ಆಂಧ್ರ ಎಸಿಬಿಯಿಂದ ಸೋಮಶೇಖರ ರೆಡ್ಡಿ ಬಂಧನ

ಸೋಮಶೇಖರ ರೆಡ್ಡಿ ಅವರನ್ನು ಉಸ್ಮಾನಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ನಂತರ ಕೋರ್ಟಿನಲ್ಲಿ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಎಸಿಬಿ ಮುಖ್ಯಸ್ಥ ಪ್ರಸಾದ್ ರಾವ್ ಹೇಳಿದ್ದಾರೆ.
'ನನಗೆ ನೋಟಿಸ್ ನೀಡಿರುವ ಪ್ರಕಾರ ವಿಚಾರಣೆಗೆ ಹಾಜರಾಗಿದ್ದೇನೆ. ತಾನು ಯಾವುದೇ ಅವ್ಯವಹಾರದಲ್ಲಿ ಭಾಗಿಯಾಗಿಲ್ಲ. ವಿಷಯವನ್ನು ತಾನು ವಿಚಾರಣಾ ತಂಡದ ಮುಂದೆ ಸ್ಪಷ್ಟ ಪಡಿಸುತ್ತೇನೆ ರಾಜಕೀಯವಾಗಿ ಬೆಳೆಯುತ್ತಿರುವ ತಮ್ಮ ವಿರುದ್ಧ ಸೇಡಿನ ರಾಜಕಾರಣದ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಕುಮ್ಮಕ್ಕಿನಿಂದ ಇಂತಹ ವಿಚಾರಣೆಗಳನ್ನು ತಮ್ಮ ವಿರುದ್ಧ ನಡೆಸಲಾಗುತ್ತಿದೆ' ಎಂದು ಸೋಮಶೇಖರ ರೆಡ್ಡಿ ವಿಚಾರಣೆಗೂ ಮುನ್ನ ಹೇಳಿದ್ದರು.
ಬೇಲ್ ಗಾಗಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಡ್ಜುಗಳಾದ ಪಟ್ಟಾಭಿ, ಚಲಪತಿರಾವ್, ಪ್ರಭಾಕರ ರಾವ್, ಲಕ್ಷ್ಮಿನರಸಿಂಹ ರಾವ್, ಪಟ್ಟಾಭಿ ಪುತ್ರ ರವಿಚಂದ್ರ, ರೌಡಿಶೀಟರ್ ಯಾದಗಿರಿ ರಾವ್ ಅವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಪ್ರಕರಣದ ಆರೋಪಿಗಳಾದ ಕರ್ನಾಟಕ ಶಾಸಕರಾದ ಸೋಮಶೇಖರ ರೆಡ್ಡಿ, ಸುರೇಶ್ ಬಾಬು ಅವರ ವಿಚಾರಣೆಯನ್ನು ಆಂಧ್ರ ಎಸಿಬಿ ತಂಡ ಮುಗಿಸಿದೆ.
ಈ ಪೈಕಿ ಬಹುತೇಕ ಎಲ್ಲರೂ ಚೆರ್ಲಪಲ್ಲಿ ಜೈಲಿನಲ್ಲಿದ್ದಾರೆ. ಈಗ ಆಂಧ್ರಪ್ರದೇಶ ಸಚಿವ ಎರಸು ಪ್ರತಾಪ್ ರೆಡ್ಡಿ ಹಾಗೂ ಕರ್ನಾಟಕದ ಶಾಸಕ ಕೂಡ್ಲಿಗಿ ನಾಗೇಂದ್ರ ಅವರತ್ತ ACB ಕಣ್ಣು ಹಾಯಿಸಿದೆ.
ರೆಡ್ಡಿಗೆ ಮುಳುವಾಗಿದ್ದು ಯಾದಗಿರಿ ಹೇಳಿಕೆ: ಲಂಚ ಪಡೆದು ಜಾಮೀನು ನೀಡಿದ ಆರೋಪ ಎದುರಿಸುತ್ತಿರುವ ಜಡ್ಜ್ ಪಟ್ಟಾಭಿರಾಮರಾವ್ ಜೊತೆ ಡೀಲ್ ಕುದುರಿಸಿದ್ದ ಯಾದಗಿರಿ ಸಿಕ್ಕಿ ಬಿದ್ದ, ತಪ್ಪೊಪ್ಪಿಗೆ ನೀಡಿದ್ದು ಸೋಮಶೇಖರ ರೆಡ್ಡಿಗೆ ಮುಳುವಾಗಿದೆ. ಜೊತೆಗೆ ಗಾಲಿ ರೆಡ್ಡಿ ಅವರ ಮತ್ತೊಬ್ಬ ಸಂಬಂಧಿ ದಶರಥ ರೆಡ್ಡಿ ಮತ್ತು ಕಂಪ್ಲಿ ಶಾಸಕ ಟಿಎಚ್ ಸುರೇಶ್ ಬಾಬು ತನಗೆ 20 ಕೋಟಿ ರುಪಾಯಿ ಹಣ ನೀಡಿದರು ಎಂದು ಯಾದಗಿರಿ ರಾವ್ ಹೇಳಿಕೆ ನೀಡಿದ್ದ.
ಎಲ್ಲಾ ಆರೋಪಿಗಳ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(1)(ಸಿ) ಹಾಗೂ 13(1)(ಡಿ)(ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ), ಐಪಿಸಿ ಸೆಕ್ಷನ್ 120ಬಿ(ಒಳಸಂಚು, ಪಿತೂರಿ), 409(ವಿಶ್ವಾಸ ದ್ರೋಹ), 420(ವಂಚನೆ) ಹಾಗೂ 417(ವಂಚನೆಗೆ ಪ್ರೋತ್ಸಾಹ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.












Click it and Unblock the Notifications