ಡಯಾಬಿಟಿಸ್ ಗೆ ಹೆದರಿ ಇಂಜಿನಿಯರ್ ಸೂಸೈಡ್
Diabetics is not disease it is disorder ಎಂದು ಎಷ್ಟೋ ಬಾರಿ ಡಾಕ್ಟರ್ ಗಳು ಹೇಳುತ್ತಿರುತ್ತಾರೆ. ಆದರೆ, 29 ವರ್ಷದ ಮಲ್ಲಿಕಾರ್ಜುನ ಅವರಿಗೆ ಡಯಾಬಿಟಿಸ್ ಭೂತವಾಗಿ ಕಾಡಿದೆ. ಮಾನಸಿಕ ಖಿನ್ನತೆ ಅನುಭವಿಸಿದ ಮಲ್ಲಿಕಾರ್ಜುನ್, ಜೆಪಿ ನಗರ 6ನೇ ಹಂತದ ರಾಜೀವ್ ಗಾಂಧಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.
ಮಲ್ಲಿಕಾರ್ಜುನ್ ಆತ್ಮಹತ್ಯೆ ಮಾಡಿಕೊಂಡ ವೇಳೆಯಲ್ಲಿ ಅವರ ಪತ್ನಿ ಕೆವಿ ಮಹಿಮಾ ಸ್ನಾನಗೃಹದಲ್ಲಿದ್ದರು ಎನ್ನಲಾಗಿದೆ. ಕಳೆದ ವಾರವಷ್ಟೇ ಡಯಾಬಿಟಿಸ್ ಆಗಿದೆ ಎಂದು ರಿಪೋರ್ಟ್ ಹಿಡಿದುಕೊಂಡು ಬಂದಿದ್ದ ಮಲ್ಲಿಕಾರ್ಜುನ್ ಗೆ ಪತ್ನಿ ಮಹಿಮಾ ಸಾಂತ್ವನ ಹೇಳಿದ್ದರು.
ಆದರೆ, ಒಂದು ವಾರದಿಂದ ಮಲ್ಲಿಕಾರ್ಜುನ್ ಸರಿಯಾಗಿ ಕಚೇರಿಗೆ ಹೋಗಿರಲಿಲ್ಲ. ಹೆಚ್ಚು ಕಾಲ ಮನೆಯಲ್ಲೇ ಕಳೆಯುತ್ತಿದ್ದ ಮಲ್ಲಿಕಾರ್ಜುನ ಆಗಾಗ ಡಯಾಬಿಟಿಸ್ ರಿಪೋರ್ಟ್ ನೋಡುತ್ತಿದ್ದರು.
ಸೋಮವಾರ ಬೆಳಗ್ಗೆ 10.30ರ ಸುಮಾರಿಗೆ ಪತ್ನಿ ಮಹಿಮಾ ಸ್ನಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಬೆಡ್ ರೂಮ್ ಗೆ ತೆರಳಿ ಫ್ಯಾನಿಗೆ ನೇಣು ಹಾಕಿಕೊಂಡು ಮಲ್ಲಿಕಾರ್ಜುನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲಿಕಾರ್ಜುನ್ ಯಾವುದೇ ಸೂಸೈಡ್ ನೋಟ್ ಬರೆದಿಲ್ಲ ಎಂದು ಜೆಪಿ ನಗರ ಪೊಲೀಸರು ಹೇಳಿದ್ದಾರೆ.
ಡಯಾಬಿಟಿಸ್ ಬಗ್ಗೆ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಎಚ್ಎಎಲ್ ನ ಸಹೋದ್ಯೋಗಿಗಳಿಗೂ ತಿಳಿದಿರಲಿಲ್ಲ. ಯಾರೂ ಕೂಡಾ ಡಯಾಬಿಟಿಸ್ ಇರುವ ಬಗ್ಗೆ ಹೀಯಾಳಿಸಿರಲಿಲ್ಲ. ಅಷ್ಟಾದರೂ ಮಲ್ಲಿಕಾರ್ಜುನ್ ಡಯಾಬಿಟಿಸ್ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಏಕೆ ಎಂಬ ಪ್ರಶ್ನೆ ಅವರ ಪತ್ನಿ ಮಹಿಮಾ ಸೇರಿದಂತೆ ಪೊಲೀಸರನ್ನು ಕಾಡುತ್ತಿದೆ. ಒಟ್ಟಾರೆ ಆತ್ಮಹತ್ಯಾ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಬ್ಬರು ದುರಂತ ಸಾವನ್ನಪ್ಪಿದ್ದಾರೆ.
ಹಾರ್ಡ್ ವೇರ್ ಟೆಕ್ಕಿ ಸಾವು: ಜೆಪಿ ನಗರ 1 ನೇ ಹಂತದ ನಿವಾಸಿ 23 ವರ್ಷದ ಕಂಪ್ಯೂಟರ್ ಹಾರ್ಡ್ ವೇರ್ ತಂತ್ರಜ್ಞ ಕೆ ಶ್ರೀಧರ ಹೊಳ್ಳ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಮಣ್ಯ ಮೂಲದ ಶ್ರೀಧರ್ ಕಳೆದ ನವೆಂಬರ್ ನಲ್ಲಿ ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು.
ಊರಿಂದ ಆತನ ತಾಯಿ ಹಲವು ಬಾರಿ ಫೋನ್ ಕರೆ ಮಾಡಿದ್ದಾರೆ. ಆದರೆ, ಶ್ರೀಧರ್ ಸ್ವೀಕರಿಸುವುದಿಲ್ಲ. ಗಾಬರಿಗೊಂಡು ಶ್ರೀಧರ್ ಅಕ್ಕ ಮಧುರ ಹೊಳ್ಳಗೆ ಕರೆ ಮಾಡುತ್ತಾರೆ.
ಮತ್ತಿಕೆರೆಯ ಪಿಜಿಯೊಂದರಲ್ಲಿ ವಾಸಿಸುವ ಮಧುರಾ, ಶ್ರೀಧರ್ ಇದ್ದ ರೂಮ್ ಗೆ ಬಂದು ಸ್ಥಳೀಯರ ಸಹಕಾರದಿಂದ ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ. ಶ್ರೀಧರ್ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿರುವುದು ಕಂಡು ಬಂದಿದೆ. 'ನನ್ನ ಸಾವಿಗೆ ನಾನೇ ಕಾರಣ' ಎಂದು ಶ್ರೀಧರ್ ಡೆತ್ ನೋಟ್ ಬರೆದಿಟ್ಟಿದಾರೆ. ಜೆಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.