿವಿಧ ಬಗೆಯ ಪ್ರಸಾದಗಳ ಸಮರ್ಪಣೆಯ ಜೊತೆಗೆ ಚಿಣ್ಣರಿಗಾಗಿ ರಾಧಾಕೃಷ್ಣ ವೇಷ ಧರಿಸುವ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಪುಟ್ಟಪುಟಾಣಿ ಮಕ್ಕಳನ್ನು ವೇಷಧರಿಸಿದ ಬಾಲಕೃಷ್ಣನ ರೂಪದಲ್ಲಿ ನೋಡುವುದೇ ಒಂದು ಬಗೆಯ ಆನಂದ. ಶ್ರೀಕೃಷ್ಣ ಪುಟಾಣಿಯಿದ್ದಾಗ ಹೀಗೇ ಇದ್ದನೇನೋ ಎಂದು ಹಿರಿಯರೆಲ್ಲ ಸಂಭ್ರಮಿಸುತ್ತಾರೆ.