ಮಂಗಳೂರು ದಾಳಿ ಪ್ರಕರಣ: ಪೇಜಾವರಶ್ರೀ ಏನನ್ನುತ್ತಾರೆ?
ನಿರ್ದಾಕ್ಷಿಣ್ಯವಾಗಿ ಖಂಡಿಸಿದ ಪೇಜಾವರಶ್ರೀ: ಜುಲೈ 28ರಂದು ಪಡೀಲು ಸಮೀಪದ ಹೋಂ ಸ್ಟೇನಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅಲ್ಲಿನ ಯುವಕ-ಯುವತಿಯರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿದ್ದಾರೆ. 'ಕಾನೂನನ್ನು ಕೈಗೆತ್ತಿಕೊಂಡು ಯುವ ಮಹಿಳೆಯರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತೇನೆ' ಎಂದು ಪೇಜಾವರ ಮಠ ವತಿಯಿಂದ ಗುರುವಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಳಿಯ ಮತ್ತೊಂದು ಮುಖವೂ ಬಯಲಾಗಲಿ: ಆದರೆ ದಾಳಿಯ ಮತ್ತೊಂದು ಮುಖವನ್ನೂ ನಾವು ಪರಾಮರ್ಶಿಸಬೇಕಾಗುತ್ತದೆ. ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳ ಪ್ರಕಾರ 'ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇನಲ್ಲಿ ಜಮಾಯಿಸಿದ್ದ ಯುವಕ/ಯುವತಿಯರು ಮದ್ಯ ಸೇವನೆಯಲ್ಲಿ ತೊಡಗಿದ್ದರು. ಅಶ್ಲೀಲವಾಗಿ ನರ್ತಿಸುತ್ತಿದ್ದರು' ಎಂದು ಸ್ಥಳೀಯ ಪಡೀಲು ನಿವಾಸಿಗಳು ಹೇಳಿದ್ದಾರೆ. ಮಾಧ್ಯಮಗಳೂ ಇದನ್ನು ವರದಿ ಮಾಡಿವೆ. ಆದ್ದರಿಂದ ಈ ಬಗ್ಗೆಯೂ ತನಿಖೆ ನಡೆಸಿ, ಸತ್ಯವನ್ನು ಕಂಡುಕೊಳ್ಳುವುದು ಅಗತ್ಯವಲ್ಲವೇ? ಎಂದು ಪೇಜಾವರಶ್ರೀ ಪ್ರಶ್ನಿಸಿದ್ದಾರೆ.
ಇಂತಹ ಅನೈತಿಕ ಚಟುವಟಿಕೆ ಮತ್ತು ಕಾನೂನುಬಾಹಿರ ಕೃತ್ಯಗಳ ಬಗ್ಗೆ ಪ್ರತಿಭಟಿಸುವುದು ನಾಗರಿಕರ ಕರ್ತವ್ಯ ಅಲ್ವೇ? ಕಾನೂನನ್ನು ಕೈಗೆತ್ತಿಕೊಳ್ಳುವುದು ತಪ್ಪು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಪೊಲೀಸರು ನಿಷ್ಕ್ರಿಯರಾಗಿರುವಾಗ ಹೋಂ ಸ್ಟೇಗಳಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ಹತ್ತಿಕ್ಕುವುದು ಹೇಗೆ? ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೂ ಒಂದು, ಹೀಗೆ ಅಮಾನುಷವಾಗಿ ಹಲ್ಲೆ ಮಾಡುವ ಬದಲು ಎಲ್ಲರೂ ಒಟ್ಟಾಗಿ ಶಾಂತಿಯುತ ಪ್ರತಿಭಟನೆ ನಡೆಸಿದ್ದರೆ ಹೆಚ್ಚು ಔಚಿತ್ಯಪೂರ್ಣವಾಗಿತ್ತು ಎನಿಸುತ್ತದೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು.
ಕೇವಲ ಹಲ್ಲೆ ಮಾಡಿದ ಯುವಕರನ್ನು ಉಗ್ರವಾಗಿ ಖಂಡಿಸಿದರೆ ಬರುವುದಿಲ್ಲ. ಜನ ಅದೇ ಧಾಟಿಯಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನೂ ಅತ್ಯುಗ್ರವಾಗಿ ಖಂಡಿಸಬೇಕು. ಮಾಧ್ಯಮಗಳು ಮತ್ತು ಸಮಾಜದ ಹಿತಚಿಂತಕರೂ ಈ ಬಗ್ಗೆ ಯೋಚಿಸಬೇಕು' ಎಂದು ಪೇಜಾವರಶ್ರೀ ಖಡಕ್ಕಾಗಿ ಹೇಳಿದ್ದಾರೆ.