ಪಕ್ಷ ಕೈ ಬಿಟ್ಟರೂ ನಾನು ಕೈ ಬಿಡುವುದಿಲ್ಲ : ಬಿಎಸ್ ವೈ

ತನಗೆ ಮುಖ್ಯಮಂತ್ರಿ ಹುದ್ದೆಯನ್ನು ಮತ್ತೆ ಕೊಡುವುದಾಗಿ ಹೇಳಿ ಬಿಜೆಪಿ ಹೈಕಮಾಂಡ್ ಮೋಸ ಮಾಡಿದಾಗ, ಮನಸ್ಸಿಗೆ ತೀರಾ ಬೇಸರವಾಗಿತ್ತು. ಬಿಜೆಪಿಯನ್ನು ಬಿಟ್ಟು, ಬೆಂಬಲಿಗರ ಜತೆ ಹೊಸ ಪಕ್ಷ ಕಟ್ಟಬೇಕು ಎಂದು ನಿರ್ಧಾರ ಮಾಡಿದ್ದೆ. ಆದರೆ, ನಂತರ ಮನಸ್ಸು ಬದಲಾಯಿಸಿಬಿಟ್ಟೆ. ನಂತರ ಯಾವುದೇ ಕಾರಣಕ್ಕೂ ಬಿಜೆಪಿಯನ್ನು ತೊರೆಯಬಾರದು ಎಂದು ಗಟ್ಟಿ ನಿರ್ಧಾರ ಮಾಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಅನಂತ್ ಮೇಲೆ ಕಿಡಿ; ನಾನು ಅಧಿಕಾರದಲ್ಲಿದ್ದಾಗ ಎಂದಿಗೂ ದೆಹಲಿ ನಾಯಕರ ಮನ ಓಲೈಕೆಯಲ್ಲಿ ತೊಡಗಿರಲಿಲ್ಲ. ಆದರೆ, ಅನಂತಕುಮಾರ್ ಮತ್ತಿತರರು ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡರು. ಬಿಜೆಪಿಯಲ್ಲಿ ಬಿಕ್ಕಟ್ಟು ಸೃಷ್ಟಿಸಿ ಹೈಕಮಾಂಡ್ ನಾಯಕರಿಗೆ ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಿಬಿಟ್ಟರು.
ಹೈಕಮಾಂಡ್ ಏಕಾಏಕಿ ತೆಗೆದುಕೊಂಡ ನಿರ್ಧಾರವನ್ನು ವಿರೋಧಿಸಿ ನಾನು ಅನ್ಯಾಯವನ್ನು ಧಿಕ್ಕರಿಸಲು ನಾನು ಪಕ್ಷ ಬಿಡುವ ಮಾತಾಡಿದ್ದೆ.ಆದರೆ, ನಾನೇ ಕಟ್ಟಿ ಬೆಳಸಿದ ಬಿಜೆಪಿಯನ್ನು ಅನಾಥಮಾಡಿದ ಪಾಪ ಪ್ರಜ್ಞೆ ಕಾಡತೊಡಗಿತು. ಅದಕ್ಕಾಗಿ ನಿರ್ಧಾರ ಬದಲಾವಣೆ ಮಾಡಿಕೊಂಡೆ ಎಂದು ಬಿಎಸ್ ವೈ ಸ್ಪಷ್ಟಪಡಿಸಿದರು.
ಚುನಾವಣೆ ಗುರಿ: ಮುಂಬರುವ ಚುನಾವಣೆಯಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆದ್ದು ಬರುವ ವಿಶ್ವಾಸವಿದೆ.ಆದರೆ, ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಂಡು ಪ್ರಮುಖ ನಾಯಕರನ್ನು ಜನರ ಬಳಿಗೆ ಕಳಿಸಿದರೆ ಮಾತ್ತ ಜನರ ವಿಶ್ವಾಸ ಗಳಿಸಲು ಸಾಧ್ಯ. ಲಿಂಗಾಯತರು ಈಗ ಬೇಸರಗೊಂಡಿದ್ದಾರೆ. ಇದು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಯಿದೆ. ಪರಿಸ್ಥಿತಿ ಕೈ ಮೀರುವ ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ನ್ಯಾಯಾಲಯದ ಅನುಮತಿ ಪಡೆದು ಆಗಸ್ಟ್ 5ರಿಂದ ರಾಜ್ಯ ಪ್ರವಾಸಕೈಗೊಳ್ಳುತ್ತೇನೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡುತ್ತೇನೆ. ವಾಸ್ತವಾಂಶ ಏನಾಯಿತು. ತಾನು ಏಕೆ ಬಲಿಪಶುವಾದೆ ಎನ್ನುವುದನ್ನೂ ವಿವರಿಸುತ್ತೇನೆ.
ಆದರೆ, ಯಾವುದೇ ಕಾರಣಕ್ಕೂ ಬಿಜೆಪಿಯ ಯಾವುದೇ ನಾಯಕರ ಮೇಲೆ ಆರೋಪ ಮಾಡುವುದಿಲ್ಲ. ಬೇಕಿದ್ದರೆ ಅನಂತಕುಮಾರ್ ರಾಜ್ಯಾಧ್ಯಕ್ಷರಾಗಲಿ, ಮುಖ್ಯಮಂತ್ರಿಯಾದರೂ ಆಗಲಿ, ನಾನು ಅದರ ಬಗ್ಗೆ ಯೋಚಿಸುವುದಿಲ್ಲ. ಪಕ್ಷದ ವೇದಿಕೆಯನ್ನು ಬಳಸಿಕೊಂಡೇ ಸಾರ್ವಜನಿಕ ಸಭೆಗಳನ್ನು ಮಾಡುತ್ತೇನೆ. ಮುಂಬರುವ ಚುನಾವಣೆ ಸಂದರ್ಭದಲ್ಲಿ ತಾನು ಸೂಚಿಸಿದ ಅಭ್ಯರ್ಥಿಗೇ ಬಿಜೆಪಿ ಹೈಕಮಾಂಡ್ ಟಿಕೆಟ್ ಕೊಡಬೇಕಾಗುತ್ತದೆ. ಒಂದು ವೇಳೆ, ಅದಕ್ಕೆ ವ್ಯತಿರಿಕ್ತವಾಗಿ ನಡೆದರೆ ಪಕ್ಷವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ.
ಈಗಾಗಲೇ ಮುಂದಿನ ಚುನಾವಣೆಯಲ್ಲಿ ಗೆಲ್ಲಬಹುದಾದ ಸುಮಾರು 115 ಮಂದಿಯ ಪಟ್ಟಿಯೊಂದನ್ನು ಸಿದ್ಧಪಡಿಸಿ ಇಟ್ಟು ಕೊಂಡಿದ್ದೇನೆ. ಅವರಿಗೆ ಟಿಕೆಟ್ ಸಿಗುವುದು ನಿಶ್ಚಿತ. ಬಹುಶಃ ಇನ್ನೊಂದು ತಿಂಗಳಲ್ಲೇ ತಾನು ಕೈಗೊಂಡಿರುವ ಈ ಹೊಸ ಪ್ರಯೋಗದ ಫಲಿತಾಂಶ ಗೊತ್ತಾಗುತ್ತದೆ.
ಇನ್ನು ಮುಂದೆ ಪ್ರತ್ಯೇಕ ಕಚೇರಿ ಪ್ರಾರಂಭಿಸುವ ಪ್ರಶ್ನೆ ಇಲ್ಲ. ರಾಜ್ಯ ಬಿಜೆಪಿ ಕಚೇರಿಯಲ್ಲೇ ಹೋಗಿ ಕೂರುತ್ತೇನೆ. ಕಾರ್ಯಕರ್ತರ ಪ್ರೀತಿ ವಿಶ್ವಾಸ ನನ್ನ ಜತೆಗಿದೆ. ಅವರಿಗಾಗಿಯೇ ನಾನು ಬಿಜೆಪಿಯಲ್ಲಿ ಮುಂದುವರಿಯುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿಯೇ ದುಡಿಯುತ್ತೇನೆ ಎಂದು ಘೋಷಿಸಿದರು.












Click it and Unblock the Notifications